ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಸವರಾಜ್ ರಾಯರೆಡ್ಡಿ ಹಾಗೂ ಪೊನ್ನಣ್ಣ ಕಡೆಯವರಾಗಿ ಮತದಾನ ಮಾಡುವ ಮೂಲಕ ಒಟ್ಟು 222 ಶಾಸಕರು ಮತದಾನ ಮಾಡಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟ ಆಗಲಿದ್ದು, ವಿಧಾನಸೌಧದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮತದಾನಕ್ಕೂ ಮೊದಲು ಸಮ್ಮೇಳನ ಸಭಾಂಗಣದಲ್ಲಿ ಸೇರಿದ್ದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕೂಡ ಹಾಜರಾಗಿದ್ದರು. ಆ ಬಳಿಕ ಮತದಾನ ಮಾಡಿ ಬಂದು ಸಿಎಂ ಡಿ.ಕೆ ಶಿವಕುಮಾರ್ ಜೊತೆ ಫೋಟೋ ತೆಗೆಸಿಕೊಂಡರು. ಈ ಮೂಲಕ ಬಿಜೆಪಿ ಉಚ್ಚಾಟಿತ ಶಾಸಕರು ಕಾಂಗ್ರೆಸ್ಗೆ ಮತ ಹಾಕಿದ್ದನ್ನು ಖಚಿತ ಮಾಡಿದರು.

ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ನನ್ನ ಆತ್ಮಸಾಕ್ಷಿಗೆ ಮತ ಹಾಕಿದ್ದೇನೆ. ಬಿಜೆಪಿಯವರು ಸೌಜನ್ಯಕ್ಕೂ ಕರೆ ಮಾಡಲಿಲ್ಲ. ಕಾಂಗ್ರೆಸ್ನಿಂದ ಹೈಕಮಾಂಡ್ ಆದಿಯಾಗಿ ಸಿಎಂ ಡಿ.ಕೆ ಶಿವಕುಮಾರ್ ನಮ್ಮ ಬೆಂಬಲ ಕೇಳಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಬೆಂಬಲಿಸೋದಾಗಿ ಹೇಳಿದ್ದಾರೆ. ನಿಮ್ಮ ಬೆಂಬಲ ನಮಗೆ ನಮ್ಮ ಬೆಂಬಲ ನಿಮಗೆ ಎಂದಿದ್ದಾರೆ. ಜೆಡಿಎಸ್ನವರು ನಮಗೆ ಕರೆ ಮಾಡಿಲ್ಲ ಎಂದಿದ್ದಾರೆ. ಇನ್ನೂ ಮತ್ತೋರ್ವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರವೇ ಬೇರೆ ನಮ್ಮ ವಿಚಾರವೇ ಬೇರೆ. ಎಸ್.ಟಿ ಸೋಮಶೇಖರ್ ಹಾಗೂ ನಾನು ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ ಎಂದಿದ್ದಾರೆ.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತದಾನದ ಬಳಿಕ ಮಾತನಾಡಿ, ನನ್ನ ಆತ್ಮಸಾಕ್ಷಿಗೆ ಮತ ಹಾಕಬೇಕು ಎಂದುಕೊಂಡಿದ್ದೆ. ಆದರೆ ಈಗ ಪಕ್ಷ ಯಾರಿಗೆ ಮತ ಹಾಕಿ ಅಂತಾ ಹೇಳಿದ್ಯೋ ಅದಕ್ಕೆ ನನ್ನ ಮತ ಹಾಕಿದ್ದೇನೆ ಎಂದಿದ್ದಾರೆ. ಮತದಾನಕ್ಕೂ ಮೊದಲು ಆರ್. ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಮಾತಾಡಿದ್ದಾರೆ. ಜೊತೆಗೆ ಹಲವು ಶಾಸಕರು ಕೂಡ ನನಗೆ ಕರೆ ಮಾಡಿ ಮಾತಾಡಿದ್ದಾರೆ. ಆ ಪಕ್ಷದ ಚಿಹ್ನೆಯಡಿ ನಾನು ಗೆದ್ದು ಬಂದಿದ್ದೇನೆ. ಅದರ ಪ್ರಕಾರವೇ ಮತ ಹಾಕಿದ್ದೇನೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ ಪಕ್ಷದಿಂದ ಐದನೇ ಅಭ್ಯರ್ಥಿ ಹೆಚ್ಚುವರಿ ಇದ್ದಾರೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಎಲ್ಲರೂ ಚರ್ಚೆ ಮಾಡಿ ಐದನೇ ಅಭ್ಯರ್ಥಿ ಹಾಕಿದ್ದಾರೆ. ಐದನೇ ಅಭ್ಯರ್ಥಿ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ. ಸೆಕೆಂಡ್ ಪ್ರಿಫರೆನ್ಸ್ ವೋಟ್ನಲ್ಲಾದರೂ ನಾವು ಗೆಲ್ತೇವೆ. ಬೇರೆ ಪಕ್ಷದವರಿಗೆ ಇನ್ನೂ ಕಡಿಮೆ ಆಗಲಿದೆ. ಕಾಂಗ್ರೆಸ್ನಿಂದ ಐದಕ್ಕೆ ಐದೂ ಅಭ್ಯರ್ಥಿ ಗೆಲ್ತಾರೆ ಎಂದಿದ್ದಾರೆ. ಅನಾರೋಗ್ಯದ ನಡುವೆಯೂ ವೀಲ್ ಚೇರ್ನಲ್ಲಿ ಬಂದು ಕಾಂಗ್ರೆಸ್ ಶಾಸಕ ರಾಜುಕಾಗೆ ಮತ ಹಾಕಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಕೂಡ ಆಸ್ಪತ್ರೆಯಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮತದಾನದಲ್ಲಿ ಭಾಗಿಯಾಗಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.


