ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಧ್ವಜ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ. RSS ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಟ್ಟಾಗಿ ರಾಮ ಧ್ವಜರೋಹಣ ಮಾಡಿದ್ದಾರೆ. ಸರಿಯಾಗಿ ಬೆಳಗ್ಗೆ 11:52ಕ್ಕೆ ಧ್ವಜಾರೋಹಣ ನಡೆದಿದ್ದು, ಧ್ವಜದ ಮೇಲೆ ಸೂರ್ಯ, ಕೋವಿದಾರ ವೃಕ್ಷದ ಚಿತ್ರ, ಓಂಕಾರ ಚಿಹ್ನೆಯಿದೆ. ಧ್ವಜದ ಅಳತೆ 11 ಅಡಿ ಅಗಲ, 22 ಅಡಿ ಉದ್ದವಿದೆ. ರಾಮಮಂದಿರ ಶಿಖರದಲ್ಲಿ ಕೇಸರಿ ಧ್ವಜ ರಾರಾಜಿಸುತ್ತಿದೆ. ಧ್ವಜಾರೋಹಣದ ವೇಳೆ ರಾಮಭಕ್ತರಿಂದ ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿದೆ.

ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ತೆರಳಿ ಶ್ರೀರಾಮ ದರ್ಬಾರ್ನಲ್ಲಿ ರಾಮ, ಸೀತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀರಾಮ್ ದರ್ಬಾರ್ನಲ್ಲಿರುವ ರಾಮ, ಲಕ್ಷ್ಮಣ, ಸೀತೆ, ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಾಥ್ ಕೊಟ್ಟಿದ್ದಾರೆ. ಅಯೋಧ್ಯೆಯಲ್ಲಿ ನೆಲೆಸಿರುವ ಬಾಲರಾಮನಿಗೆ ಪ್ರಧಾನಿ ಮೋದಿ ಆರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಧ್ವಜಾರೋಹಣಕ್ಕೂ ಮುನ್ನ ಬಾಲರಾಮನ ದರ್ಶನ ಪಡೆದುಕೊಂಡಿದ್ದಾರೆ. ವೇದಮಂತ್ರಗಳನ್ನ ಪಠಿಸುವ ಮೂಲಕ ಬಾಲರಾಮನ ಪ್ರಾರ್ಥನೆ ಮಾಡಿದ್ದಾರೆ.

ಶ್ರೀರಾಮನೂರು ಅಯೋಧ್ಯೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಕಾರ್ಯಕ್ರಮವನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಧ್ವಜದ ಮೇಲೆ ಭಗವಾ ಬಣ್ಣ ರಾರಾಜಿಸುತ್ತಿದೆ. ಧ್ವಜದಲ್ಲಿ ಕೋವಿದರ ವೃಕ್ಷ ಹಾಗೂ ಸೂರ್ಯವಂಶದ ಚಿಹ್ನೆಯಿದೆ. ಇವೆಲ್ಲವೂ ರಾಮರಾಜ್ಯದ ಸಂಕೇತ ಎಂದಿದ್ದಾರೆ. ಇನ್ನು ಶತಮಾನಗಳ ಕನಸು ಇಂದು ಸಾಕಾರಗೊಂಡಿದೆ. ಸಂತಸ ಸಾಧನೆಯ ಪ್ರತೀಕ ಈ ಧ್ವಜ. ರಾಮನ ಆದರ್ಶನಗಳನ್ನ ಸಾರುವ ಉದ್ಘೋಷ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶ್ರೀರಾಮ ಎಂದರೆ ಸತ್ಯದ ಸಂಕೇತ. ಶ್ರೀರಾಮ ಧರ್ಮಪಥದ ಆದರ್ಶ. ರಾಮ ಎಂದರೆ ನಿಷ್ಕಪಟ ಮನಸ್ಸು. ಸತ್ಯದ ಸಂಕಲ್ಪ ಎಂಬ ಅರ್ಥವಿದೆ. ರಾಮ ಕೇವಲ ಓರ್ವ ವ್ಯಕ್ತಿಯಲ್ಲ ಅದೊಂದು ಸಂಕೇತ. ನಾವು ನಮ್ಮೊಳಗಿನ ರಾಮನನ್ನ ಎಚ್ಚರಿಸಬೇಕು. ಈ ದಿನ ಧ್ವಜಾರೋಹಣ ಮಾಡುವ ಮೂಲಕ ಐತಿಹಾಸಿಕ ದಿನವಾಗಿದೆ ಎಂದು ರಾಮನಾಮ ಸ್ಮರಿಸಿದ್ದಾರೆ.

ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಮ ಮಾತ್ರವಲ್ಲದೆ ಬಸವಣ್ಣನವರನ್ನು ಕೂಡ ಪ್ರಧಾನಿ ಮೋದಿ ನೆನಪು ಮಾಡಿಕೊಂಡಿದ್ದಾರೆ. ಸಾಮೂಹಿಕ ಚರ್ಚೆಯ ಜಾಗ ಎಂದರೆ ಅದು ಅನುಭವ ಮಂಟಪ. ಭಾರತೀಯ ನೌಕಪಡೆಯ ಧ್ವಜವನ್ನ ಕೂಡ ಬದಲಾವಣೆ ಮಾಡಿದ್ದೇವೆ. ಧ್ವಜದಿಂದ ಗುಲಾಮಗಿರಿ ದೂರ ಮಾಡಿದ್ದೇವೆ. ಇದು ಮಾನಸಿಕ ಸ್ಥಿತಿಯನ್ನ ಬದಲಿಸುವ ಅತ್ಯದ್ಬುತ ಕ್ಷಣ ಎಂದು ಮೋದಿ ಹೇಳಿದ್ದಾರೆ. ಜೊತೆಗೆ ಭಾರತದ ಬೆಳವಣಿಗೆ ಬಗ್ಗೆಯೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಭಾರತ 11ನೇ ಆರ್ಥಿಕತೆ ಆಗಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ಭಾರತ 4ನೇ ದೊಡ್ಡ ಆರ್ಥಿಕತೆ ಆಗಿದೆ. ಮುಂದಿನ ದಿನಗಳಲ್ಲಿ 3ನೇ ಆರ್ಥಿಕತೆ ಆಗಲಿದೆ. ವಿಕಸಿತ ಭಾರತದ ವೇಗಕ್ಕೆ ಸಾಹಸದ ಚಕ್ರ ಇರುವ ರಥ ಬೇಕು. ಸತ್ಯದ ಧ್ವಜ ಇರುವ ರಥ ಬೇಕು. ಬಲ, ವಿವೇಕ, ಸಂಯಮದ ಕುದುರೆಗಳು. ಕ್ಷಮೆ, ಸನ್ಮಾನದ ಲಗಾಮು ಇರಬೇಕು. ಈ ಕ್ಷಣ ವೇಗ ಹೆಚ್ಚಿಸುವ ಕ್ಷಣ. ಹೀಗಾಗಿ ರಾಮರಾಜ್ಯ ಪ್ರೇರಿತ ರಾಷ್ಟ್ರವನ್ನ ನಾವೆಲ್ಲರೂ ಕಟ್ಟಬೇಕು ಎಂದು ತಿಳಿಸಿದ್ದಾರೆ.


