The Public Spot
ರಾಜ್ಯ

ರಾಜ್ಯದಲ್ಲಿ ವರುಣಾರ್ಭಟ.. ಅಲ್ಲಲ್ಲಿ ಸಮಸ್ಯೆ.. ಬರ ನೀಗಿಸುತ್ತಾ ಮಳೆ..?

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿಯುತ್ತಿರುವ ಮಳೆಗೆ ಹೆಬ್ಬೆ ಜಲಪಾತ ಹಾಲ್ನೊರೆಯಂತೆ ಮೈದುಂಬಿ ಹರಿಯುತ್ತಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪ ಇರುವ ಹೆಬ್ಬೆ ಜಲಪಾತ, ಬಂಡೆ ಕಲ್ಲುಗಳ‌ ಮೇಲೆ ಭೋರ್ಗರೆಯುತ್ತಿದೆ.

ಕಳೆದ ಒಂದು ವಾರದಿಂದ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜೀವನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಅಪಾಯಕಾರಿ ಮಟ್ಟ ಮುಟ್ಟಲು ಇನ್ನು ಕೆಲವೇ ಮೀಟರ್ ಅಂತರ ಇದೆ.

ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ. 15 ಸಾವಿರ‌ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರಿನ‌ ಹರಿವು ಇದೆ. ಬಾಗಲಕೋಟೆ ಜಿಲ್ಲೆಯ ಡವಳೇಶ್ವರ ಗ್ರಾಮದ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ. ಸೇತುವೆ ಮುಳುಗಡೆ ಆದ್ರೆ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ಜಲಾವೃತ ಆಗುವ ಆತಂಕದಲ್ಲಿ ರೈತರಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲೇ ಕಳಪೆ ಕಾಮಗಾರಿ ನಡೆದಿದ್ದು, 50 ಅಡಿ ಎತ್ತರದ 120 ಅಡಿಗಳ ಅಗಲವಾದ ತಡೆಗೋಡೆಯಲ್ಲಿ ಬಿರುಕು ಮೂಡಿದೆ. ತಡೆಗೋಡೆ ಕುಸಿಯುವ ಆತಂಕದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಇದ್ದಾರೆ.. ತಡೆಗೋಡೆ ಕೆಳಭಾಗದಲ್ಲಿ 4 ಮನೆ, 18ಕ್ಕೂ ಹೆಚ್ಚು ಅಂಗಡಿಗಳು ಇವೆ.. ತಡೆಗೋಡೆ ಕುಸಿದ್ರೆ ಮನೆ ಹಾಗೂ ಅಂಗಡಿಗಳು ಭದ್ರಾ ನದಿಯ ಪಾಲಾಗಲಿವೆ.

ಕೊಡಗಿನಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಳ ಆಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ‌ ಭರ್ತಿ ಆಗಿದ್ದು, ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿಯುತ್ತಿವೆ. ಭಾರಿ ಗಾಳಿ ಮಳೆಗೆ ಹಲವು ಗ್ರಾಮಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ.

ತಲಕಾವೇರಿ-ಭಾಗಮಂಡಲ ರಸ್ತೆಯಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿದೆ. ಸುಮಾರು 3 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಅಪಾಯದ ಸ್ಥಿತಿ ಇದ್ದು, ವಾಹನ ಸವಾರರು ಆತಂಕದಲ್ಲೇ ತೆರಳುವಂತಾಗಿದೆ. ಅಪಾಯದ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ಐಕೊಳ ಗ್ರಾಮದ ಬಳಿ ಕಾರಿನ ಮೇಲೆ ಬೃಹತ್​ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕನಿಗೆ ಗಂಭೀರ ಗಾಯ ಆಗಿದ್ದು, ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಬಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸರು ಭೇಟಿ ಕೊಟ್ಟು ಮರವನ್ನ ತೆರವು ಮಾಡಿದ್ದಾರೆ.

Related posts

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

Publicspot

ಆನೆ ದಾಳಿಗೆ ಇನ್ನೆಷ್ಟು ಬಲಿ ಬೇಕು..? ಸರ್ಕಾರಕ್ಕೆ ಯಾಕಿಲ್ಲ ಕಾಳಜಿ..?

Publicspot

Congress MLA Shock; ಮಾಲೂರು ಶಾಸಕರಿಗೆ ಎದುರಾಗುತ್ತಾ ಶಾಕ್‌..?

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ.. ಸಮಸ್ಯೆ ಆಗೋದೇ ನಮಗಲ್ಲ..!!

Publicspot

ಮಳೆ ಸಂಭ್ರಮದ ಬದಲು ಕಣ್ಣೀರು ತರಿಸಿದ್ಯಾಕೆ..? ಇನ್ನೆಷ್ಟು ದಿನ ಮಳೆ..?

Publicspot