ನೇಪಾಳದಲ್ಲಿ ಅಲ್ಲೋಲ ಕಲ್ಲೋಕ ಸೃಷ್ಟಿಯಾಗಿದೆ. ನೇಪಾಳದಲ್ಲಿ ಪ್ರಧಾನಿ K.P ಶರ್ಮಾ ಓಲಿ ರಾಜೀನಾಮೆ ನೀಡಿದ್ದು, ದೇಶದಿಂದ ಪಲಾಯನ ಮಾಡಿದ್ದಾರೆ ಅನ್ನೋ ವರದಿ ಬರ್ತಿದೆ. ಈ ನಡುವೆ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೆ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ಮಾಡಿದ್ದಾರೆ. ಮಾಜಿ ಪ್ರಧಾನಿಗೆ ಹಿಡಿದು ಥಳಿಸಿದ್ದಾರೆ. ಮಾಜಿ ಪ್ರಧಾನಿ ಖಾನಲ್ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಅವರಿಗೂ ಮನಸೋ ಇಚ್ಛೆ ಥಳಿಸಿದ್ದಾರೆ. ಜೀವಂತವಾಗಿ ಬೆಂಕಿ ಹೆಚ್ಚಿದ್ದಾರೆ. ತಕ್ಷಣವೇ ಕೀರ್ತಿಪುರ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೇ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಪತ್ನಿ ಜೀವ ಹೋಗಿದೆ.
ಹಣಕಾಸು ಸಚಿವರ ಮೇಲೂ ಡೆಡ್ಲಿ ದಾಳಿ

ನೇಪಾಳದ ಹಾಲಿ ಕೇಂದ್ರ ಹಣಕಾಸು ಸಚಿವ ಬಿಷ್ಣು ಪೌಡೆಲ್ರನ್ನ ರಸ್ತೆಯಲ್ಲಿ ಅಟ್ಟಾಡಿಸಿ ಹಿಂಸೆ ಕೊಟ್ಟಿದ್ದಾರೆ. ಕಾಲಲ್ಲಿ ಬೇಕಾಬಿಟ್ಟಿ ಒದ್ದು ಬೀಳಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹಣಕಾಸು ಸಚಿವರು ಓಡಿ ಹೋದರೂ ಬೆನ್ನತ್ತಿ ಹಿಡಿದ ಪ್ರತಿಭಟನಾಕಾರರು, ಹಣಕಾಸು ಸಚಿವರ ಬಟ್ಟೆ ಬಿಚ್ಚಿ ಅರೆಬೆತ್ತಲೆ ಮಾಡಿ ಎಳ್ಕೊಂಡ್ ಹೊಡೆದಿದ್ದಾರೆ. ಅಷ್ಟಕ್ಕೆ ಅವರ ಕೋಪ ಕಡಿಮೆ ಆಗಿಲ್ಲ. ಹರಿಯೋ ನದಿಗೆ ಮಂತ್ರಿಯನ್ನ ತಳ್ಳಿ, ಹೀನಾಯವಾಗಿ ಥಳಿಸಿದ್ದಾರೆ. ನದಿಯೊಳಗೆ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅವಕಾಶ ನೀಡದೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ನೇಪಾಳ ಪ್ರಧಾನಿ ಓಲಿ ಮನೆ ನಾಶ

ನೇಪಾಳದ ಪ್ರಧಾನಮಂತ್ರಿ ಆಗಿದ್ದ ಕೆ.ಪಿ. ಶರ್ಮಾ ಓಲಿ ಅವರ ಮನೆಗೆ ಬೆಂಕಿ ಹಾಕಲಾಗಿದೆ. ದೇಶದ ಪ್ರಧಾನಮಂತ್ರಿ ಮನೆಗೆ ಬೆಂಕಿ ಇಟ್ಟು ಧ್ವಂಸ ಮಾಡಲಾಗಿದೆ. ಪ್ರಧಾನಿ ಮನೆಗೆ ಭದ್ರತೆ ಹಾಕಿದ್ದ ಭದ್ರತಾ ವಾಹನಗಳನ್ನೂ ಸುಟ್ಟು ಹಾಕಿದ್ದಾರೆ. ಆ ಬಳಿಕ ಪ್ರಧಾನ ಮಂತ್ರಿ ಮನೆಯನ್ನೇ ಲೂಟಿ ಮಾಡಿ ಬೆಂಕಿ ಹಚ್ಚಿ ಕಿಡಿಗೇಡಿಗಳು ಡ್ಯಾನ್ಸ್ ಮಾಡಿದ್ದಾರೆ. ನೇಪಾಳ ಸರ್ಕಾರದ ಕಚೇರಿಯನ್ನೇ ಸುಟ್ಟು ಹಾಕಲಾಗಿದೆ. ನೇಪಾಳ ಸಂಸತ್ ಭವನಕ್ಕೂ ಬೆಂಕಿ ಹಚ್ಚಿ ಸರ್ವನಾಶ ಮಾಡಲಾಗಿದೆ. ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಮನೆಯ ಮೇಲೆ ಜನರಲ್ ಝಡ್ ಪ್ರತಿಭಟನಾಕಾರರು ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ.

ನೇಪಾಳ ವಾರ್ತಾ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಅವರ ಮನೆಗೆ ಬೆಂಕಿ ಹಚ್ಚಿ ಎಲ್ಲವನ್ನೂ ಭಸ್ಮ ಮಾಡಿದ್ದಾರೆ. ಕಠ್ಮಂಡುವಿನಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಚೇರಿಯನ್ನು ಸುಟ್ಟು ಹಾಕಲಾಗಿದೆ. ನೇಪಾಳ ಸಂಸತ್ ಭವನವನ್ನೇ ಕಠ್ಮಂಡುವಿನಲ್ಲಿ ಸಾವಿರಾರು ಯುವ ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ. ಸಿಕ್ಕಸಿಕ್ಕಲ್ಲಿ ಬೆಂಕಿ ಇಟ್ಟಿದ್ದಾರೆ. ರಸ್ತೆಗಳನ್ನೇ ಬಂದ್ ಮಾಡಿ ಸೈನಿಕರನ್ನ ತಡೆಯುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕೊಂಡು, ಹೆಲ್ಮೆಟ್ ಹಾಕೊಂಡು ದಾಂಧಲೆ ಎಬ್ಬಿಸ್ತಿದ್ದಾರೆ. ಸೈನಿಕರನ್ನ ತಡೆದು, ವಾಹನಗಳನ್ನ ಅಡ್ಡಗಟ್ಟಿ ಪ್ರತಿಭಟನಾ ಸ್ಥಳಕ್ಕೆ ಬಾರದಂತೆ ವಾಪಸ್ ಕಳಿಸದ್ದಾರೆ.. ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಿದ್ದು, ಪೊಲೀಸರೇ ದಿಕ್ಕೆಟ್ಟು ಓಡುವಂತಾಗಿದೆ.

ನೇಪಾಳ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಜನರಲ್ ಝಡ್ ಸಂಘಟನೆ ಸದಸ್ಯರು ಸಣ್ಣ ಪ್ರಮಾಣದಲ್ಲಿ ಹೋರಾಟ ಶುರು ಮಾಡಿದ್ದರು. ಪ್ರತಿಭಟನೆ ದೊಡ್ಡದಾಗ್ತಿದ್ದಂತೆ ನೇಪಾಳ ಸರ್ಕಾರ 4 ದಿನಗಳ ಹಿಂದೆ ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಮಾಡಿತ್ತು. ಸೋಷಿಯಲ್ ಮೀಡಿಯಾಗಳನ್ನ ಬ್ಯಾನ್ ಮಾಡಿದ್ದಕ್ಕೆ ಇಡೀ ನೇಪಾಳದಲ್ಲೇ ದಂಗೆ ಶುರುವಾಯ್ತು.. ಹಿಂಸಾಚಾರಕ್ಕೆ ತಿರುಗಿದಾಗ ನೇಪಾಳ ಸೇನೆ ಕಂಡಲ್ಲಿ ಗುಂಡಿಟ್ಟು 19 ಜನರನ್ನ ಬಲಿಪಡೆದಿತ್ತು. ಇದ್ರಿಂದ ಮತ್ತಷ್ಟು ಕೆರಳಿದ ನೇಪಾಳದ ಯುವಕರು ನೇಪಾಳ ಸರ್ಕಾರದ ಪ್ರಭಾವಿ ಮಂತ್ರಿಗಳ ಮನೆಯನ್ನೇ ಸರ್ವನಾಶ ಮಾಡಿದ್ದಾರೆ.


