ರಾಜ್ಯ ಕಾಂಗ್ರೆಸ್ ಸರ್ಕಾರ ರಚನೆಗೆ ಇನ್ನು ಒಂದೇ ದಿನ ಬಾಕಿ ಉಳಿದಿರುವ ಸಮಯದಲ್ಲಿ ಸಚಿವ ಸ್ಥಾನ ಪಡೆಯಲು ಶಾಸಕರು ಸರ್ಕಸ್ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಜಮೀರ್ ಅಹಮದ್ಗೆ ಕಂಟಕ ಎದುರಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಜಮೀರ್ ಅಹ್ಮದ್ ಖಾನ್ ಸಂಚು ಮಾಡಿದ್ದಾರೆ ಅನ್ನೋ ರೀತಿಯ ಆಡಿಯೋ ಒಂದು ವೈರಲ್ ಆಗ್ತಿದೆ. ಜಮೀರ್ ಆಡಿಯೋ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ಪಡೆದಿದ್ದು, ದಾವಣಗೆರೆ ಬೈ ಎಲೆಕ್ಷನ್ನಲ್ಲಿ ಪಕ್ಷ ವಿರೋಧಿ ಕೆಲಸ ನಡೆದಿದ್ಯಾ? ದಾವಣಗೆರೆಯ ಮೊಹಮ್ಮದ್ ಸಿರಾಜ್ ಜೊತೆ ಸಂಭಾಷಣೆ ಮಾಡಿದ್ಯಾರು..? ಅನ್ನೋ ಬಗ್ಗೆ ವಿವರಣೆ ಪಡೆಯಲಾಗಿದೆ. ಆಡಿಯೋ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಿರುವ ಹೈಕಮಾಂಡ್ ನಾಯಕರು. ಆಡಿಯೋ ಸಾಬೀತಾದ್ರೆ ಜಮೀರ್ ಮೇಲೆ ಶಿಸ್ತುಕ್ರಮದ ಸಾಧ್ಯತೆ ಇದೆ.

ಆಡಿಯೋ ವೈರಲ್ ಆದ ಬಳಿಕ ಪತ್ರಿಕಾ ಪ್ರಕಟಣೆ ಮೂಲಕ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದು, ನನ್ನದು ಎಂದು ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವ ಆಡಿಯೋ ನಕಲಿ ಆಗಿದೆ. A.I ತಂತ್ರಜ್ಞಾನ ಬಳಸಿ ಈ ಆಡಿಯೋ ಕ್ರಿಯೇಟ್ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ನಡೆಸಲಿ, ನಾನು ರೆಡಿ ಇದ್ದೇನೆ ಎಂದು ಜಮೀರ್ ಸವಾಲು ಹಾಕಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಈ ರೀತಿ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ,ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

ಒಂದು ಕಡೆ ಆಡಿಯೋ ನಕಲಿ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಇನ್ನೊಂದು ಕಡೆ ಜಮೀರ್ ಆತಂಕಕ್ಕೆ ಒಳಗಾಗಿದ್ದಾರೆ. ಆಡಿಯೋ ವಿಚಾರ ಮಾಧ್ಯಮಗಳಲ್ಲಿ ಹೊರ ಬೀಳ್ತಿದ್ದ ಹಾಗೆ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್, ಈ ಪ್ರಕರಣದಿಂದ ಹೊರ ಬರುವ ಯತ್ನ ಮಾಡಿದ್ದಾರೆ. ನಾನು ಈ ರೀತಿ ಮಾತನಾಡಿಲ್ಲ ಎಂದು ಹೈಕಮಾಂಡ್ಗೆ ಮನವರಿಕೆ ಮಾಡಿ, ಇದು ರಾಜಕೀಯ ಷಡ್ಯಂತ್ರ ಎಂದು ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಫ್ಲಾಟ್ವೊಂದರಲ್ಲಿ ನಸೀರ್ ಅಹಮದ್ ಹಾಗೂ ಜಮೀರ್ ಅಹಮದ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆಡಿಯೋ ವೈರಲ್ ಆಗಿರೋ ಬಗ್ಗೆ ಮುಂದಿನ ನಡೆಯೇನು..? ಯಾವ ರೀತಿ ಬಗೆಹರಿಸಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜಮೀರ್ದು ಎನ್ನಲಾದ ಆಡಿಯೋ ವೈರಲ್ ವಿಚಾರದ ಬಗ್ಗೆ ಮೊಹಮ್ಮದ್ ಸಿರಾಜ್ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿ ಕೆಎಂಡಿಸಿ ನಿರ್ದೇಶಕ ಸಿರಾಜ್ ಜೊತೆಗೆ ಸಿರಾಜ್ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಸಿರಾಜ್ ಮಾತ್ರ ಆ ಆಡಿಯೋ ನಮ್ಮದಲ್ಲ. ನಮ್ಮ ಮೇಲೆ ರಾಜಕೀಯ ಕಾರಣಕ್ಕೆ ಷಡ್ಯಂತ್ರ ನಡೆಸಲಾಗಿದೆ. ನಾವು ಪಕ್ಷಕ್ಕೆ ನಿಷ್ಟಾವಂತರಾಗಿ ಕೆಲಸ ಮಾಡಿದ್ದೇವೆ. ಜಮೀರ್ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಕೆಎಂಡಿಸಿ ನಿರ್ದೇಶಕ ಸಿರಾಜ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಯಾವ ಕ್ರಮತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡ್ಬೇಕು. ಜಮೀರ್ ವಿರುದ್ಧ ಕ್ರಮ ಕೈಗೊಂಡರೆ ಕಾಂಗ್ರೆಸ್ನಿಂದ ಮುಸ್ಲಿಮರು ದೂರವಾಗುವ ಆತಂಕವೂ ಎದುರಾಗಿದೆ.


