ಬಿಗ್ಬಾಸ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಬಿಗ್ಬಾಸ್ಗೆ ರಾತ್ರೋರಾತ್ರಿ ಅನುಮತಿ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳೂ ಕೇಳಿ ಬಂದಿವೆ. ಬಿಗ್ಬಾಸ್ ಕಾರ್ಯಕ್ರಮವನ್ನು ಸ್ಥಗಿತ ಮಾಡಿದ್ದೇ ಸರಿಯಲ್ಲ, ಆ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆ ಎಂದ ಮೇಲೆ ಅನುಮತಿ ಕೊಟ್ಟಿದ್ದು ಯಾಕೆ..? ಅನ್ನೋ ಪ್ರಶ್ನೆ ಎದ್ದಿದೆ. ಇದೆಲ್ಲಾ ಡಿ.ಕೆ ಶಿವಕುಮಾರ್ ರಾಜಕೀಯ ದುರುದ್ದೇಶ ಅಷ್ಟೇ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಮಾತನಾಡಿಕೊಳ್ತಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಒಂದಿಷ್ಟು ಪ್ರಕ್ರಿಯೆ ಇದೆ. ಯಾವ ಕಲಾವಿದರ ಮೇಲೆ ದ್ವೇಷದ ರಾಜಕಾರಣ ಮಾಡಲ್ಲ. ಕಾಂಗ್ರೆಸ್ನಲ್ಲಿ ಯಾರೂ ಕೂಡ ಆ ರೀತಿ ಮಾಡಲ್ಲ. ದ್ವೇಷ ಮತ್ತೊಂದು ಮಾಡೋಕೆ ಆಗಲ್ಲ. ಕಾನೂನಲ್ಲಿ ಏನು ಅವಕಾಶ ಇದೆ ಆ ರೀತಿ ಮಾಡಲಾಗುತ್ತದೆ. ಬಿಜೆಪಿಯವರು ದ್ವೇಷ ಮಾಡೋ ಕೆಲಸ ಮಾಡುತ್ತಾರೆ. ನಟ ಸುದೀಪ್ ಟಾರ್ಗೆಟ್ ಮಾಡೋದಕ್ಕೆ ಏನಿದೆ..? ಡಿಸಿಗೂ ಸುದೀಪ್ ಅವರಿಗೂ ಏನಾದರೂ ಸಂಬಂಧ ಇದ್ಯಾ..? ಎಂದಿದ್ದಾರೆ. ಆದರೆ ಡಿಸಿಎಂ ಈ ಹಿಂದೆ ನಟ್ಟು ಬೋಲ್ಟ್ ಟೈಟ್ ಮಾಡ್ತೇನೆ ಎಂದಿದ್ದ ಮಾತನ್ನು ಮರೆತಂತೆ ಕಾಣಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಮಾತನಾಡಿ, ಬಿಗ್ ಬಾಸ್ ಸ್ಟುಡಿಯೋ ಓಪನ್ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ. ನಾನು ನಿನ್ನೆಯೇ ಸ್ಪಷ್ಟ ಪಡಿಸಿದ್ದೇನೆ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಬಿಗ್ ಬಾಸ್ಗೂ ಯಾವುದೇ ಸಂಬಂಧ ಇಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ. ಅದು ಬಿಟ್ಟು ಬೇರೆ ಯಾವುದೇ ವಿಚಾರ ಇಲ್ಲ. ನಾನೇನು ಆದೇಶ ಮಾಡಬೇಕಾಗಿದೆಯೋ ಮಾಡಿ ಆಗಿದೆ. ಅದನ್ನ ಬಿಟ್ಟು ಬೇರೆ ಏನೂ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಲ್ಲೂ ಸ್ಪಷ್ವವಾಗಿದೆ. ನಾವು ಎಲ್ಲೂ ಕೂಡ ಬಿಗ್ ಬಾಸ್ ಗೆ ವಿರೋಧ ಇಲ್ಲ. ಹತ್ತಾರು ಬಾರಿ ನಾನು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೀವಿ. ನಿಮ್ಮ ಉಪ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲ್ಲ ಎಂದಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಜಾಲಿವುಡ್ ಸಂಸ್ಥೆ ಮನವಿ ಮಾಡಿದ ಕಾರಣಕ್ಕೆ ಅವಕಾಶ ಕೊಟ್ಟಿದ್ದೇವೆ. ಬಿಗ್ ಬಾಸ್ ಶೋಗೆ ತೊಂದರೆ ಆಗಬಾರದು. ಹದಿನೈದು ದಿನದಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಜಲ ಕಾಯ್ದೆ ಮತ್ತು ವಾಯು ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ. ಯಾವುದೇ ರಾಜಕೀಯ ಇದರಲ್ಲಿ ಬೆರತಿಲ್ಲ ಎಂದಿದ್ದಾರೆ. ಡಿ.ಕೆ ಶಿವಕುಮಾರ್ ಹೇಳಿಯನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಉಸ್ತುವಾರಿ ಸಚಿವರು ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ವಿರೋಧಿಸುವ ಜೊತೆಗೆ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತ್ರ, ಬಿಗ್ ಬಾಸ್ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರ. ರಾಮಲಿಂಗಾ ರೆಡ್ಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಮಿನಿಸ್ಟರ್ ಆದರೂ, ಎಲ್ಲವೂ ನಡೆಯೋದು ಡಿಸಿಎಂ ಡಿ.ಕೆ ಶಿವಕುಮಾರ್ ಮಾತಿನಂತೆ ಎನ್ನುವಂತಾಗಿದೆ. ಕೇವಲ ಹೆಸರಿಗಷ್ಟೇ ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವರಾದ್ರಾ..? ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್ ನಡೆಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ಗೆ ಅನುಮತಿ ಕೊಟ್ಟಿದ್ದನ್ನು ಸಚಿವ ರಾಮಲಿಂಗಾರೆಡ್ಡಿ ತೀವ್ರವಾಗಿ ವಿರೋಧಿಸಿದ್ದಾರೆ. ಅನುಮತಿ ಕೊಡಿಸಬಾರದಿತ್ತು ಎಂದು ಪರೋಕ್ಷವಾಗಿ ಡಿಸಿಎಂ ಡಿಕೆಶಿ ವಿರುದ್ಧ ಬೇಸರ ಹೊರಹಾಕಿದ್ದಾರೆ.


