ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಫೊಕ್ಸೋ ಪ್ರಕರಣದಲ್ಲಿ ಸ್ವಾಮೀಜಿಯನ್ನು ಜಿಲ್ಲಾ ಕೋರ್ಟ್ ಖುಲಾಸೆ ಮಾಡಿದೆ. 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ G.C ಹಡಪದ್ ಅವರು ತೀರ್ಪು ನೀಡಿದ್ದು, ಆರೋಪಿಗಳಾದ ಶಿವಮೂರ್ತಿ ಮುರುಘಾ ಶರಣರು, ಲೇಡಿ ವಾರ್ಡನ್ ರಶ್ಮಿ, ಮ್ಯಾನೇಜರ್ ಪರಮಶಿವಯ್ಯ ಸೇರಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿ ಆದೇಶ ಹೊರಡಿಸಲಾಗಿದೆ. ಚಿತ್ರದುರ್ಗ ಕೋರ್ಟ್ನಿಂದ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ಆಗಮಿಸಿದ ಮುರುಘಾ ಶರಣರು, ಶಿವಯೋಗಿ ಮಂದಿರದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೋಕ್ಸೋ ಕೇಸ್ನಲ್ಲಿ ಖುಲಾಸೆ ಆದ ಬಳಿಕ ಮುರುಘಾ ಶ್ರೀಗಳು ಮೊದಲ ಪ್ರತಿಕ್ರಿಯೆ ನೀಡಿದ್ದು, ನಾವು ಇನ್ನಷ್ಟು ದಿನ ಮೌನವಾಗಿರುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ಕರೆದು ಎಲ್ಲವನ್ನೂ ವಿವರಿಸುತ್ತೇನೆ ಎಂದಿದ್ದಾರೆ. ಶೀಘ್ರದಲ್ಲೇ ಮಾಧ್ಯಮಗಳನ್ನು ಕರೆದು ಎಲ್ಲಾ ವಿಚಾರವನ್ನೂ ವಿವರಿಸುತ್ತೇನೆ. ಈಗ ಆದಷ್ಟೂ ಮೌನವಾಗಿರಲು ಬಯಸುತ್ತೇನೆ. ಈಗ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಈಗ ಏನೂ ಮಾತನಾಡುವ ಸಮಯವಲ್ಲ ಎಂದು ಮುರುಘಾ ಶ್ರೀಗಳು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಪೋಕ್ಸೋ ಕೇಸ್ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ತೀರ್ಪು ಬಂದಿರುವ ವಿಚಾರವಾಗಿ ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಮಾತನಾಡಿ, ಇದು ಸರ್ಕಾರದ ವೈಫಲ್ಯ ಹಾಗೂ ಬುದ್ಧಿವಂತಿಕೆಗೆ ಸಿಕ್ಕ ತೀರ್ಪು. ಈ ಕೇಸ್ನಲ್ಲಿ ಸಾಕಷ್ಟು ಲೋಪದೋಷಗಳು ತನಿಖೆ ಹಂತದಲ್ಲೇ ಆಗಿದೆ. CWC ಸರಿಯಾಗಿ ಮಕ್ಕಳ ಕೌನ್ಸೆಲಿಂಗ್ ಮಾಡಿಲ್ಲ. ಪ್ರಭಾವಿಗಳ ಬುದ್ಧಿವಂತಿಕೆ ಕೆಲಸ ಮಾಡಿದೆ. ಮಕ್ಕಳ ಪರ ನಿಂತುಕೊಳ್ಳಬೇಕಿದ್ದ ಅನೇಕರು ಪ್ರಭಾವಿಗಳ ಪರ ನಿಂತಿದ್ದಾರೆ ಎಂದಿದ್ದಾರೆ. ಪೊಲೀಸರು ಸರಿಯಾದ ರೀತಿಯಲ್ಲಿ ಸಾಕ್ಷಿ ಪುರಾವೆ ಸಂಗ್ರಹಿಸಿಲ್ಲ. ಸರ್ಕಾರ ಮೇಲ್ಮನವಿ ಸಲ್ಲಿಸುತ್ತದೆ ಎಂಬ ಭರವಸೆ ಇದೆ. ಸರ್ಕಾರ ಏನು ಮಾಡುತ್ತದೆ ಅದನ್ನು ನೋಡಿಕೊಂಡು ನಾವು ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

ಮುರುಘಾ ಶ್ರೀ ವಿರುದ್ಧದ ಫೋಕ್ಸೋ ಕೇಸ್ ಖುಲಾಸೆ ವಿಚಾರವಾಗಿ ಸರ್ಕಾರಿ ಅಭಿಯೋಜಕ ಜಗದೀಶ್ ಪ್ರತಿಕ್ರಿಯೆ ನೀಡಿದ್ದು, ಮೊದಲ ಫೋಕ್ಸೋ ಕೇಸ್ನಲ್ಲಿ ಆರೋಪಿಗಳು ಬಿಡುಗಡೆ ಆಗಿದ್ದಾರೆ. ಆದರೇ ಯಾವ ಆಧಾರದ ಮೇಲೆ ಬಿಡುಗಡೆ ಆಗಿದ್ದಾರೆ ಅಂತ ಗೊತ್ತಿಲ್ಲ. ಆದೇಶ ಪ್ರತಿ ಸಿಕ್ಕ ಬಳಿಕ ತಿಳಿಯುತ್ತದೆ. ನಾಳೆ ಅಥವಾ ನಾಡಿದ್ದು ಆದೇಶ ಪ್ರತಿ ಸಿಗುತ್ತದೆ. ಇದರ ಮೇಲೆ ನಾವು ಹೈಕೋರ್ಟ್ಗೆ ಆಪೀಲ್ ಹೋಗುತ್ತೇವೆ. ಜಿಲ್ಲೆಗೆ ಬರಲು ಈ ಪ್ರಕರಣದಲ್ಲಿ ನಿರ್ಬಂಧ ತೆರವು ಆದಂತೆ. ಹೈಕೋರ್ಟ್ನಲ್ಲಿ ಎರಡನೇ ಕೇಸ್ ಸಂಬಂಧ ವಿಚಾರಣೆ ನಾಳೆ ಅಥವಾ ನಾಡಿದ್ದು ಇದೆ. ಎರಡನೇ ಕೇಸ್ನಲ್ಲಿ ಸ್ಟೇ ತೆರವು ಆದರೆ ಮತ್ತೆ ವಿಚಾರಣೆ ಶುರುವಾಗುತ್ತದೆ ಎಂದಿದ್ದಾರೆ. 2ನೇ ಪ್ರಕರಣದಲ್ಲಿ ಇದುವರೆಗೂ ಬೇಲ್ ತೆಗೆದುಕೊಂಡಿಲ್ಲ. ಟ್ರಯಲ್ ಕೋರ್ಟ್ನಲ್ಲಿ ಬೇಲ್ ಅರ್ಜಿ ವಜಾ ಆಗಿತ್ತು. ಆ ಬಳಿಕ ಹೈಕೋರ್ಟ್ಗೆ ಹೋಗಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆಯಬೇಕಿದೆ. ಈ ಕೇಸ್ ಮೂರು ಜನ ಆರೋಪಿಗಳು ಬಿಡುಗಡೆ ಮಾಡಿದ್ದಾರೆ ಎಂದಿದ್ದಾರೆ.
ಸಂತ್ರಸ್ತ ಬಾಲಕಿಯರ ಪರ ವಕೀಲ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿ, ನ್ಯಾಯಾಲಯದ ತೀರ್ಪು ನಾವು ಗೌರವಿಸುತ್ತೇವೆ. ಆದರೆ ಈ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ಇದ್ರೆ, ಆದೇಶ ಪ್ರತಿ ಓದಿದ ಬಳಿಕ ತಿಳಿಯುತ್ತದೆ. ಚಾರ್ಜ್ ಶೀಟ್ ಎಷ್ಟು ದೊಡ್ಡದು ಎಂಬುದರ ಮೇಲೆ ಕೇಸ್ ನಿರ್ಧಾರ ಆಗಲ್ಲ. ಚಾರ್ಜ್ ಶೀಟ್ ಎಷ್ಟು ಗಟ್ಟಿಯಾಗಿದೆ ಎಂಬುದು ಮುಖ್ಯವಾಗುತ್ತದೆ. ಲೋಪ ಇಲ್ಲದೆ ತನಿಖೆ ನಡೆದಿದೆ ಎಂಬುದರ ಮೇಲೆ ಕೇಸ್ ನಿಂತಿರುತ್ತದೆ. ಕೇವಲ ಸಾಕ್ಷಿಗಳು ಮಾತ್ರ ಮುಖ್ಯ ಆಗಲ್ಲ, ಪೊಲೀಸ್ ತನಿಖೆ ಕೂಡಾ ಮುಖ್ಯ. ಯಾವುದೇ ಕೇಸ್ ಆದಾಗ ತನಿಖೆಯ ಮೇಲೆ ಕೇಸ್ ನಿಂತಿರುತ್ತದೆ. ಸಂತ್ರಸ್ತ ಮಕ್ಕಳ ಪಾತ್ರ ಇದರಲ್ಲಿ ಬರಲ್ಲ, ಚಾರ್ಜ್ ಶೀಟ್ ಮಾತ್ರ ಮುಖ್ಯ. ತೀರ್ಪು ಯಾವುದರ ಆಧಾರದ ಮೇಲೆ ಬಂದಿದೆ ಎಂಬುದು ಆದೇಶ ಪ್ರತಿ ಅಧ್ಯಯನ ಬಳಿಕ ತಿಳಿಯುತ್ತದೆ ಎಂದಿದ್ದಾರೆ.


