ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಭಾರೀ ಚರ್ಚೆ ಹನುಟ್ಟು ಹಾಕಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಮ್ ರೇವಣ್ಣ ಮಾತನಾಡಿ, ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಕೆಲಸ ಮಾಡಿದ್ದೇವೆ. ಸರಿಯಾದ ರೀತಿಯಲ್ಲಿ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಬೇಕು ಎಂದು ಬಜೆಟ್ನಲ್ಲಿ 52 ಸಾವಿರ ಕೋಟಿ ಹಣ ಇಟ್ಟಿದ್ದರು. ಮಧ್ಯವರ್ತಿಗಳು ಇಲ್ಲದೆ ಯಶಸ್ವಿಯಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಗ್ಯಾರಂಟಿ ಪ್ರಯೋಜನ ಹೋಗುತ್ತಿದೆ. 1 ಲಕ್ಷ 19 ಸಾವಿರ ಕೋಟಿ ಇಲ್ಲಿಯವರೆಗೆ ಜನರಿಗೆ ತಲುಪಿದೆ. ಇದರ ಬಗ್ಗೆ ಯಾವುದೇ ತಕರಾರು ಇಲ್ಲ ಎಂದಿದ್ದಾರೆ. ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡು ಬಡವರಿಗೆ, ಮಧ್ಯಮ ವರ್ಗದವರಿಗೆ ಹಣ ಕೊಡ್ತಾ ಇದೆ ಎಂದಿದ್ದಾರೆ.

ವಿಪಕ್ಷದವರು ಗ್ಯಾರಂಟಿಗಳಿಂದ ಆರ್ಥಿಕ ಹೊರೆ ಎನ್ನುತ್ತಿದ್ದಾರೆ. ಆದರೆ ಆ ರೀತಿ ಏನು ಆಗಿಲ್ಲ, 52 ಸಾವಿರ ಕೋಟಿ ಒಂದು ಕಡೆ ಹೋದರೆ ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದಿದ್ದರು. ಆದರೆ ಆರ್ಥಿಕ ತಜ್ಞರ ಪ್ರಕಾರ ತಲಾ ಆದಾಯ ಹೆಚ್ಚಾಗಿದೆ. ಕರ್ನಾಟಕದಲ್ಲಿ ತಲಾ ಆದಾಯ ಮೊದಲ ಸ್ಥಾನದಲ್ಲಿದೆ.. ಮೊದಲ ಎರಡು ವರ್ಷದಲ್ಲಿ ತೊಂದರೆ ಆಗಿದ್ದನ್ನು ನಾನು ಸಹ ಒಪ್ಪುತ್ತೇನೆ ಎಂದಿದ್ದಾರೆ. ಉಳ್ಳವರು ಗ್ಯಾರಂಟಿ ಬಿಟ್ಟುಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಕರೆ ನೀಡಿದ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವು ಸಭೆ ಮಾಡುತ್ತಿದ್ದೇವೆ. ಅದರ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಆಗಿದ್ಯಾ ಅಂದಾಗ ಯಾವುದೇ ಕಾರ್ಯಕ್ರಮ ಜಾರಿ ಮಾಡಿದಾಗ ಒಂದರಲ್ಲಿ ಹೊರೆಯೂ ಆಗುತ್ತೆ, ಸಹಾಯನೂ ಆಗುತ್ತದೆ ಎಂದಿದ್ದಾರೆ.
ಜನರ ಆರ್ಥಿಕತೆ ಹೆಚ್ಚಾಗಿ, ಉದ್ಯೋಗ ಸೃಷ್ಟಿ ಆದರೆ ಅದು ಹೊರೆ ಅಂತ ಅನಿಸಲ್ಲ. ಸತ್ತವರ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗುವ ವಿಚಾರವಾಗಿ ಮಾತನಾಡಿ, ಆ ಬಗ್ಗೆ ಸರ್ವೆ ಮಾಡಿಸಿದ್ದೇವೆ. ಈ ಕಾರ್ಯಕ್ರಮ ಪ್ರಾರಂಭ ಆಗಿ ಎರಡೂವರೆ ವರ್ಷ ಆದ ಸಂದರ್ಭದಲ್ಲಿ ಡಿಬಿಟಿ ಮೂಲಕ ಹಣ ಹೋಗುತ್ತಿದ್ದರಿಂದ ಅವರು ಬದುಕಿದ್ದಾರೋ, ಸಾವು ಆಗಿದೆಯೋ ಎಂದು ಗೊತ್ತಾಗದೆ ಇಲ್ಲಿಯವರೆಗೆ ಹಣ ಹೋಗಿದೆ. ಆದನ್ನ ವಾಪಸ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ಹಣ ವಾಪಸ್ ತರಿಸಲು ಚಿಫ್ ಸೆಕ್ರೆಟರಿ, ಅಡಿಷನಲ್ ಸೆಕ್ರೆಟರಿ, ಬ್ಯಾಂಕ್ನವರ ಜೊತೆಗೆ ಚರ್ಚೆ ಮಾಡಿದ್ದಾರೆ. ಜಿಲ್ಲಾವಾರು ಮಾಹಿತಿ ಸಿಕ್ಕಿದೆ ಎಂದಿದ್ದಾರೆ.
ಈ ನಡುವೆ ಗ್ಯಾರಂಟಿಗಳು ಹೊರೆ ಎಂಬ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಮಾತಾಡಿರೋದನ್ನು ಬೇರೆ ಬೇರೆ ರೀತೀಲಿ ತಿರುಚಬೇಡಿ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಎಷ್ಟೇ ಕಷ್ಟ ಆದ್ರೂ ಗ್ಯಾರಂಟಿಗಳನ್ನು ಕೊಡ್ತಿದೀವಿ ಅಂತ ಸ್ಪಷ್ಟಪಡಿಸಿದ್ದೇವೆ. ಉಳ್ಳವರು ಗ್ಯಾರಂಟಿ ಬಿಟ್ಟು ಕೊಡುವ ಬಗ್ಗೆ ಸಿಎಂ ಕರೆ ನೀಡಿರುವ ವಿಚಾರವಾಗಿ ಮಾತನಾಡಿ, ಸಿಎಂ ಕರೆಗೆ ಡಿಕೆಶಿ ಸಮರ್ಥನೆ ಮಾಡಿದ್ದು, ಅದರಲ್ಲಿ ತಪ್ಪೇನಿದೆ..? ಬಹಳ ಜನ ನಮಗೂ ಹೇಳಿದ್ದಾರೆ. ಸರ್ಕಾರಿ ಕೆಲಸದಲ್ಲಿರೋರು ಹಲವರು ಬೇಡ ಅಂದಿದ್ದಾರೆ. 200 ಯೂನಿಟ್ ವಿದ್ಯುತ್ ಬಳಸೋರೂ ಕೂಡ ಹಲವರು ಬೇಡ ಅಂದಿದ್ದಾರೆ. ಇದರ ಬಗ್ಗೆ ಚರ್ಚೆ ನಡೀತಿದೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾತನಾಡಿ ಗ್ಯಾರಂಟಿಗಳ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ನಂತರ ನಾಡಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಕಾಣುತ್ತಿಲ್ಲ. ಗ್ಯಾರಂಟಿ ಸ್ಕೀಂ ಗಳಿಂದಾಗಿ ಹಲವಾರು ಯೋಜನೆ ತರಲಾಗುತ್ತಿಲ್ಲ. ಗ್ಯಾರಂಟಿ ಭಾರವಾಗ್ತಿದೆ ಎಂದು ಡಿಕೆಶಿ, ದೇಶಪಾಂಡೆ ಹೇಳ್ತಿದ್ದಾರೆ. ಭಾರವಿದೆ ಅನ್ನೋದ್ನ ನಾನು ಒಪ್ಪೊದಿಲ್ಲ. ಆಡಳಿತ ಬಿಗಿಯಿದ್ರೆ ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಈ ಸರ್ಕಾರ ಬಂದ್ಮೇಲೆ ಖಜಾನೆ ತುಂಬಿಸಲಿಕ್ಕೆ ತೆರಿಗೆ ಹೆಚ್ಚಿಸಿದ್ದಾರೆ. ಗ್ಯಾರಂಟಿ ಫಲಾನುಭವಿಗಳ ಮೇಲೆ ತೆರಿಗೆ ಹಾಕಿ, ಸರ್ಕಾರ ದೊಡ್ಡ ಮಟ್ಟದ ಹಣ ಸಂಗ್ರಹ ಮಾಡಿದೆ. ಜನರಿಂದ ಸಂಗ್ರಹಿಸಿದ ತೆರಿಗೆ ಹಣ ಜನಪರ ಯೋಜನೆಗಳಿಗೆ ಬಳಕೆಯಾಗ್ತಿಲ್ಲ ಎಂದಿದ್ದಾರೆ.
ಗ್ಯಾರಂಟಿ ಯೋಜನೆಯಲ್ಲಿ ಈಗಾಗಲೇ ಕಳೆದ ಆರೇಳು ತಿಂಗಳಿಂದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಬಂದಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡವಲ್ಲಿ ಎಡವಿದೆ ಎನ್ನುವುದನ್ನ ಎಲ್ಲರೂ ಒಪ್ಪಲೇಬೇಕು. ಆದರೆ ಸರ್ಕಾರ ಮಾತ್ರ ಗ್ಯಾರಂಟಿ ಹಣ ಕೊಡ್ತಿದ್ದೇವೆ. ಎಲ್ಲವೂ ಸರಿಯಾಗಿದೆ ಅಂದರೆ ಸುಳ್ಳು ಅಂತಾನೇ ಅರ್ಥ. ಚುನಾವಣೆ ಸಮಯದಲ್ಲಿ ಹಬ್ಬದ ಸಮಯದಲ್ಲಿ ಒಂದೆರಡು ತಿಂಗಳ ಹಣ ಹಾಕಿ ಆ ಬಳಿಕ ಸುಮ್ಮನಾಗುವುದರ ಅರ್ಥ ಸರ್ಕಾರ ಗ್ಯಾರಂಟಿ ಹಣ ಕೊಡಲು ಸಾಧ್ಯವಾಗದೆ ಒದ್ದಾಡುತ್ತಿದೆ ಎಂದು. ಗ್ಯಾರಂಟಿ ಘೋಷಣೆ ವೇಳೆ ಇದ್ದಂತಹ ಹುಮ್ಮಸ್ಸು ಗ್ಯಾರಂಟಿ ಕೊಡುವಾಗ ಇಲ್ಲ ಎನ್ನುವುದು ಸರ್ವತಃ ಸತ್ಯ.


