ಪರಿಷತ್ ಚುನಾವಣೆಗೆ ಕಾಂಗ್ರೆಸ್ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಪ್ತ ವಿನಯ್ ಕಾರ್ತಿಕ್ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಡಿಕೆ ಶಿವಕುಮಾರ್ ಹಾಜರಿದ್ದರು. ಇನ್ನು, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಕುಣಿಗಲ್ ರಂಗನಾಥ್, ಶರತ್ ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ಸಾಥ್ ಕೊಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿಗಳೂ ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಪರಿಷತ್ನ ಎರಡು ಸ್ಥಾನಗಳಿಗೆ ಲಿಂಗರಾಜ್ ಪಾಟೀಲ್, ರಘು ಕೌಟಿಲ್ಯ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಇದೇ ವೇಳೆ ರಾಜ್ಯಸಭೆ ಸ್ಥಾನಕ್ಕೆ ಪ್ರೊಫೆಸರ್ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಅಭ್ಯರ್ಥಿಗಳಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡಿದ್ದಾರೆ.

ಐದನೇ ಅಭ್ಯರ್ಥಿ ಕಣಕ್ಕಿಳಿಸಿದ ಕಾಂಗ್ರೆಸ್ಗೆ ಜೆಡಿಎಸ್, ಬಿಜೆಪಿ ಮೈತ್ರಿಕೂಟ ಕೌಂಟರ್ ಕೊಟ್ಟಿದೆ. ಗೋವಿಂದರಾಜು ಅವರನ್ನ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ವಿಧಾನಸೌಧದಲ್ಲಿ ಜೆಡಿಎಸ್ ಶಾಸಕರು, ಎಂಎಲ್ಸಿಗಳು ಸಭೆ ಮಾಡಿದ್ರು. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮಾತನಾಡಿ, ಆತ್ಮಸಾಕ್ಷಿಯ ಮತಗಳನ್ನ ನಿರೀಕ್ಷೆ ಮಾಡಿದ್ದೇನೆ. ನನಗೆ ಎರಡು ಮತಗಳು ಬೇಕು, ಕಾಂಗ್ರೆಸ್ನ ಇಬ್ಬರು ಶಾಸಕರು ಮತ ಹಾಕುವ ನಿರೀಕ್ಷೆ ಇದೆ ಎಂದಿದ್ದಾರೆ.
ಪರಿಷತ್ ಚುನಾವಣೆ ರಂಗೇರಿದ್ದು, ಮೂರು ಪಕ್ಷದಲ್ಲೂ ಕುದುರೆ ವ್ಯಾಪಾರ ನಡೆಯುವ ಶಂಕೆ ವ್ಯಕ್ತವಾಗ್ತಿದೆ. ಕಾಂಗ್ರೆಸ್ನ ಐದನೇ ಅಭ್ಯರ್ಥಿ ಗೆಲುವಿಗೆ ತೀವ್ರ ಕಸರತ್ತು ನಡೀತಿದೆ. 222 ಶಾಸಕರ ಪೈಕಿ ಕಾಂಗ್ರೆಸ್ಗೆ 138 ಶಾಸಕರ ಬಲ ಇದೆ. 62 ಮಂದಿ ಬಿಜೆಪಿ, 18 ಮಂದಿ ಜೆಡಿಎಸ್ ಶಾಸಕರಿದ್ದಾರೆ.. ಪಕ್ಷೇತರ ಸದಸ್ಯ ಜನಾರ್ದನ ರೆಡ್ಡಿ, ಶಾಸಕ ಯತ್ನಾಳ್ ಜೆಡಿಎಸ್ ಬೆಂಬಲಿಸುವ ಸಾಧ್ಯತೆ ಇದೆ. ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ. ಕಾಂಗ್ರೆಸ್ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆಲುವಿಗೆ 28 ಮತಗಳ ಅವಶ್ಯಕತೆ ಇದೆ. ವಿನಯ್ ಕಾರ್ತಿಕ್ರನ್ನ ಗೆಲ್ಲಿಸಲು ಸಿಎಂ ಡಿ.ಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ.
NDA ಮೂರನೇ ಅಭ್ಯರ್ಥಿ ಆಗಿರುವ ಗೋವಿಂದರಾಜು ಗೆಲುವಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕಸರತ್ತು ಮಾಡ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನ ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ 5ನೇ ಅಭ್ಯರ್ಥಿ ಸೋಲಿಸಿ NDA ಮೈತ್ರಿಕೂಟದ 3ನೇ ಅಭ್ಯರ್ಥಿ ಗೆಲ್ಲಿಸಿಕೊಂಡರೆ ನೂತನ ಸಿಎಂ ಡಿ.ಕೆ ಶಿವಕುಮಾರ್ಗೆ ಮುಖಭಂಗ ಮಾಡಿದಂತೆ ಆಗಲಿದೆ. ಪರಿಷತ್ ಫೈಟ್ನಲ್ಲಿ ಯಾರ ತಂತ್ರಗಾರಿಕೆ ಗೆಲುವು ಕಾಣುತ್ತೆ ಅನ್ನೋದನ್ನು ಕಾದು ನೋಡ್ಬೇಕು.


