ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಬಿಲ್, ಆ ಬಳಿಕ ಟ್ರೀಟ್ಮೆಂಟ್ ಅನ್ನೋ ನಿಯಮಕ್ಕೆ ರಾಜ್ಯ ಸರ್ಕಾರ ಹೊಸ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ, ಹೊಸ ರೂಲ್ಸ್ ಜಾರಿ ಮಾಡಲು ಮುಂದಾಗಿರುವ ಆರೋಗ್ಯ ಇಲಾಖೆ. ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಅನ್ನೋ ಸೂತ್ರ ಅಳವಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಹಣ ಕಟ್ಟುವುದು ತಡವಾಯ್ತು ಅನ್ನೋ ಕಾರಣಕ್ಕೆ ಚಿಕಿತ್ಸೆ ತಡವಾಗಬಾರದು. ಒಂದು ವೇಳೆ ಚಿಕಿತ್ಸೆಗೆ ಅಗತ್ಯವಿದ್ದರೂ ಹಣ ಕಟ್ಟಿಲ್ಲ ಅನ್ನೋ ಕಾರಣಕ್ಕೆ ಚಿಕಿತ್ಸೆಯನ್ನು ನಿರಾಕರಣೆ ಮಾಡುವಂತಿಲ್ಲ ಅನ್ನೋ ಸಂದೇಶ ಕೊಡಲಾಗಿದೆ.

ವೈದ್ಯರನ್ನು ಯಾವಾಗಲೂ ಭಗವಂತನ ರೂಪ ಎಂದೇ ನಂಬುತ್ತಾರೆ. ವೈದ್ಯರು ನಮ್ಮ ಪ್ರಾಣ ಉಳಿಸ್ತಾರೆ ಅಂತಾ ಜನ ನಂಬಿರ್ತಾರೆ. ಜನರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಬದಲು ಉತ್ತಮ ಸೇವೆಯ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಾರೆ. ಇದನ್ನೆ ಬಂಡವಾಳ ಮಾಡ್ಕೊಳ್ಳುವ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೂ ಮೊದಲೇ ಹಣ ಕಟ್ಟಬೇಕು ಅಂತಾ ಡಿಮ್ಯಾಂಡ್ ಮಾಡುವುದು ಉಂಟು. ಮೊದಲಿಗೆ ಹಣ ಕಟ್ಟಿಲ್ಲ ಅಂದ್ರೆ ಪ್ರಾಣ ಹೋಗ್ತಿದ್ರೂ ವೈದ್ಯರು ಚಿಕಿತ್ಸೆ ಕೊಡದ ನಿರ್ಲಕ್ಷ್ಯ ಮಾಡುವುದು ಸಾಕಷ್ಟು ಕಡೆಗಳಲ್ಲಿ ನಡೆದಿದೆ. ಇದನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ.

ಹಣದಾಸೆಗಾಗಿ ಜನರ ಬಳಿ ಬಿಲ್ ವಸೂಲಿ ಮಾಡ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ. ಆರೋಗ್ಯ ಇಲಾಖೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳಿಗೆ ಶಾಕ್ ಕೊಟ್ಟಿದೆ. ಇದಕ್ಕಾಗಿಯೇ ಹೊಸ ಕಾನೂನು ರಚಿಸಿದೆ ಆರೋಗ್ಯ ಇಲಾಖೆ. ಇನ್ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೇ ಮೊದಲ ಆದ್ಯತೆ ಆಗಿರಬೇಕು. ಆನಂತರವೇ ದುಡ್ಡು ಕಟ್ಟಿಸಿಕೊಳ್ಳಬೇಕು ಅಂತಾ ನಿಯಮ ತಂದಿದೆ. ಅಪಘಾತಕ್ಕೆ ಈಡಾದವರಿಗೆ ಮೊದಲು ಚಿಕಿತ್ಸೆ ನೀಡಬೇಕು. ತುರ್ತು ಚಿಕಿತ್ಸೆ ಇದ್ರೆ ಮೊದಲು ಅಡ್ಮಿಷನ್ ಮಾಡಿಕೊಳ್ಳಬೇಕು. ಚಿಕಿತ್ಸೆ ನೀಡಬೇಕು. ರೋಗಿಗಳ ಬಳಿ ಯಾವುದೇ ಮುಂಗಡ ಹಣವನ್ನ ಕೇಳುವಂತಿಲ್ಲ. ಚಿಕಿತ್ಸೆಗೂ ಮೊದಲೇ ಹಣವನ್ನ ಕೇಳಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸರ್ಕಾರ ಹೊಸ ಕಾನೂನಿನಲ್ಲಿ ಸೇರ್ಪಡೆ ಮಾಡಲು ಮುಂದಾಗಿದೆ. ಈ ಮೂಲಕ ಜನರಿಗೆ ತುರ್ತು ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಪ್ರಾಣ ಉಳಿಸುವ ಕಾರ್ಯ ಮಾಡಲು ಸರ್ಕಾರ ಮುಂದಾಗಿದೆ. ಆರೋಗ್ಯ ಇಲಾಖೆಯ ಈ ಹೊಸ ರೂಲ್ಸ್ ಅನ್ನು ಸಿಲಿಕಾನ್ ಸಿಟಿ ಜನರು ಸ್ವಾಗತಿಸಿದ್ದಾರೆ. ಇದ್ರಿಂದ ಬಹಳ ಅನುಕೂಲವಾಗುತ್ತೆ. ಕೆಲವೊಮ್ಮೆ ತುರ್ತು ಸಮಯದಲ್ಲಿ ಹಣ ಸಿಗೋದಿಲ್ಲ. ಮೊದಲು ಚಿಕಿತ್ಸೆ ನೀಡಿದ್ರೆ ಆಪತ್ಕಾಲದಲ್ಲಿ ಉತ್ತಮ ಅಂತಿದ್ದಾರೆ ಜನ. ಖಾಸಗಿ ಆಸ್ಪತ್ರೆಗಳ ಹಣದಾಹಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಆದರೆ ಒಂದು ವೇಳೆ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆ ಬಿಲ್ ಪಾವತಿ ಮಾಡದೆ ಇದ್ದರೆ ಸರ್ಕಾರ ಮಾಡುತ್ತೋ..? ಅಥವಾ ಒಂದು ವೇಳೆ ಆಸ್ಪತ್ರೆ ಬಿಲ್ ಪೇ ಮಾಡದೆ ಇದ್ದರೆ ಏನು ಮಾಡುವುದು ಅನ್ನೋ ಬಗ್ಗೆ ಸರ್ಕಾರವೇ ಸ್ಪಷ್ಟನೆ ನೀಡಬೇಕಿದೆ.


