ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ನಿನ್ನೆದಿನ ಅಟ್ಟಹಾಸ ಮೆರೆದಿದ್ದಾನೆ. ನಿನ್ನೆ ಮಧ್ಯಾಹ್ನದವರೆಗೂ ಚೆನ್ನಾಗಿಯೇ ಇದ್ದ ಈ ಎರಡು ಆನೆಗಳು, ದುಬಾರೆಯ ಕಾವೇರಿ ನದಿಯಲ್ಲಿ ಪ್ರವಾಸಿಗರ ಜೊತೆಗೆ ಜಾಲಿ ಮಾಡುತ್ತಾ ಸ್ನಾನ ಮಾಡುತ್ತಿದ್ದವು. ನೀರಲ್ಲಿ ಚಿನ್ನಾಟ ಆಡ್ತಿದ್ದ ಸಾಕಾನೆಗಳಿಗೆ ಪ್ರವಾಸಿಗರೆಲ್ಲಾ ಸ್ನಾನ ಮಾಡಿಸ್ತಿದ್ರು. ಈ ವೇಳೆ ತಮಿಳುನಾಡು ಮೂಲದ ದಂಪತಿ ತನ್ನ ಮಗುವಿನ ಜೊತೆ ನೀರಿನಲ್ಲಿ ಆಟ ಆಡ್ತಿದ್ದರು. ಆನೆಗಳನ್ನ ನೋಡಿದವರು ಎಲ್ಲರಂತೆ ಆನೆಗಳಿಗೆ ಸ್ನಾನ ಮಾಡಿಸಲು ಹೋಗಿದ್ದರು. ಆಗ ಆನೆಗಳ ಕಾಳಗವೇ ಏರ್ಪಟ್ಟಿತ್ತು.

ಕಂಜನ್ ಆನೆ ಹಾಗೂ ಮಾರ್ತಾಂಡ ಆನೆಗಳೆರೆಡೂ ಅಕ್ಕಪಕ್ಕದಲ್ಲೇ ಇದ್ದವು. ಹೀಗಾಗಿ ಎರಡು ಆನೆಗಳಿಗೂ ಜನರು ನೀರು ಹಾಕ್ತಿದ್ದರು. ಈ ವೇಳೆ ಕಂಜನ್ ಆನೆಗೆ ಏನು ಆಯ್ತು ಅನ್ನೋದು ಗೊತ್ತಿಲ್ಲ. ಏಕಾಏಕಿ ಮಾರ್ತಾಂಡ ಆನೆ ಮೇಲೆ ಮುಗಿಬಿದ್ದಿತ್ತು. ದೈತ್ಯಾಕಾರ ಕೋರೆಗಳಿಂದ ಮಾರ್ತಾಂಡ ಆನೆಯನ್ನು ತಿವಿಯುತ್ತಿದ್ದಂತೆ ಮಾಂರ್ತಾಂಡ ಆನೆ ಉರುಳಿ ನೀರಿಗೆ ಬೀಳ್ತು. ಮಾರ್ತಾಂಡ ಆನೆನೆ ಎಡ ಭಾಗದ ತೊಡೆ, ಹೊಟ್ಟೆಗೆ ತನ್ನ ದಂತದಿಂದ ಇರಿದುಬಿಡ್ತು. ಆನೆ ಚೀರಾಡುತ್ತ ಎದ್ದು ಮುಂದಕ್ಕೆ ಹೋದರೂ ಬಿಡದ ಕಂಜನ್ ಅಟ್ಟಾಡಿಸುತ್ತಿತ್ತು. ಈ ನಡುವೆ ಆನೆ ತಳದಲ್ಲಿ ಸಿಕ್ಕಿಕೊಂಡ ಮಹಿಳೆ ಪ್ರಾಣ ಬಿಟ್ರು.

ಆನೆಗಳ ಗಲಾಟೆ ಶುರುವಾಗ್ತಿದ್ದ ಹಾಗೆ ಜಿನ್ಶು ಎಂಬ ಮಹಿಳೆ ಬ್ಯಾಲೆನ್ಸ್ ತಪ್ಪಿ ಕೆಳಕ್ಕೆ ಬಿದ್ದರು. ಆನೆಯ ಕೆಳಕ್ಕೆ ಸಿಗ್ತಿದ್ದ ಹಾಗೆ ದೈತ್ಯಾಕಾರದ ಆನೆಯ ಇಡೀ ದೇಹ ಜಿನ್ಶು ಮೇಲೆ ಬಿದ್ದಿದ್ರಿಂದ, ಆ ಹೆಣ್ಮಗಳು ಅಲ್ಲೇ ಉಸಿರು ಚೆಲ್ಲಿದ್ರು. ಮಗುವನ್ನ ಎತ್ಕೊಂಡಿದ್ದ ಗಂಡ, ಹೆಂಡತಿ ಜಿನ್ಶು ರಕ್ಷಣೆಗೆ ಹರಸಾಹಸ ಮಾಡಿದರು. ಆನೆಗಳ ಕಾಳಗ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಂಡತಿಯನ್ನು ಸೇಫ್ ಮಾಡಲು ಒದ್ದಾಡ್ತಿದ್ರು. ಆದರೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ಪತ್ನಿಯನ್ನ ಕಾಪಾಡೋದಕ್ಕೆ ಮುಂದಾದ ಜೋಯೆಲ್ ಪ್ರಯತ್ನ ಸಫಲ ಆಗಲಿಲ್ಲ. ಗಂಡ ಹಾಗೂ ಮಗಳ ಕಣ್ಮುಂದೆಯೇ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಯ್ತು.

ನನ್ನ ಪತ್ನಿಯನ್ನ ಸೇವ್ ಮಾಡಲು ಯಾರೂ ಮುಂದೆ ಬರಲಿಲ್ಲ. ಆನೆ ನನ್ನ ಮೇಲೆ, ನನ್ನ ಮಗು ಮತ್ತು ಪತ್ನಿಯ ಮೇಲೆ ಬಿತ್ತು. ನಾನು ನನ್ನ ಮಗುವನ್ನು ಎತ್ತಿಕೊಂಡು ಬಚಾವಾದೆ. ನನ್ನ ಪತ್ನಿ ಆನೆ ಕೆಳಗೆ ಸಿಲುಕಿದಳು. ನಾನು ಮಗುವನ್ನು ಹಿಡಿದುಕೊಂಡು ಪತ್ನಿಯನ್ನು ಎಳೆಯಲು ಪ್ರಯತ್ನಿಸಿದೆ. ಅಲ್ಲಿದ್ದವರು ಓಡಿ ಹೋದರು, ಯಾರೂ ಸಹಾಯಕ್ಕೆ ಬರಲಿಲ್ಲ. ಸ್ಥಳದಲ್ಲಿ ತುರ್ತು ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಇರಲಿಲ್ಲ ಎಂದು ಜೋಯೆಲ್ ಕಣ್ಣೀರು ಹಾಕಿದ್ದಾರೆ. ಶಾಸಕ ಮಂಥರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಕೊಡಗಿನ ದುಬಾರಿ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದಲ್ಲಿ ಸಿಲುಕಿ ಮಹಿಳೆ ಸಾವು ಹಿನ್ನೆಲೆ, ಎರಡು ದಿನಗಳ ಕಾಲ ದುಬಾರೆ ಆನೆ ಶಿಬಿರವನ್ನ ಬಂದ್ ಮಾಡಲಾಗಿದೆ.. ಪ್ರವಾಸಿಗರಿಗೆ ಇಂದು ಮತ್ತು ನಾಳೆ ನಿರ್ಬಂಧ ಹೇರಲಾಗಿದೆ. ಆನೆಗಳ ಜಗಳದಲ್ಲಿ ಮೃತಪಟ್ಟ ಮಹಿಳೆಗೆ ಪರಿಹಾರ ಘೋಷಣೆ ಮಾಡಲಾಗಿದ್ದು, ಅರಣ್ಯ ಇಲಾಖೆ ವತಿಯಿಂದ 20 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಶೀಘ್ರದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಇನ್ಮುಂದೆ ಈ ರೀತಿಯ ಘಟನೆ ಆಗದಂತೆ ಕ್ರಮ ತೆಗೆದುಕೊಳ್ಳುವ ಸಲುವಾಗಿ ಸಚಿವ ಈಶ್ವರ ಖಂಡ್ರೆ ಸಭೆ ನಡೆಸಲಿದ್ದಾರೆ.


