ಬಾಗಲಕೋಟೆ: ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೊಮ್ಮೆ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬಾಗಲಕೋಟೆಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಾತನಾಡಿ, ಎಂಥಹ ಪ್ರಸಂಗದಲ್ಲೂ ವೀರಶೈವ ಹಾಗೂ ಲಿಂಗಾಯತ ಒಂದಾಗೋಕೆ ಸಾಧ್ಯವಿಲ್ಲ ಎಂದಿದ್ದಾರೆ. ನಾವು ಈಗಾಗಲೇ ಲಿಂಗಾಯತ ಅಭಿಯಾನ ಪ್ರಾರಂಭ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಲಿಂಗಾಯತ ಧರ್ಮ ವ್ಯಾಪಕ ಪ್ರಚಾರ ಆಗಬೇಕೆಂಬ ಉದ್ದೇಶ ಹೊಂದಿದ್ದೇವೆ. ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ನಾವು ಕೆಲಸ ಮಾಡುತ್ತಿದ್ದೇವೆ. ವೀರಶೈವ ಹಾಗೂ ಲಿಂಗಾಯತ ಎಂತಹ ಪ್ರಸಂಗದಲ್ಲೂ ಒಂದಾಗಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಒಂದು ಕಡೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಒಂದೇ ಎಂದು ಬರೆಯಿಸಿ ಅಂದ್ರೆ ಮತ್ತೊಂದು ಕಡೆ ಲಿಂಗಾಯತ ಅಷ್ಟೇ ಬರೆಯಿಸಿ ಎಂಬ ಚರ್ಚೆಗಳು ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಮಾತೆ ಗಂಗಾದೇವಿ, ಅದು ಎಂದಿನಿಂದಲೂ ಪ್ರಾರಂಭ ಆಗಿದೆ. 1991ರಲ್ಲಿ ಮಾತೆ ಮಹಾದೇವಿಯವರು ಪ್ರಾರಂಭ ಮಾಡಿದ್ರು. ನಾವೆಲ್ಲ ಹಳ್ಳಿ, ಪಟ್ಟಣಗಳಲ್ಲಿ ಪ್ರಚಾರ ಮಾಡುತ್ತಲೇ ಬಂದಿದ್ದೇವೆ. ಆದ್ರೆ ಈಗ ಕಾಲ ಅದಕ್ಕೆ ಕೂಡಿ ಬಂದಿದೆ. ಇದು ಲಿಂಗಾಯತ ಸ್ವತಂತ್ರ, ಪರಿಪೂರ್ಣ ಧರ್ಮ. ಲಿಂಗಾಯತ ಧರ್ಮ ಎಂದೂ ವೀರಶೈವ ಧರ್ಮ ಆಗಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಮಾತೆ ಗಂಗಾದೇವಿ.

ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಆಗಿರುವ ಮಾತೆ ಗಂಗಾದೇವಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿ, ಕೆಲವು ಲಿಂಗಾಯತ ಸ್ವಾಮೀಜಿಗಳು ಲಿಂಗಾಯತ ಧರ್ಮ ಒಪ್ಪಲ್ಲ ಎಂಬ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. ಬಸವಣ್ಣನವರೇ ನಮ್ಮ ಧರ್ಮ ಗುರುಗಳು, ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ ಒಪ್ಪುವರೆಲ್ಲರೂ ಒಂದಾಗಿದ್ದೇವೆ. ಎಂದಿನಿಂದಲೂ ನಾವು ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡ್ತಿದ್ದೀವಿ.ನಾವು ಲಿಂಗಾಯತ ಧರ್ಮವನ್ನೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದಿದ್ದಾರೆ. ನಾವು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡ್ತೀವಿ. ನಾವು ಇರೋವರೆಗೂ ಹೋರಾಟ ಮಾಡ್ತೀವಿ ಎಂದಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದ ಸಿಎಂ ಸಿದ್ದರಾಮಯ್ಯ 2018 ರಲ್ಲಿ ಸೋಲುಂಡು ಅಧಿಕಾರ ಕಳೆದುಕೊಳ್ಳುವಂತಾಗಿತ್ತು. ಆದರೆ ಈ ಬಾರಿ ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದ ಜನಗಣತಿ ಹಾಗೂ ಜಾತಿ ಜನಗಣತಿ ನಡೆಯಲಿದೆ. ಆ ಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಸೂಚನೆ ಕೊಡಲಾಗಿದೆ. ಅಂದರೆ ಈ ಮೂಲಕ ಕೇಂದ್ರ ಸರ್ಕಾರದ ಜಾತಿಗಣತಿಯಲ್ಲಿ ಲಿಂಗಾಯತ ಧರ್ಮವನ್ನು ಉಲ್ಲೇಖಿಸಿ ಅಧಿಕೃತ ಧರ್ಮವಾಗಿ ಹೊರಹೊಮ್ಮುವ ಲೆಕ್ಕಾಚಾರ ಮಾಡಲಾಗಿದೆ.

ಕಳೆದ ಬಾರಿ ವೀರಶೈವರು ಮಧ್ಯ ಪ್ರವೇಶ ಮಾಡಿ ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ. ನಾನು ಪ್ರತ್ಯೇಕ ಧರ್ಮವಲ್ಲ, ನಾವು ಹಿಂದೂಗಳು ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಯಾಗಿತ್ತು. ಅದೇ ಕಾರಣಕ್ಕೆ ಈ ಬಾರಿ ವೀರಶೈವರನ್ನು ಪ್ರತ್ಯೇಕ ಧರ್ಮ ವಿಚಾರದಿಂದ ದೂರ ಇಡಲಾಗಿದೆ. ಶಾಮನೂರು ಶಿವಶಂಕರಪ್ಪ ಈ ಲಿಂಗಾಯತ ಧರ್ಮದ ಬಗ್ಗೆ ಏನು ಹೇಳ್ತಾರೆ ಅನ್ನೋ ಬಗ್ಗೆ ಕಾದು ನೋಡಬೇಕಿದೆ. ಆದರೆ ಈ ಬಾರಿ ಲಿಂಗಾಯತ ಧರ್ಮ ಎಂದು ಬರೆಸಿ, ನಾವು ಪ್ರತ್ಯೇಕ ಎಂದು ಬರೆಸಲಾಗುತ್ತದೆ ಅನ್ನೋದು ಸತ್ಯ.


