ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಅತೀ ಹೆಚ್ಚು ಅಡ್ಡಮತದಾನ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಹುಡುಕಾಟ ಶುರು ಮಾಡಿದ್ದಾರೆ. ಕಾಂಗ್ರೆಸ್ಗೆ ಗೌಪ್ಯವಾಗಿ ಮತ ಚಲಾಯಿಸಿ ಸುಮ್ಮನೆ ಆಗಿರುವ ಶಾಸಕರು, ಯಾರೆಂದು ಪತ್ತೆ ಹಚ್ಚುವ ಕಾರ್ಯ ಚುರುಕುಗೊಂಡಿದೆ. ಮತಗಟ್ಟೆ ಕೇಂದ್ರದಲ್ಲಿದ್ದ ಬಿಜೆಪಿ ಪಕ್ಷದ ಏಜೆಂಟ್, ಬಿಜೆಪಿ ಚೀಫ್ ವಿಪ್ ಆಗಿರುವ ದೊಡ್ಡನಗೌಡ ಪಾಟೀಲ್ ಜೊತೆ ಚರ್ಚೆ ಮಾಡಿ, ಶಂಕಿತ ಶಾಸಕರಿಗೂ ದೂರವಾಣಿ ಕರೆ ಮಾಡಿ ಪ್ರತಿಕ್ರಿಯೆ ಪಡೆದುಕೊಳ್ಳಲಾಗ್ತಿದೆ. ಯಾರಿಗೇ ಫೋನ್ ಮಾಡಿದಾಗಲು, ನಾನಲ್ಲ ನಾನಲ್ಲ ಎನ್ನುತ್ತಿರುವ ಶಾಸಕರ ನಡುವೆ ಅಡ್ಡ ಮತದಾನ ಮಾಡಿದವರ ಪಟ್ಟಿ ಮಾಡಲಾಗ್ತಿದೆ.

ಶಾಸಕರು ಒಂದು ವಾರದ ನಡವಳಿಕೆ ಹಾಗೂ ಯಾರು ಯಾರನ್ನು ಭೇಟಿ ಮಾಡಿದ್ರು..? ಯಾವ ರೀತಿ ನಡವಳಿಕೆ ತೋರಿಸಿದ್ರು..? ಏನೆಲ್ಲಾ ನಡವಳಿಕೆ ತೋರಿದ್ರು..? ಅನ್ನೋ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗ್ತಿದೆ. ಇಂದು ಸಂಜೆಯೊಳಗೆ ಅಡ್ಡ ಮತದಾನ ಮಾಡಿದ್ದು ಯಾರೆಂದು ಸ್ಪಷ್ಟತೆ ಪಡೆದುಕೊಂಡು ಆ ಶಾಸಕರ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ರವಾನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿದ್ದು, ಅಡ್ಡ ಮತದಾನದಿಂದ ನಮಗೆ ಬೇಸರ ಆಗಿದೆ, ನೋವಾಗಿದೆ. ಈ ಘಟನೆ ಆಗಬಾರದಿತ್ತು, ದುರಾದೃಷ್ಟವಶಾತ್ ಆಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ತೇವೆ ಎಂದಿದ್ದಾರೆ.
ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿದ್ದು ರಾಜ್ಯಾಧ್ಯಕ್ಷ ಸ್ಥಾನ ಮೇಲೆ ಪರಿಣಾಮ ಆಗುತ್ತಾ..? ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಹಣೆಬರಹದಲ್ಲಿ ಬರೆದಿರೋದನ್ನು ಯಾರೂ ತಪ್ಪಿಸಲು ಆಗಲ್ಲ. ಅದೇ ರೀತಿ ಇನ್ನೊಬ್ಬರ ಹಣೆಬರಹದಲ್ಲಿ ಬರೆದಿರೋದನ್ನು ನಾನು ತಪ್ಪಿಸಲು ಆಗಲ್ಲ. ಈ ಬೆಳವಣಿಗೆಯಿಂದ ವಿಚಲಿತನಾಗಿ ಓಡಿಹೋಗುವ ವಿಜಯೇಂದ್ರ ನಾನಲ್ಲ. ಇದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ನಾನು ಪಕ್ಷದ ಅಧ್ಯಕ್ಷ, ಯಡಿಯೂರಪ್ಪ ಅವರ ಮಗ. ಯಾರಿಗೆ ಹೇಳಬೇಕೋ ಹೇಳ್ತೇನೆ ಎಂದಿದ್ದಾರೆ. ಇನ್ನು ಸಿಎಂ ಡಿ.ಕೆ ಶಿವಕುಮಾರ್ ಚಾಣಕ್ಯ ನಡೆ ವಿಚಾರವಾಗಿ ಮಾತನಾಡಿ, ಬಹಳ ಜನ ಚಾಣಾಕ್ಯರನ್ನು ರಾಜ್ಯದ ಜನ ನೋಡಿದ್ದಾರೆ, ನಾವೂ ಕೂಡಾ ನೋಡಿದ್ದೇವೆ. ಕುದುರೆ ಓಡೋ ಟೈಮಲ್ಲಿ ಓಡುತ್ತದೆ. ಮುಗ್ಗರಿಸಿ ಬೀಳುವಾಗ ಬೀಳುತ್ತದೆ. ಇದನ್ನು ಎದುರಿಸುವ ಶಕ್ತಿ ನಮಗಿದೆ ಎಂದಿದ್ದಾರೆ.
ಈ ನಡುವೆ ಮತ್ತೊಂದು ಕಡೆ ನಾಯಕತ್ವ ಬದಲಾವಣೆ ಮಾತುಗಳು ಮುನ್ನಲೆಗೆ ಬಂದಿವೆ. ರಾಜ್ಯ ಬಿಜೆಪಿಯ ನಾಯಕತ್ವ ಸರಿಯಾಗಿಲ್ಲ. ಅದೇ ಕಾರಣಕ್ಕೆ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಪೆಟ್ಟು ಬಿದ್ದಿದೆ. ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಮುಜಗರ ಆಗದಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಿಜಯೇಂದ್ರ ಹಾಗೂ ಆರ್. ಅಶೋಕ್ ನಾಯಕತ್ವಕ್ಕೆ ಶಾಸಕರು ಕಿಂಚಿತ್ತು ಬೆಲೆ ಕೊಡುತ್ತಿಲ್ಲ. ಶಾಸಕರ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಈ ಇಬ್ಬರು ನಾಯಕರು ವೈಫಲ್ಯ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಸಿಗುವ ಮತಗಳ ಬಗ್ಗೆಯೂ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿವೆ. ಈಗಾಗಲೇ ಬಿಜೆಪಿಯಲ್ಲಿ ವಿಜಯೇಂದ್ರ ಹಾಗೂ ಅಶೋಕ್ ಬದಲಾವಣೆಗೆ ಕೂಗು ಜೋರಾಗಿತ್ತು. ಇದೀಗ ಪರಿಚತ್ ಚುನಾವಣೆಯಲ್ಲಿ ನಾಯಕತ್ವಕ್ಕೆ ತೀವ್ರ ಹಿನ್ನಡೆ ಆದ ಬೆನ್ನಲ್ಲೇ ಮತ್ತೆ ಕೂಗು ಜೋರಾಗಿದೆ.


