RSS ನೋಂದಣಿ ವಿಚಾರದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ಗೆ ಮತ್ತೆ ಪ್ರಶ್ನೆ ಮಾಡಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನಾನು ಕರ್ನಾಟಕದ ಗೃಹಮಂತ್ರಿಯಾಗಿ RSSಗೆ ಪ್ರಶ್ನೆ ಕೇಳಿದ್ದೇನೆ. ಉತ್ತರ ಕೊಡಿ. ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು. ದೇಶದ ಕಾನೂನು, ಸಂವಿಧಾನಕ್ಕೆ ಗೌರವ ಕೊಡಬೇಕು. ನನ್ನ ಪ್ರಶ್ನೆಗಳಿಗೆ ಈವರೆಗೂ ಉತ್ತರ ಕೊಟ್ಟೆ ಇಲ್ಲ. RSS ನಿಷೇಧ ಮಾಡೋ ಚರ್ಚೆಗಳಿಲ್ಲ. ನನ್ನ ಪಶ್ನೆಗೆ ಉತ್ತರ ಕೊಡಿ ಎಂದು ಕೌಂಟರ್ ಕೊಟ್ಟಿದ್ದಾರೆ. ಇನ್ನು ಮೋಹನ್ ಭಾಗ್ವತ್ ಹೇಳಿಕೆಗೆ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ನಾನು ಪತ್ರ ಬರೆದಿದ್ದು, ಜೂನ್ 13ರಂದು ಆದರೆ ನಾನು ಪೋಸ್ಟ್ ಮಾಡಿದ್ದು ಜೂನ್ 15ರಂದು ಜೂನ್ 14ರಂದೇ ಉತ್ತರ ಕೊಡುವುದು ಹೇಗೆ..? ನನ್ನ ಪತ್ರಕ್ಕೆ ಉತ್ತರ ಕೊಡಲಿ ಎಂದಿದ್ದಾರೆ.

RSS ಕುರಿತು ಮೋಹನ್ ಭಾಗ್ವತ್ಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಪ್ರಿಯಾಂಕ್ ಖರ್ಗೆಗೆ ಸಂಸದ ನಾರಾಯಣ ಸಾ ಭಾಂಡಗೆ ಪತ್ರ ಬರೆದಿದ್ದಾರೆ. ನೀವು ಬರೆದ ಪತ್ರವನ್ನು ಗಮನಕೊಟ್ಟು ಓದಿದ್ದೇನೆ. RSS ಸಂಘ ಅನೇಕ ಸಾಮಾಜಿಕ ಚಟುವಟಿಕೆ ಮೂಲಕ ದೇಶ ಸೇವೆ ಮಾಡುತ್ತಿದೆ. ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯ ಆಧಾರದ ಮೇಲೆ ಪ್ರಶ್ನೆ ಮಾಡೋದು ಸೂಕ್ತವಲ್ಲ ಎಂದಿದ್ದಾರೆ. ನಿಮ್ಮ ಪತ್ರದಿಂದ ಜನಸಾಮಾನ್ಯರಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿದೆ. ಕಾಂಗ್ರೆಸ್ ಪಕ್ಷ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿ ಪ್ರಶ್ನೆ ಮಾಡುತ್ತದೆ ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಇಂತಹ ಘಟನೆಗಳನ್ನ ಜನರು ಮರೆತಿಲ್ಲ ಎಂದಿದ್ದಾರೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಿಯಾಂಕ್ ಖರ್ಗೆಯವರು ಒಳ್ಳೆಯ ಪ್ರಶ್ನೆನೇ ಕೇಳಿದ್ದಾರೆ. ಆದರೆ ಪ್ರಿಯಾಂಕ್ ಖರ್ಗೆ ಹೊಸಬರೇನು ಅಲ್ಲ. ಕಾಂಗ್ರೆಸ್ನ ಅನೇಕ ಜನರು ಕೇಳಿರುವಂತಹ ಪ್ರಶ್ನೆಗಳು. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಾಗಿದೆ. ಆದರೂ ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದ್ದಾರೆ. ಮೋಹನ್ ಭಾಗ್ವತ್ ಉತ್ತರ ಕೊಟ್ಟಿದ್ದಾರೆ. ಇಷ್ಟಾದರೂ ಯಾಕೇ ನೀವು ಮತ್ತೆ ಪ್ರಶ್ನೆ ಮಾಡ್ತಿದ್ದೀರಾ..? ಇದನ್ನೇ ಕಾನೂನಿನ ಮೂಲಕ ಕೇಳಬೇಕಿತ್ತು. ನೀವು ಒಬ್ಬರು ಪರಿಶಿಷ್ಟ ಜಾತಿಯಿಂದ ಬಂದ ವ್ಯಕ್ತಿ. ರಾಜ್ಯದಲ್ಲಿ ದಲಿತರಿಗೆ ಅನೇಕ ರೀತಿಯ ಅನ್ಯಾಯಗಳು ಆಗ್ತಿವೆ. ಎಸ್ಸಿಪಿ ಟಿಎಸ್ಪಿ ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸುವ ತಾಕತ್ ನಿಮಗೆ ಇಲ್ವಾ..? ಎಂದು ಕಿಡಿಕಾರಿದ್ದಾರೆ.

RSS ವಿಚಾರವಾಗಿ ಮೋಹನ್ ಭಾಗ್ವತ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರಕ್ಕೆ ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರೆ, ಸಂಘದ ಶಾಖೆಗೆ ಭೇಟಿ ಮಾಡಲಿ. ಟ್ರ್ಯಾಕ್ ರೆಕಾರ್ಡ್ ನೋಡಲಿ, ಸಂಘದ ನೂರು ವರ್ಷವೇ ಇದರ ರೆಕಾರ್ಡ್. ವಿವಿಧ ಸಂಘಗಳು ಸಮಾಜಮುಖಿಯಾಗಿ ಕೆಲಸ ಮಾಡ್ತಿವೆ. ಸಂಘವನ್ನ ಬ್ಯಾನ್ ಮಾಡಿದಾಗ FIR ಹಾಕಲಿಲ್ಲ. ಚಾರ್ಜ್ ಶೀಟ್ ಕೂಡ ಹಾಕಲಿಲ್ಲ. ಆಗ ಸಂಘದ ಸಂವಿಧಾನದ ಕಾರ್ಯ ಚಟುವಟಿಕೆಗಳನ್ನು ಬರೆದು ಕೊಡುವಂತೆ ಮಾತ್ರ ಕೇಳಲಾಗಿತ್ತು. ಸ್ವಾತಂತ್ರ್ಯಕ್ಕೆ ಮುನ್ನವೂ ಸಂಘವನ್ನ ಯಾರೂ ಬ್ಯಾನ್ ಮಾಡಲಿಲ್ಲ. ಇಂದಿರಾಗಾಂಧಿ ಅವರೂ ಬ್ಯಾನ್ ಮಾಡಿರಲಿಲ್ಲ. ಬಳಿಕ ನ್ಯಾಯಾಲಯಕ್ಕೆ ಹೋದಾಗಲೂ ಇವೆಲ್ಲವೂ ಚರ್ಚೆ ಆಗಿತ್ತು. ಬಳಿಕ ಸಂಘ ಬ್ಯಾನ್ ಆದಾಗಲೂ ತೆರವು ಮಾಡಲಾಗಿತ್ತು. ಇದು ಪೊಲಿಟಿಕಲ್ ಪಾರ್ಟಿ ಅಲ್ಲ. ವಚನ, ಹಾಡು, ಅಮೃತ ವಚನ, ಶ್ಲೋಕಗಳನ್ನ ಹೇಳಿಕೊಡುತ್ತದೆ. ಕಬಡ್ಡಿ ಹೇಳಿಕೊಡುತ್ತದೆ. ಇದೆಲ್ಲವನ್ನೂ ಮಾಡುವವರು ನೋಂದಣಿ ಮಾಡಿಸಿ ಅಂತಾ ಎಲ್ಲೂ ಹೇಳಿಲ್ಲ ಎಂದಿದ್ದಾರೆ.


