ಇಂದು ಸಹ KSRTC ಬಸ್ ನಿಲ್ದಾಣದಲ್ಲಿ ಜನಜಾತ್ರೆಯೇ ಆಗಿದೆ. ಕಾಲಿಡಲು ಜಾಗವಿಲ್ಲದಷ್ಟು ಜನ ಫ್ಲಾಟ್ ಫಾರಂಗಳಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಸ್ಗಳೆಲ್ಲಾ ಪ್ರಯಾಣಿಕರಿಂದ ಪುಲ್ ರಷ್ ಆಗಿವೆ. ರೈಲು ಸಿಗ್ತಿಲ್ಲ, ಈ ಕಡೆ ಬಸ್ ಕೂಡ ಸಿಗ್ತಿಲ್ಲ. ಸೀಟ್ ಸಿಗ್ತಿಲ್ಲ ಅಂತಾ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. KSRTC ಯಿಂದ 2500 ಹೆಚ್ಚುವರಿ ಬಸ್ ಬಿಡಲಾಗಿದೆ. BMTCಯಿಂದ 500ಕ್ಕೂ ಹೆಚ್ಚು ಬಸ್ ನಿಯೋಜನೆ ಮಾಡಲಾಗಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಾಸನಾಂಬೆ, ಧರ್ಮಸ್ಥಳ ಬಸ್ಗಾಗಿ ಜನರು ಮುಗಿಬಿದ್ದಿದ್ದಾರೆ. ಸೀಟಿಗಾಗಿ ಪರದಾಟ, ನೂಕಾಟ, ತಳ್ಳಾಟ ನಡೆಯುತ್ತಿದೆ. ಬಸ್ ಬಂದ ಕೂಡಲೇ ಸೀಟು ಹಿಡಿಯಲು ಜನ ಹರಸಾಹಸ ಮಾಡ್ತಿದ್ದಾರೆ.
ಬಸ್ ಹತ್ತುವುದಕ್ಕೆ ಮೂರ್ನಾಲ್ಕು ಗಂಟೆಗಳು ಕಾದ್ರೂ ಬಸ್ ಸಿಗ್ತಿಲ್ಲ. ಬಸ್ನಲ್ಲಿ ಸೀಟ್ ಕೊಡಿಸಿ ಸರ್ ಎಂದು ಮಹಿಳೆಯರು ಬಸ್ ನಿಲ್ದಾಣದಲ್ಲಿ ಮನವಿ ಮಾಡುತ್ತಿದ್ದಾರೆ. ಹಾಸನಕ್ಕೆ ಬಸ್ ಬರ್ತಿಲ್ವಲ್ಲ, ನಾವು ಹಾಸನಾಂಬೆ ಹೋಗಬಾರದಾ..? ಎಂದು ಪ್ರಶ್ನಿಸಿದ್ದಾರೆ. ಧರ್ಮಸ್ಥಳ ಬಸ್ಗಾಗಿ ಜಾತಕ ಪಕ್ಷಿಯಂತೆ ಜನ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕುಟುಂಬ ಸಮೇತ, ಸ್ನೇಹಿತರ ಜೊತೆ ಹಾಸನಾಂಬೆ ನೋಡಲು ತೆರಳಿದ್ದಾರೆ ಮಹಿಳಾಮಣಿಗಳು. ಕೇವಲ ಸಾರಿಗೆ ಬಸ್ ಮಾತ್ರವಲ್ಲ, ಮೆಟ್ರೋ ರೈಲು ಕೂಡ ಫುಲ್ ರಷ್ ಆಗಿದೆ. ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ಗೆ ಸೀಟ್ ಸಿಗ್ತಿಲ್ಲ. ನಿಲ್ಲಲು ಆಗದಷ್ಟು ಪ್ರಯಾಣಿಕರು ತುಂಬಿ ತುಳುಕಿದ್ದಾರೆ. ಬಸ್ ಸಿಕ್ಕರೆ ಸಾಕಪ್ಪ ಅಂತ ಫುಲ್ ರಷ್ ಆಗಿರೋ ಮೆಟ್ರೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.

ಹಾಸನಾಂಬ ದೇವಿ ದರ್ಶನಕ್ಕೆ ನೀರಿಕ್ಷೆಗೂ ಮೀರಿದ ಮಟ್ಟದಲ್ಲಿ ಜನರು ಆಗಮನ ಹಿನ್ನಲೆಯಲ್ಲಿ ವಿಶೇಷ ಬಸ್ ವ್ಯವಸ್ಥೆ ರದ್ದು ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ. ಕಾಲ್ತುಳಿತದ ಆತಂಕ ವ್ಯಕ್ತಪಡಿಸಿರುವ ಹಾಸನ ಎಸ್ಪಿ ಸಜಿತಾ, ಹಾಸನ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹಾಸನಾಂಬ ದೇವಿ ದರ್ಶನಕ್ಕಾಗಿ ಕಳೆದ ಎರಡು ದಿನಗಳಿಂದ ಜನ ಆಗಮಿಸುತ್ತಿದ್ದಾರೆ. ಆದರೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಾವಕಾಶ ಕಡಿಮೆ ಇದೆ. ಎಲ್ಲಾ ಸರತಿ ಸಾಲುಗಳು ಬ್ಯಾರಿಕೇಡ್ ದಾಟಿ ಮುಂದೆ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಇದೀಗ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆ ಶುರು ಆಗಿದ್ದು, ರಜೆ ವೇಳೆ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಎಚ್ಚರಿಸಿದ್ದಾರೆ.
ಹಾಸನ ನಗರ ತುಂಬಾ ಚಿಕ್ಕದಾಗಿದ್ದು ದೇವಸ್ಥಾನದ ಸುತ್ತಮುತ್ತ ಸ್ಥಳಾವಕಾಶ ಕಡಿಮೆ ಇದೆ. ವಿಶೇಷ ಬಸ್ ವ್ಯವಸ್ಥೆ ಯಿಂದ ಭಾರೀ ಭಕ್ತರು ಹಾಸನಾಂಬೆ ದರ್ಶನಕ್ಕೆ ಬಂದರೆ ಸರತಿ ಸಾಲಿನಲ್ಲಿ ನೂಕು ನುಗ್ಗಲು ಆಗಲಿದೆ. ಇದರಿಂದಾಗಿ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲ. ಎಲ್ಲಾ ರೀತಿಯ ಸರತಿ ಸಾಲುಗಳಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ ಅಹಿತಕರ ಘಟನೆಗಳು ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಶ್ರೀ ಹಾಸನಾಂಬ ದೇವಿಯ ದರ್ಶನ ಸಂಬಂಧ ಹೊರ ಜಿಲ್ಲೆಗಳಿಂದ ಕೆಎಸ್ಆರ್ಟಿಸಿ ಬಸ್ ಹಾಗೂ ಇತರೇ ವಾಹನಗಳಲ್ಲಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲು ಕ್ರಮವಹಿಸುವಂತೆ ಪತ್ರ ಬರೆದಿದ್ದಾರೆ.
ಇವತ್ತು ನಾಳೆ ಮಾತ್ರವೇ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದ್ದು, ಅಕ್ಟೋಬರ್ 23ರಂದು ದೇವಸ್ಥಾನದಲ್ಲಿ ಅಂತಿಮ ಪೂಜೆ ನೆರವೇರಿಸಿ ಬಾಗಿಲು ಬಂದ್ ಮಾಡಲಾಗುತ್ತದೆ. ಕೊನೆ ದಿನಗಳಲ್ಲಿ ಜನರು ಏಕಾಏಕಿ ಹೆಚ್ಚಾದರೆ ಜನರನ್ನು ನಿಯಂತ್ರಿಸಲು ಸಾಧ್ಯವಾಗಲ್ಲ. ಹಾಸನಾಂಬ ದೇವಿಯ ಭಕ್ತಾದಿಗಳ ಸಂಖ್ಯೆಯನ್ನು ನಿಯಂತ್ರಿಸದಿದ್ದಲ್ಲಿ ಎಲ್ಲಾ ರೀತಿಯ ಸರತಿ ಸಾಲಿನಲ್ಲಿ ನೂಕುನುಗ್ಗಲು ಉಂಟಾಗಿ ಅಹಿತಕರ ಘಟನೆ ಸಂಭವಿಸಿದರೆ, ಪೊಲೀಸ್ ಇಲಾಖೆ ಜವಾಬ್ದಾರಿ ಆಗಿರುವುದಿಲ್ಲ ಎಂದು ಪತ್ರದಲ್ಲಿ ಜಿಲ್ಲಾಧಿಕಾರಿಗೆ ನೇರವಾಗಿ ತಿಳಿಸಿದ್ದಾರೆ. ಅಂದರೆ ಅನಾಹುತ ಆದರೆ ಜಿಲ್ಲಾಡಳಿತ ಅಷ್ಟೇ ಹೊಣೆ ಹೊರಬೇಕಾಗುತ್ತದೆ. ಪೊಲೀಸರು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಜನರು ಹಾಸನಾಂಬೆಗೆ ಹೋಗುವ ಮೊದಲು ಬೀ ಕೇರ್ ಫುಲ್..


