ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಸಂಘರ್ಷದಿಂದ ದೇಶಾದ್ಯಂತ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ದೇಶದ ಅತಿದೊಡ್ಡ ವಿಮಾನ ಸಂಸ್ಥೆ ಇಂಡಿಗೋ ಸಂಸ್ಥೆಗೂ ಇಂಧನದ ಬೆಲೆ ಏರಿಕೆ ಬಿಸಿ ತಟ್ಟಿದೆ. ಮಧ್ಯರಾತ್ರಿಯಿಂದಲೇ ಅನ್ವಯ ಆಗುವಂತೆ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ಹೆಚ್ಚುವರಿ ಇಂಧನ ಶುಲ್ಕ ವಿಧಿಸುವುದಾಗಿ ಇಂಡಿಗೋ ಸಂಸ್ಥೆ ಘೋಷಿಸಿದೆ.
ಭಾರತದೊಳಗೆ ಸಂಚರಿಸುವ ವಿಮಾನ 425 ರೂಪಾಯಿ ಹೆಚ್ಚಿಸಿದ್ದು, ಮಧ್ಯಪ್ರಾಚ್ಯ ಪ್ರಯಾಣಕ್ಕೆ ಹೆಚ್ಚುವರಿ 900 ರೂಪಾಯಿ, ಆಗ್ನೇಯ ಏಷ್ಯಾ, ಚೀನಾ ಪ್ರಯಾಣಕ್ಕೆ 1800 ರುಪಾಯಿ, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ಪ್ರಯಾಣಕ್ಕೆ 1800 ರೂಪಾಯಿ ಹಾಗೂ ಯುರೋಪ್ ಪ್ರಯಾಣಕ್ಕೆ ಹೆಚ್ಚುವರಿ 2300 ರೂಪಾಯಿ ಹೆಚ್ಚಳ ಮಾಡಿದೆ.

ಗ್ಯಾಸ್ ಸಿಲಿಂಡರ್ ಅಭಾವದಿಂದ ರಂಜಾನ್ ವ್ಯಾಪಾರ ಕೂಡ ಹಳ್ಳ ಹಿಡಿದಿದೆ. ರಂಜಾನ್ ತಿಂಗಳಲ್ಲಿ ಓಪನ್ ಆಗುವ ಶಿವಾಜಿನಗರ ಫುಡ್ ಸ್ಟ್ರೀಟ್ಗೆ ಈ ಬಾರಿ ಸಿಲಿಂಡರ್ ಅಭಾವ ಹೊಡೆತ ನೀಡಿದೆ. ರಸೆಲ್ ಮಾರ್ಕೆಟ್ನಲ್ಲಿರುವ ಹೋಟೆಲ್ ಮುಂಭಾಗದಲ್ಲಿ ಮಾಲೀಕರು ರಾಶಿ ರಾಶಿ ಸೌದೆ ತಂದು ಸುರಿಯುತ್ತಿದ್ದು, ಸೌದೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಜೊತೆಗೆ ಗ್ಯಾಸ್ ಸಿಗದೆ ಫುಡ್ ಸ್ಟ್ರೀಟ್ನ ಹತ್ತಾರು ಸ್ಟಾಲ್ಗಳು ಕೂಡಾ ಬಂದ್ ಆಗಿದೆ.
ಗ್ಯಾಸ್ ಸಿಲಿಂಡರ್ ಸಿಗದ ಕಾರಣಕ್ಕೆ ಬಹುಪಾಲು ಸಮೋಸ, ಶವರ್ಮಾ ಸ್ಟಾಲ್ಗಳು ಕ್ಲೋಸ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಸ್ಟಾಲ್ಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಸಿಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಗೃಹ ಬಳಕೆಯ ಗ್ಯಾಸ್ ತಂದು ಆಹಾರ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಇರಾನ್-ಇಸ್ರೇಲ್ ನಡುವಿನ ಯುದ್ಧ ಶುರುವಾದ ದಿನದಿಂದಲೂ ಪ್ರತಿ ದಿನ ಯುದ್ಧದ ತೀವ್ರತೆ ತಾರಕಕ್ಕೇ ಏರುತ್ತಿದೆ. ಯುದ್ಧ ಡ್ರೈ ಫ್ರೂಟ್ಸ್ ಮೇಲೂ ಪರಿಣಾಮ ಬೀರಿದೆ. ಇರಾನ್ ಒಣಹಣ್ಣು, ಮಸಾಲೆ ಪದಾರ್ಥಗಳ ಸ್ಟಾಕ್ ಬಹುತೇಕ ಖಾಲಿಯಾಗಿದೆ ಎಂದು ಬೆಂಗಳೂರು ಡ್ರೈ ಫ್ರೂಟ್ಸ್ ಮರ್ಚೆಂಟ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಶೀಘ್ರವೇ ಆಮದು ಆಗದಿದ್ದರೆ ಇನ್ನೊಂದು ವಾರದಲ್ಲಿ ಇರಾನ್ ದೇಶದ ಆಮದು ಒಣಹಣ್ಣು, ಮಸಾಲೆ ಪದಾರ್ಥಗಳು ಖಾಲಿಯಾಗಲಿದೆ ಎನ್ನಲಾಗಿದೆ.


