ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಹವಾಮಾನ ಇಲಾಖೆ ಇಂದು 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಇಂದು ರಾಜ್ಯಾದ್ಯಂತ ಭಾರೀ ಮಳೆ ಆಗಲಿದೆ ಅಂತಾ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದೇ ರೀತಿ ಕೊಡಗು, ಹಾಸನ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು ಬಾಗಲಕೋಟೆ, ಕೊಪ್ಪಳ, ಗದಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಇನ್ನು, ಬೆಂಗಳೂರಿನಲ್ಲಿ ಜೂನ್ 11ರವರೆಗೆ ಸಾಧಾರಣ ಮಳೆ ಆಗಲಿದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಈಗಾಗಲೇ ಹಲವೆಡೆ ಮಳೆ ಅಬ್ಬರ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಆಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದೆ. ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಡಿಸಿ ದರ್ಶನ್ ಹೆಚ್.ವಿ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಅರುಣ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ.. ಮಳೆ ಆರ್ಭಟಕ್ಕೆ ಗೋಕರ್ಣದ ಮಹಾಬಲೇಶ್ವರನಿಗೇ ಜಲ ಕಂಟಕ ಎದುರಾಗಿದೆ. ದೇವಾಲಯದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮಳೆ ಹೀಗೆ ಮುಂದುವರಿದರೆ ಶಿವನ ಆತ್ಮಲಿಂಗ ಸ್ಪರ್ಶ, ದರ್ಶನ ಸ್ಥಗಿತ ಮಾಡಲಾಗುವುದು ಅಂತ ಆಡಳಿತ ಮಂಡಳಿ ತಿಳಿಸಿದೆ. ಗೋಕರ್ಣ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮಳೆ ಜೋರಾದ್ರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಪ್ಪಳದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆಗೆ ಕನಕಗಿರಿ ತಾಲೂಕಿನ ಕಲಕೇರಿಯಲ್ಲಿ ಅನೇಕ ಮಾವಿನ ತೋಟಗಳಲ್ಲಿ ಮಾವು ನೆಲಕ್ಕೆ ಉದುರಿವೆ. ಕಲಕೇರಿಯ ಈಶಪ್ಪ ಗದ್ದಿ ಎಂಬುವವರ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಾವು ಮರದಲ್ಲಿ ಹಣ್ಣಾಗಿ, ಉತ್ತಮ ಇಳುವರಿಯಿಂದ ಆದಾಯ ಬರುವ ಸಂದರ್ಭದಲ್ಲಿ ಮಳೆಯಿಂದ ಬೆಳೆ ಹಾಳಾಗಿದೆ. ಹೀಗಾಗಿ ಫಸಲು ಕಳೆದುಕೊಂಡಿರುವ ರೈತನಿಗೆ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ರಾಜದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿಯಲ್ಲಿ ಭಾರೀ ಮಳೆ ಸುರಿದಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಗೆ ಸಾಲು ಸಾಲು ಅವಾಂತರವೇ ಸೃಷ್ಟಿ ಆಗಿದೆ. ಬೈಲಹೊಂಗಲ ಪಟ್ಟಣದಲ್ಲಿ ಧಾರಾಕಾರ ಮಳೆಗೆ ರಸ್ತೆಗಳೆಲ್ಲಾ ನದಿಯಂತಾಗಿದ್ದವು. ಅಬ್ಬರದ ಮಳೆಗೆ ಬೈಕ್ಗಳು ಕೊಚ್ಚಿಕೊಂಡು ಹೋಗಿದ್ದು, ಬೈಕ್ಗಳನ್ನ ಹಿಡಿಯಲು ಸವಾರರು ಪರದಾಡಿದ್ದಾರೆ. ಬೈಲಹೊಂಗಲ ಪಟ್ಟಣದ ಇಂಚಲ ಕ್ರಾಸ್ ಬಳಿಯ ಮಳೆ ಅವಾಂತರದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ನೀರು ನದಿಯಂತೆ ಹರಿದು ಆತಂಕ ಸೃಷ್ಟಿಸಿತು.

ಮಳೆ ಬಂದಾಗ ಯಾವುದೇ ಕಾರಣಕ್ಕೂ ಮರಗಳ ಅಡಿಯಲ್ಲಿ ರಕ್ಷಣೆ ಪಡೆಯುವ ದುಸ್ಸಾಹಸ ಮಾಡಬೇಡಿ. ಗ್ರಾಮೀಣ ಭಾಗದಲ್ಲಿ ಮಳೆ ಬಂದ ಕೂಡಲೇ ಮರಗಳ ಅಡಿಯಲ್ಲಿ ಹೋಗಿ ನಿಲ್ಲುವುದು ಸರ್ವೇಸಾಮಾನ್ಯ. ಆದರೆ ಸಿಡಿಲು ಬಡಿದಾಗ ಮರಗಳಿಗೇ ಮೊದಲು ಸಿಡಿಲು ಬಡಿಯುವುದು. ಆಗ ಪಕ್ಕದಲ್ಲಿ ಮನುಷ್ಯರು ನಿಂತಿದ್ದರೆ ಸುಲಭವಾಗಿ ಮರಗಳಿಂದ ವಿದ್ಯುತ್ ಪ್ರಹರಿಸಿ ಸಾವು ಸಂಭವಿಸಬಹುದು. ಗಾಳಿ ಮಳೆ ಹೆಚ್ಚಾಗಿರುವ ಕಾರಣಕ್ಕೆ ಯಾವುದೇ ಕಟ್ಟದ ಪಕ್ಕದಲ್ಲೂ ಅದರಲ್ಲೂ ಹಳೇ ಕಟ್ಟಡದ ಪಕ್ಕದಲ್ಲೂ ರಕ್ಷಣೆ ಪಡೆಯುವ ಪ್ರಯತ್ನ ಬೇಡ.


