ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದ್ರು. ವಿಶೇಷ ಪೂಜೆ ಸಲ್ಲಿಸಿದ ದಳಪತಿ ವಿಜಯ್, ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ನೇತೃತ್ವದಲ್ಲಿ ವಿಶೇಷ ಸಂಕಲ್ಪ ಮಾಡಿಕೊಂಡ ನಟ ವಿಜಯ್ಗೆ ರಕ್ಷಾ ದಾರ ಕಟ್ಟಲಾಯ್ತು. ದೇಗುಲದ ಮುಂಭಾಗದಲ್ಲಿರುವ ಧ್ವಜಸ್ಥಂಭಕ್ಕೆ ನಮಿಸಿದ ವಿಜಯ್ ದೇಗುಲ ಪ್ರವೇಶಿಸಿದ್ರು. ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಸ್ಥಳದಲ್ಲಿ ಉಪಸ್ಥಿತರಿದ್ದು, ಎಲ್ಲಾ ವ್ಯವಸ್ಥೆ ನೋಡಿಕೊಂಡರು.

ಉಡುಪಿಯ ಕೊಲ್ಲೂರು ದೇಗುಲದಲ್ಲಿ ತಮಿಳುನಾಡು ಸಿಎಂ ವಿಜಯ್, ವಿಶೇಷ ಸಂಕಲ್ಪ ಕೈಗೊಂಡಿದ್ದಾರೆ. ಇನ್ನು ದೇಗುಲದಲ್ಲಿ ಸಂಕಲ್ಪದ ಭಾಗವಾಗಿ ವಿಜಯ್ಗೆ ವಿಶೇಷ ರಕ್ಷಾ ದಾರವನ್ನ ಕಟ್ಟಲಾಯ್ತು. ಈ ಬಗ್ಗೆ ಅರ್ಜಕ ರಾಘವೇಂದ್ರ ಅಡಿಗ ಮಾತನಾಡಿ, ರಾಜಕೀಯ ರಕ್ಷಣೆಗಾಗಿ ಈ ದಾರವನ್ನ ಕಟ್ಟಲಾಗುತ್ತದೆ. ವೀರಭದ್ರನ ಸನ್ನಿಧಿಯಲ್ಲಿ 3 ಬಾರಿ ತೆಂಗಿನಕಾಯಿ ಸುತ್ತಿ ಒಡೆದಿದ್ದಾರೆ. ರಕ್ಷಣೆ ಉದ್ದೇಶಕ್ಕಾಗಿ ರಕ್ಷಾ ದಾರ ಮಾಡಲಾಗಿದೆ. ಆದರೆ ಸಂಕಲ್ಪ ಏನೆಂದು ಮಾಡಿಕೊಂಡರು ಎಂದು ವಿಜಯ್ ನಮ್ಮ ಬಳಿ ಹೇಳಲಿಲ್ಲ. ಆದರೆ ದೇವಸ್ಥಾನಕ್ಕೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಸಮರ್ಪಿಸಿದ್ದಾರೆ ಎಂದಿದ್ದಾರೆ.

ಇನ್ನು ಶಕ್ತಿ ದೇವತೆ ತಾಯಿ ಕೊಲ್ಲೂರು ಮೂಕಾಂಬಿಕೆಗೆ ತನಿಳುನಾಡು ಸಿಎಂ ವಿಜಯ್ ಬೆಳ್ಳಿಯ ಖಡ್ಗವನ್ನ ಸಮರ್ಪಿಸಿದ್ದಾರೆ. 1984ರಲ್ಲಿ ಎಂ.ಜಿ ರಾಮಚಂದ್ರನ್ ಕೊಲ್ಲೂರು ದೇವಸ್ಥಾನಕ್ಕೆ 1.5 ಕೆಜಿ ತೂಕದ ಚಿನ್ನದ ಖಡ್ಗವನ್ನು ನೀಡಿದ್ದರು. ಇದೀಗ ನಟ ವಿಜಯ್ ದೇಗುಲ ಭೇಟಿ ಸಮಯದಲ್ಲಿ MGR ನೀಡಿದ್ದ ಚಿನ್ನದ ಖಡ್ಗವನ್ನು ವೀಕ್ಷಿಸಿದ್ದಾರೆ. ಇನ್ನು ವಿಶೇಷ ಪೂಜೆ ಸಲ್ಲಿಸಿದ ವಿಜಯ್ ಸುಮಾರು 30 ನಿಮಿಷಗಳ ಕಾಲ ದೇಗುಲದಲ್ಲಿದ್ದರು. ದೇವಸ್ಥಾನದಿಂದ ಹೊರ ಬಂದ ಬಳಿಕ ತನ್ನ ಕಾರನ್ನು ಸ್ವತಃ ತಾವೇ ಚಲಾಯಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ನಿನ್ನೆ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದ ದಳಪತಿ ವಿಜಯ್, ದೆಹಲಿಯಿಂದ ನೇರವಾಗಿ ಕೊಲ್ಲೂರು ದೇಗುಲಕ್ಕೆ ಆಗಮಿಸಿದ್ರು. ದೆಹಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ವಿಜಯ್, ಅಲ್ಲಿಂದ ನೇರವಾಗಿ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಭೇಟಿ ನೀಡಿದ್ರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರ್ಕಾರದ ಪರವಾಗಿ ಸಚಿವ ಯು.ಟಿ. ಖಾದರ್ ವಿಜಯ್ ಅವರನ್ನ ಆತ್ಮೀಯವಾಗಿ ಬರಮಾಡಿಕೊಂಡರು. ಇನ್ನು ಕೊಲ್ಲೂರಲ್ಲಿ ಪೂರ್ಣ ಕುಂಭದ ಮೂಲಕ ವಿಜಯ್ ಅವರನ್ನ ಸ್ವಾಗತಿಸಲಾಯ್ತು. ಕೆಂಪು ಬಣ್ಣದ ಶಲ್ಯ ಧರಿಸಿ ವಿಜಯ್ ದೇಗುಲಕ್ಕೆ ಆಗಮಿಸಿದ್ದರು.


