ರಾಜ್ಯದ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ವಿಚಾರಕ್ಕೆ ಸಚಿವ ಸಂಪುಟದ ಅನುಮೋದನೆ ಕೊಟ್ಟಿತ್ತು. ಇದೀಗ ಸಾರಿಗೆ ಇಲಾಖೆ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಸೂಚನೆ ಕೊಡಲಾಗಿದೆ.

ಬಸ್ ಪಾಸ್ಗಳನ್ನು ವಿತರಿಸಲು ತಕ್ಷಣದಿಂದ ಜಾರಿಗೆ ಬರುವಂತೆ ಷರತ್ತು ಹಾಕಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಆದೇಶ ಮಾಡಿದ್ದು, ಈಗಾಗಲೇ ಹಣ ಪಾವತಿಸಿದವರ ಹಣವನ್ನು 15 ದಿನಗಳಲ್ಲಿ ವಾಪಸ್ ಮಾಡಲು ಸೂಚನೆ ಕೊಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಅಥವಾ ಸಾರಿಗೆ ಸಂಸ್ಥೆಗಳು ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಹಾಲಿ ಅನುಸರಿಸುತ್ತಿರುವ ನಿಯಮಗಳನ್ನು ಪಾಲನೆ ಮಾಡಬೇಕು. ದೂರದ ಮಿತಿ, ಪಾಸಿನ ಕಾಲಾವಧಿ ಸೇರಿದಂತೆ ನಿಯಮಗಳನ್ನು ಪಾಲನೆ ಮಾಡಿ ಪಾಸ್ ವಿತರಿಸಲು ಸೂಚನೆ ಕೊಡಲಾಗಿದೆ.

ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ನಲ್ಲಿ ಪಾಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಾಲೆಗಳು ಸೇರಿದಂತೆ ಎಲ್ಲಿಂದ ಆದರೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಬಸ್ ಪಾಸ್ಗಳ ವಿತರಣೆ ಆಗಿದ್ದರೆ, ಆ ಪಾಸ್ಗಳು ಯಥಾವತ್ತಾಗಿ ಚಾಲ್ತಿಯಲ್ಲಿರುತ್ತವೆ. ವಿದ್ಯಾರ್ಥಿಗಳು ಪಾವತಿಸಿರುವ ಮೊತ್ತವನ್ನು ಹಿಂತಿರುಗಿಸಲಾಗುವುದು. ರಾಜ್ಯದಲ್ಲಿ ವಾಸವಿದ್ದು, ನೆರ ರಾಜ್ಯಗಳ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ರಾಜ್ಯದ ಗಡಿಭಾಗದಲ್ಲಿ ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗುತ್ತಿದೆ ಎಂದು ಹೇಳಿಕೊಂಡು ವಾರ್ಷಿಕ ಪಾಸ್ ವಿತರಣೆ ಮಾಡದೆ ಡೈಲಿ ಪಾಸ್ನಲ್ಲಿ ಓಡಾಡುವಂತೆ ಮಾಡಿರುವ ಸಾರಿಗೆ ಇಲಾಖೆ, ಇದೀಗ ಪಾಸ್ಗೆ ಪಾವತಿಸುವ ಹಣವನ್ನು ವಾಪಸ್ ಮಾಡ್ತೇವೆ ಎಂದು ಸುಳ್ಳು ಹೇಳುತ್ತಿದೆ. ಜೂನ್ 1 ರಿಂದ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಮೇ 31ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಜೂನ್ 3 ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದು, ಅಂದಿನಿಂದಲೂ ಬಸ್ ಪಾಸ್ ವಿತರಣೆ ಸ್ಥಗಿತ ಮಾಡಲಾಗಿದೆ. ಇದೀಗ ಉಚಿತ ಬಸ್ ಪಾಸ್ ಹೆಸರಲ್ಲಿ 15 ದಿನಗಳ ಕಾಲ ಪಾಸ್ ಇಲ್ಲದೆ ಹಣ ಕೊಟ್ಟು ಓಡಾಡುವಂತೆ ಮಾಡಿದೆ ಎನ್ನುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.


