ರಾಜ್ಯದಲ್ಲಿ ಕುರ್ಚಿ ಫೈಟ್ ನಡೆಯುತ್ತಲೇ ಇದೆ. ಆದರೂ ಒಮ್ಮೊಮ್ಮೆ ಸಿಎಂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿಕೊಂಡು ಸಾಗುತ್ತಿದೆ. ಹೈಕಮಾಂಡ್ ನಾಯಕರು ಆದಷ್ಟು ದಿನಗಳನ್ನು ದೂಡುವ ಮನಸ್ಥಿತಿಯಲ್ಲಿ ಇದ್ದಾರೆ. ಇದಿಗ ಯತೀಂದ್ರ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷಗಳೂ ಕೂಡ ನಮ್ಮ ತಂದೆ ಅವರೇ ಸಿಎಂ ಆಗಿ ಇರ್ತಾರೆ ಎನ್ನುವ ಹೇಳಿಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬಣವನ್ನು ಕಂಗಾಲಾಗಿಸಿದೆ. ಸಿಎಂ ಸಿದ್ದರಾಮಯ್ಯ ಸ್ವತಃ ತಮ್ಮ ಮನಸ್ಸಿನ ಮಾತನ್ನು ಮಗನ ಮೂಲಕ ಹೇಳಿಸಿದ್ರಾ..? ಅನ್ನೋ ಅನುಮಾನವೂ ರಾಜಕೀಯ ನಾಯಕರನ್ನು ಕಾಡುತ್ತಿದೆ.

ಸಿಎಂ ಸಿದ್ದರಾಮಯ್ಯ ಪುತ್ರನಾಗಿರುವ ಡಾ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಯತೀಂದ್ರ ಮೂಲಕ ಸಿಎಂ ಬದಲಾವಣೆ ಇಲ್ಲ ಎನ್ನುವ ಹೇಳಿಕೆ ಕೊಡಿಸಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಸಿಎಂ ಬಣ ಅಥವಾ ಡಿಸಿಎಂ ಬಣದ ಯಾವುದೇ ನಾಯಕರು ಹೇಳಿಕೆ ನೀಡಿದ್ರೂ ಇಷ್ಟೊತ್ತಿಗೆ ಡಿಕೆ ಶಿವಕುಮಾರ್ ಮಾತನಾಡದಂತೆ ಸೂಚನೆ ಕೊಟ್ಟಿದ್ದರೂ ಬಹಿರಂಗ ಹೇಳಿಕೆ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್ ನಾಯಕರಿಗೆ ಪತ್ರ ಬರೆಯುತ್ತಿದ್ದರು. ಒಂದು ವೇಳೆ KPCC ವತಿಯಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿದ್ದರೆ ನೋಟಿಸ್ ನೀಡುತ್ತಿದ್ದರು. ಅಶಿಸ್ತನ್ನು ಸಹಿಸಲ್ಲ ಎನ್ನುತ್ತಿದ್ದರು.

ಇದೀಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಮೊದಲಿಗೆ ನಾನು ಹೇಳಿಕೆ ನೋಡಿಲ್ಲ. ಹೇಳಲಿ ಬಿಡಿ, ನಾವು ಒಟ್ಟಾಗಿಯೇ ಇದ್ದೇವೆ. ನಾವು ಏನು ಅಧಿಕಾರಕ್ಕಾಗಿ ಕಿತ್ತಾಡುತ್ತಿಲ್ಲ ಅಲ್ವಾ..? ಅನ್ನೋ ರೀತಿಯಲ್ಲೇ ಮಾತನಾಡಿದ್ದರು. ಆದರೆ ಹೇಳಿಕೆಯನ್ನು ಗಮನಿಸಿದ ಬಳಿಕ ಮಾಧ್ಯಮಗಳು ಮರುಪ್ರಶ್ನೆ ಮಾಡಿದಾಗ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಡಬೇಕಿದೆ ಎನ್ನುವ ಮೂಲಕ ಯತೀಂದ್ರ ಹೇಳಿಕೆ ಸರಿಯಲ್ಲ ಅನ್ನೋ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಿದರು. ಆ ಬಳಿಕ ತನ್ನ ಆಪ್ತ ಶಾಸಕರ ಜೊತೆಗೆ ಮಹತ್ವದ ಸಭೆಯನ್ನೂ ಮಾಡುವ ಮೂಲಕ ಮುಂದಿನ ಮಾತಿನ ಸಮರಕ್ಕೆ ಅಡಿಪಾಯ ಹಾಕಿರುವಂತೆ ಕಾಣಿಸುತ್ತಿದೆ.
ವಿಧಾನಸಭೆಯಲ್ಲಿ ಕಲಾಪ ಮುಂದೂಡಿಕೆ ಆದರೂ ಸದನದಲ್ಲೇ ಉಳಿದ ಡಿಸಿಎಂ ಡಿ.ಕೆ ಶಿವಕುಮಾರ್, ಆಪ್ತ ಶಾಸಕರ ಜೊತೆ ಸದನದಲ್ಲೇ ಕುಳಿತು ಚರ್ಚೆ ನಡೆಸಿದ್ದಾರೆ. ಮಂಡ್ಯ ಶಾಸಕ ರವಿ ಗಣಿಗ, ಆನೇಕಲ್ ಶಿವಣ್ಣ, ನೆಲಮಂಗಲ ಶ್ರೀನಿವಾಸ್, ಎನ್.ಎ ಹ್ಯಾರಿಸ್, ರೂಪಾ ಶಶಿಧರ್ ಜೊತೆ ಚರ್ಚಿಸಿದ್ದಾರೆ. ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಕುಳಿತಿದ್ದ ಸ್ಥಳಕ್ಕೆ ತೆರಳಿದ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಮಾತುಕತೆಗೆ ಸೇರಿಕೊಂಡಿದ್ದಾರೆ. ಆ ಬಳಿಕ ರಾತ್ರಿ ಆಪ್ತ ಶಾಸಕರಿಗೆ ಡಿನ್ನರ್ ಪಾರ್ಟಿ ಕೂಡ ಆಯೋಜನೆ ಮಾಡಿದರು. ಒಟ್ಟಾರೆ ಕಾಂಗ್ರೆಸ್ನಲ್ಲಿ ಎರಡೂ ಬಣಗಳು ತನ್ನ ಪಾರುಪತ್ಯ ಮೆರೆಯುವುದಕ್ಕೆ ಸಜ್ಜಾಗುತ್ತಿದೆ. ಒಗ್ಗಟ್ಟಿನಲ್ಲಿ ಭಿನ್ನತೆ ಎದ್ದು ಕಾಣುತ್ತಿದೆ.


