The Public Spot
ರಾಜ್ಯ

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

ಕರ್ನಾಟಕದಲ್ಲಿ ಬರೋಬ್ಬರಿ 7.76 ಲಕ್ಷ ರೇಷನ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಸದ್ದಿಲ್ಲದೆ ಶುರುವಾಗಿದೆ. ಕುಟುಂಬದ ಆದಾಯ ವಾರ್ಷಿಕ 1.20 ಲಕ್ಷ ರೂಪಾಯಿ ಮಿತಿ ಇಟ್ಟುಕೊಂಡು ರೇಷನ್ ಕಾರ್ಡ್ ಕೈ ಬಿಡುವ ಬಗ್ಗೆ ರಾಜ್ಯ ಸರ್ಕಾರ ಇಂದು ನಿರ್ಧಾರ ಮಾಡಲಿದೆ ಎಂದು ಆಹಾರ ಖಾತೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 1 ಕೋಟಿ 53 ಲಕ್ಷದ 60 ಸಾವಿರದ 161 ರೇಷನ್ ಕಾರ್ಡ್ಗಳು ಇವೆ. ಅಂದರೆ ಕಾರ್ಡ್ನಲ್ಲಿ ಸೇರ್ಪಡೆ ಆಗಿರುವ ಸದಸ್ಯರ ಸಂಖ್ಯೆ 5 ಕೋಟಿ 41 ಲಕ್ಷ ಆಗಿದೆ. ಆದರೆ ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ 4 ಕೋಟಿ 1 ಲಕ್ಷ ಸದಸ್ಯರು ಇರಬೇಕು ಅನ್ನೋ ಕಾರಣಕ್ಕೆ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭ ಮಾಡಲಾಗಿದೆ.

ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡ್ಬೇಕು..?

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ 5.80 ಲಕ್ಷ ಅನರ್ಹ ಕಾರ್ಡ್ಗಳಿವೆ ಅಂತಾ CBDT ತಂತ್ರಾಂಶ ಪತ್ತೆ ಮಾಡಿದ್ಯಂತೆ. ಅದೇ ರೀತಿ ರಾಜ್ಯ ಸರ್ಕಾರದ ಕುಟುಂಬ ಆ್ಯಪ್ ಕೂಡ 10.09 ಲಕ್ಷ ರೇಷನ್ ಕಾರ್ಡ್ ಅನರ್ಹ ಎಂದು ಗುರ್ತಿಸಿದೆ ಎನ್ನಲಾಗಿದೆ. ಇನ್ನು ರೇಷನ್ ಕಾರ್ಡ್ ಬಿಪಿಎಲ್ನಿಂದ ಎಪಿಎಲ್ ಆಗಿ ಬದಲಾಗಲಿದೆ. ಅದಕ್ಕೂ ಮೊದಲೂ ರೇಷನ್ ಕಾರ್ಡ್ದಾರರಿಗೆ ನೋಟಿಸ್ ಬರಲಿದೆ. ಆ ನೋಟಿಸ್ ಬಂದ 7 ದಿನಗಳ ಒಳಗಾಗಿ ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಜೊತೆಗೆ ಆಹಾರ ಇಲಾಖೆಗೆ ಆಕ್ಷೇಪಣೆ ಸಲ್ಲಿಸಬಹುದು. ಆಗ ಮತ್ತೊಮ್ಮೆ ಪರಿಶೀಲನೆ ಮಾಡಿ ನಿಮ್ಮ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಒಳಗೆ ಇದೆ ಎಂದು ಅಧಿಕಾರಿಗಳಿಗೆ ಮನವರಿಕೆ ಆದರೆ ನಿಮ್ಮ ಬಿಪಿಎಲ್ ಕಾರ್ಡ್ ಹಾಗೇ ಉಳಿದುಕೊಳ್ಳಲಿದೆ. ನಿಮ್ಮ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ 20 ಸಾವಿರ ದಾಟಿದೆ ಎನಿಸಿದರೆ ನಿಮ್ಮ ಕಾರ್ಡ್ ರದ್ದು ಮಾಡಿ ಎಪಿಎಲ್ ಮಾಡಲಾಗುತ್ತದೆ.

ಗಾರ್ಮೆಂಟ್ಸ್ ಮಹಿಳೆಯರ ಕಾರ್ಡ್ ಹೋಗುತ್ತಾ..?

ಬೆಂಗಳೂರಿನಂತಹ ಮಹಾ ನಗರದಲ್ಲಿ ಲಕ್ಷಾಂತರ ಜನ ಮಹಿಳೆಯರು ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಹುಡುಗರು ಬಾರ್ ಅಂಡ್ ರೆಸ್ಟೋರೆಂಟ್, ಪೆಟ್ರೋಲ್ ಪಂಪ್ಗಳಲ್ಲಿ ಕೆಲಸ ಮಾಡ್ತಾರೆ. ಅವರ ತಿಂಗಳ ಸಂಬಳ ಹತ್ತರಿಂದ ಹನ್ನೆರಡು ಸಾವಿರ ಆಗಿರುತ್ತದೆ. ಅಂದ್ರೆ ವಾರ್ಷಿಕ ಆದಾಯ ಸರ್ಕಾರ ಹೇಳುತ್ತಿರುವ 1.20 ಲಕ್ಷದಿಂದ 1.40 ಲಕ್ಷ ಆಗುತ್ತದೆ. ಅಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡುತ್ತಾ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಅಥವಾ ಕೇಂದ್ರ ಸರ್ಕಾರ ಇತ್ತೀಚಿಗೆ ಎಲ್ಲರ ಪ್ಯಾನ್ ಆಧಾರ್ ಕಾರ್ಡ್ಗಳನ್ನೂ ಒಟ್ಟು ಮಾಡಿತ್ತು. ಜೊತೆಗೆ ಎಲ್ಲರೂ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಮಾಡಿ ಎಂದು ಸೂಚನೆ ಕೊಟ್ಟಿತ್ತು. ರೇಷನ್ ಕಾರ್ಡ್ ಹೊಂದಿರುವ ಬಹುತೇಕರ ಆಧಾರ ಒಂದೂವರೆ ಲಕ್ಷದಿಂದ ಎರಡೂವರೆ ಲಕ್ಷ ರೂಪಾಯಿ ಆಗಿರುತ್ತದೆ. ಅಂದರೆ ಎಲ್ಲಾ ರೇಷನ್ ಕಾರ್ಡ್ ರದ್ದು ಮಾಡ್ತಾರಾ..? ಅನ್ನೋ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ತಲೆ ಬುಡ ಇಲ್ಲದೆ ಸರ್ಕಾರದ ಪ್ಲ್ಯಾನಿಂಗ್..!

ವಾರ್ಷಿಕ 1.20 ಲಕ್ಷ ರೂಪಾಯಿ ಆದಾಯ ಬಂದವರಿಗೆ ರೇಷನ್ ಕಾರ್ಡ್ ಅವಶ್ಯಕತೆ ಇಲ್ಲ ಎನ್ನುವ ಲೆಕ್ಕಾಚಾರವೇ ಮೂರ್ಖತನದ್ದು ಎನ್ನಬಹುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುತ್ತಾರೆ ಅಂದರೆ ತಿಂಗಳಿಗೆ ಕನಿಷ್ಠ 20 ರಿಂದ 30 ಸಾವಿರ ಸಂಪಾದನೆ ಆಗುತ್ತದೆ. ಆದರೆ ಬೆಂಗಳೂರಿನಲ್ಲಿ ಬಾಡಿಗೆ ಮನೆ, ಮಕ್ಕಳ ಶಾಲಾ ಫೀಸ್ ಸೇರಿದಂತೆ ಬದುಕುವುದಕ್ಕೆ 30 ಸಾವಿರ ಸಾಲುವುದಿಲ್ಲ. ಪರಿಸ್ಥಿತಿ ಹೀಗಿರುವಾಗ 1.20 ಲಕ್ಷ ರೂಪಾಯಿ ವಾರ್ಷಿಕ ಆದಾಯ ಬರುವುದನ್ನು ಲೆಕ್ಕ ಹಾಕಿದರೆ ಯಾರೊಬ್ಬರೂ ರೇಷನ್ ಕಾರ್ಡ್ ಹೊಂದುವಂತಿಲ್ಲ. ಇನ್ನೂ ಸ್ವಂತ ಮನೆಯಿದ್ದರೂ ರೇಷನ್ ಕಾರ್ಡ್ ಹೊಂದಿದ್ದಾರೆ ಎಂದರೆ ಅದು ಬೇರೆ ಪ್ರಶ್ನೆ.. ಆದರೆ ಬಾಡಿಗೆ ಮನೆಯಲ್ಲಿ ಇದ್ದವರು 20 ಸಾವಿರ ಸಂಪಾದನೆ ಮಾಡುತ್ತಿದ್ದಾರೆ ಎಂದರೂ ಬದುಕು ಬಲು ಕಷ್ಟ.. ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಬೇಕಿದೆ.

Related posts

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot

SC INTERNAL RESERVATION; ಒಳ ಮೀಸಲಾತಿ ಜಾರಿ ಮಾಡಿದ ರಾಜ್ಯ ಸರ್ಕಾರ, ಯಾರದ್ದು ಮೇಲುಗೈ..?

Publicspot

Thimmakka; ಸಾಲು ಮರದ ತಿಮ್ಮಕ್ಕ ಇನ್ನಿಲ್ಲ.. ಬದುಕಿನ ಯಾನ ಮುಗಿಸಿದ ವೃಕ್ಷಮಾತೆ..

Publicspot

ಸೂರು ಇಲ್ಲದವರಿಗೆ ಸೂರು ಸರ್ಕಾರದ ಘೋಷಣೆ.. ಆದರೆ ಇಲ್ಲಿ ಅಂಧ ದರ್ಬಾರ್..

Publicspot

ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ.. ಮಳೆಯಿಂದ ಜೀವಹಾನಿ

Publicspot

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot