ರಾಜ್ಯದಲ್ಲಿ ಜಾತಿ ಜನಗಣತಿ ಮಾಡಲಾಗ್ತಿದೆ ಅನ್ನೋ ಕಾರಣಕ್ಕ್ಕೆ ಕಳೆದೊಂದು ವಾರದಿಂದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಕಣ್ಣು ಕೆಂಪಗಾಗಿತ್ತು. ಆದರ ಜೊತೆಗೆ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೆಕು ಅನ್ನೋ ಕಾರಣಕ್ಕೆ ಪ್ರಬಲ ವರ್ಗದ ಜನರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಕೆ ಮಾಡಿದ್ದರು. 3 ದಿನಗಳ ಕಾಲ ಸತತ ವಿಚಾರಣೆ ಬಳಿಕ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿ ಅರ್ಜಿ ವಿಚಾರಣೆಯನ್ನು ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಿಕೆ ಮಾಡಿದೆ. ಹೈಕೋರ್ಟ್ ಆದೆಶದ ಬಳಿಕ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ ವಾದ-ಪ್ರತಿವಾದ ಆಲಿಸಿದ ಕರ್ನಾಟಕ ಹೈಕೋರ್ಟ್, ಸಮೀಕ್ಷೆ ಮಾಡುತ್ತಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಲವಾರು ಷರತ್ತುಗಳನ್ನು ವಿಧಿಸಿದೆ.
ಹಿಂದುಳಿದ ಆಯೋಗ ಸಂಗ್ರಹ ಮಾಡುವ ದತ್ತಾಂಶವನ್ನು (DATA) ಸರ್ಕಾರ ಸೇರಿದಂತೆ ಯಾರಿಗೂ ಕೊಡುವಂತಿಲ್ಲ. ಸಾರ್ವಜನಿಕರ ದತ್ತಾಂಶದ ಗೌಪ್ಯತೆಯನ್ನು ಆಯೋಗ ರಕ್ಷಿಸಬೇಕು. ಈಗ ನಡೆಯುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ಬಗ್ಗೆ ಆಯೋಗ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸ್ವಯಂ ಪ್ರೇರಿತವಾಗಿ ಸಮೀಕ್ಷೆಯಲ್ಲಿ ಜನರು ಭಾಗವಹಿಸಬಹುದು. ಮಾಹಿತಿ ನೀಡುವುದು, ಬಿಡುವುದು ವ್ಯಕ್ತಿಯ ಸ್ವಯಂ ಪ್ರೇರಿತ ನಿರ್ಧಾರ. ಜನರು ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಿದರಷ್ಟೇ ಪಡೆಯಬೇಕು. ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು. ಆಯೋಗ ಒಂದು ದಿನದ ಒಳಗೆ ದತ್ತಾಂಶ ಸಂಗ್ರಹ ಹಾಗೂ ದತ್ತಾಂಶ ರಕ್ಷಣೆ ಬಗ್ಗೆ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ ಮಾಡುವಂತೆ ವಿಭಾಗೀಯ ಪೀಠ ಸೂಚನೆ ನೀಡಿದೆ.

ಹಿಂದುಳಿದ ವರ್ಗಗಳ ಆಯೋಗದ ಪರವಾಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಸಮೀಕ್ಷೆಗೆ ತಡೆ ಕೋರಿ ಕೆಲವರು ಅರ್ಜಿ ಹಾಕಿದ್ರು. ಆದರೆ ಹೈಕೋರ್ಟ್ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಈ ಮೂಲಕ ಸರ್ಕಾರ ಮತ್ತು ಹಿಂದುಳಿದ ವರ್ಗದ ಆಯೋಗದ ವಾದವನ್ನು ಎತ್ತಿ ಹಿಡಿದಿದೆ. ನಾವು ಈ ಹಿಂದಿನ ಆಯೋಗಗಳ ಸಮೀಕ್ಷಾ ವರದಿಯನ್ನ ಉಲ್ಲೇಖ ಮಾಡಿದ್ವಿ. ಹೆಚ್ ಡಿ ದೇವೇಗೌಡ, ಎಸ್.ಆರ್ ಬೊಮ್ಮಾಯಿ, ರಾಮಕೃಷ್ಣ ಹೆಗಡೆ , ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೂ ಸಮೀಕ್ಷೆ ಮಾಡಿಸಲಾಗಿತ್ತು. ಆ ಎಲ್ಲಾ ವರದಿಗಳ ಅಂಶಗಳನ್ನ ನಾವು ಮುಂದಿಟ್ಟಿದ್ವಿ. ಇದು ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ. ಸಮೀಕ್ಷೆಯ 60 ಅಂಶಗಳಲ್ಲಿ 25 ಪ್ರಮುಖ ಅಂಶಗಳ ಬಗ್ಗೆ ಕ್ಲಾರಿಟಿ ನೀಡಲಾಯ್ತು. ಇದು ಜಾತಿಗಣತಿಯಲ್ಲ, ಸಮೀಕ್ಷೆ ಅನ್ನೋದಕ್ಕೆ ಮನ್ನಣೆ ಸಿಕ್ಕಿದೆ. ಅಕ್ಟೋಬರ್ನ ರಜೆ ಅವಧಿಯಲ್ಲಿ ಶಿಕ್ಷಕರನ್ನ ಬಳಸಿಕೊಂಡು ಸಮೀಕ್ಷೆ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.
ಗಣತಿ ಕಾರ್ಯಕ್ಕೆ ಎದುರಾಗಿದ್ದ ಕಾನೂನು ತೊಡಕು ಸದ್ಯಕ್ಕಂತೂ ನಿವಾರಣೆ ಆಗಿದೆ. ಆದರೆ ರಾಜ್ಯದ ಬಹುತೆಕ ಜಿಲ್ಲೆಗಳಲ್ಲಿ ಗಣತಿ ಕಾರ್ಯಕ್ಕೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಕಲಬುರಗಿ, ಬೀದರ್ನಲ್ಲೂ ಗಣತಿ ಕಾರ್ಯ ಮಾಡಲಾಗದೆ ನೂರಾರು ಗಣತಿದಾರರು ತಾಲೂಕು ಪಂಚಾಯತಿ ಕಚೇರಿಗೆ ವಾಪಸ್ ಬಂದಿದ್ದಾರೆ. ಸರ್ವರ್ ಸಮಸ್ಯೆ ಆದ ಕಾರಣಕ್ಕೆ ಯುಎಚ್ಐಡಿ ಮತ್ತು ಲೋಕೆಷನ್ಗೆ ಮ್ಯಾಚ್ ಆಗುತ್ತಿಲ್ಲ. ಆ್ಯಪ್ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗಿದೆ. ಅಲ್ಲದೆ, ತರಬೇತಿಯನ್ನೇ ನೀಡದ ಹಿನ್ನಲೆಯಲ್ಲಿ ಪರದಾಡುವಂತಾಗಿದೆ ಎಂದು ಸರ್ಕಾರದ ವಿರುದ್ಧ ಗಣತಿದಾರರು ತೀವ್ರ ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನೂ ಕೆಲವು ಕಡೆ ಸಾರ್ವಜನಿಕರೇ ಗಣತಿಯನ್ನು ನಿರಾಕರಿಸುತ್ತಿರುವ ಬಗ್ಗೆಯೂ ವರದಿಯಾಗಿದೆ. ಶಿಕ್ಷಕರ ಈ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಕೂಡಲೇ ಎಲ್ಲಾ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಲಾಗಿದೆ. ಇನ್ನು ಇವತ್ತು ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿ ಕೆಲವು ನಿರ್ದೇಶನ ನೀಡಲಿದ್ದಾರೆ ಎನ್ನಲಾಗಿದೆ.


