ಸ್ಯಾಂಡಲ್ವುಡ್ ನಟ ಅಜಯ್ ರಾವ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸ್ವಪ್ನಾ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜರ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಅಜಯ್ ರಾವ್ ವಿರುದ್ಧ ಪತ್ನಿ ಸ್ವಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ನೀಡಿದ್ದಾರೆ ಎನ್ನಲಾಗಿದೆ. ಪತ್ನಿ ಸ್ವಪ್ನಾ ಜೊತೆಗೆ ಮಗಳು ಚರಿಷ್ಮಾ ಕೂಡ ನಟ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರಂತೆ.

ಡಿಸೆಂಬರ್ 18, 2014ರಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯ ಹುಲಿಗೆಮ್ಮ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಪ್ನಾ ರಾವ್ ಹಾಗೂ ಅಜಯ್ ರಾವ್ ಅವರು ಸರಳವಾಗಿ ಮದುವೆ ಆಗಿದ್ದರು. ಸ್ಟಾರ್ ನಟ ಆಗಿದ್ದರೂ ಹಮ್ಮು ಬಿಮ್ಮು ಅದ್ದೂರಿ ಆಡಂಬರ ಇಲ್ಲದೆ ತಾವು ಪ್ರೀತಿಸಿದ ಹುಡುಗಿಯನ್ನ ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ವಿವಾಹ ಆಗಿದ್ದರು. ಮದುವೆ ಆಗಿ 10 ವರ್ಷಗಳ ಬಳಿಕ ದೂರ ದೂರ ಆಗುವ ಸಂದರ್ಭ ಎದುರಾಗಿದೆ.
ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನ ಮಾಡಿಕೊಂಡಿದ್ದ ನಟ ಅಜಯ್ ರಾವ್, ಎಕ್ಸ್ಕ್ಯೂಸ್ ಮೀ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಂಡು ಸಕ್ಸಸ್ ಕಂಡಿದ್ದರು. ಇತ್ತೀಚಿಗೆ ಯುದ್ಧಕಾಂಡ ಅನ್ನೋ ಸಿನಿಮಾವನ್ನು ತಮ್ಮದೇ ಬ್ಯಾನರ್ನಲ್ಲಿ ಮಾಡಿದ್ದ ಸಿನಿಮಾ ಬಗ್ಗೆ ಭಾರೀ ಶ್ಲಾಘನೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಅಜಯ್ ರಾವ್ ತನ್ನ ಸಂಸಾರ ನೌಕೆಯನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.

ಕೃಷ್ಣನ್ ಮ್ಯಾರೇಜ್ ಸ್ಟೋರಿ,ಕೃಷ್ಣ ಲೀಲಾ, ಗ್ರೀನ್ ಸಿಗ್ನಲ್, ಶೋಕಿವಾಲ, ತಾಜ್ ಮಹಲ್, ರಚ್ಚು ಐ ಲವ್ ಯು ಸೇರಿದಂತೆ ಹಲವು ಸಿನಿಮಾಗಳ ಮೂಲಕ ತಮ್ಮದೆ ಅಭಿಮಾನಿ ಬಳಗ ಹೊಂದಿದ್ದಾರೆ. ಕಳೆದ ವರ್ಷ ಅಜಯ್ ರಾವ್ ಮನೆ ಕಟ್ಟಿಸಿದ್ದರು. ತಾವೇ ಖುದ್ದು ಯುದ್ದಕಾಂಡ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿದ್ದರು. ಆದ್ರೆ ಈ ನಡುವೆ ದಂಪತಿಗಳ ನಡುವೆ ಏನಾಯ್ತು ಅನ್ನೋದು ಇನ್ನೂ ಬಹಿರಂಗ ಆಗಿಲ್ಲ. ಆದರೆ ಇದೀಗ ಸಂಸಾರದಲ್ಲಿ ಬಿರುಗಾಳಿಯೇ ಬೀಸಿದೆ.

ನಟ ಅಜಯ್ ರಾವ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗೀತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದರಿಂದ ದೂರ ಇರುವಂತೆ ತಮ್ಮನ್ನು ವಿನಂತಿಸುತ್ತೇನೆ ಎಂದಿದ್ದಾರೆ. ಪ್ರತೀ ಕುಟುಂಬವು ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ ಎಂದಿದ್ದಾರೆ. ಆದರೆ ಪಬ್ಲಿಕ್ ಫಿಗರ್ ಆದವರು ತಮ್ಮ ವಿಚಾರಗಳು ಪ್ರಚಾರ ಆಗುವಾಗ ಈ ರೀತಿ ಮನವಿ ಮಾಡುವಂತಹದ್ದು ಮೆಚ್ಚುವ ವಿಚಾರವೇ ಆಗಿದೆ. ಆದರೆ ಮಾಧ್ಯಮಗಳು ಮುಚ್ಚಿಡಲು ಸಾಧ್ಯವೇ..?

ಆದರೆ ಅಜಯ್ ರಾವ್ ಬಯಸಿದಂತೆ ದಾಂಪತ್ಯದಲ್ಲಿ ಶುರುವಾಗಿರುವ ಬಿರುಗಾಳಿ ತಣಿಯಲಿ. ಈ ಪುಟ್ಟ ಸಂಸಾರದ ದೋಣಿ ಮತ್ತೆ ಅಲೆಗಳ ಹೊಡೆತದಿಂದ ತಪ್ಪಿಸಿಕೊಂಡು ಬಾಳಿನ ಪಯಣ ಮುಂದುವರಿಸಲಿ ಎಂದು THE PUBLIC SPOT. COM ಹಾರೈಸುತ್ತದೆ.


