ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೋರ್ಟ್ ಆದೇಶ ಮಾಡಿದ್ರೂ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಇತ್ತೀಚಿಗಷ್ಟೇ ಜೈಲಿನಲ್ಲಿ ಬದುಕಲು ಸಾಧ್ಯವಿಲ್ಲ, ವಿಷ ಕೊಡಿಸಿ ಎಂದು ದರ್ಶನ್ ನ್ಯಾಯಾಧೀಶರ ಎದುರು ಮನವಿ ಮಾಡಿದ್ದರು. ಆ ಬಳಿಕ ಕೋರ್ಟ್, ಜೈಲಿನ ಮ್ಯಾನ್ಯುವಲ್ನಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೆ ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸಿಲ್ಲ ಅನ್ನೋದು ದರ್ಶನ್ ಪರ ವಕೀಲರ ಆರೋಪ.
ಕೋರ್ಟ್ ಆದೇಶವಿದ್ದರೂ ಜೈಲಿನಲ್ಲಿ ಹಾಸಿಗೆ, ದಿಂಬು ನೀಡದ ಆರೋಪ ಮಾಡಲಾಗಿದೆ. ಹೀಗಾಗಿ ಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿರುವ ದರ್ಶನ್ ಪರ ವಕೀಲರು, ನ್ಯಾಯಾಂಗ ನಿಂದನೆ ಆರೋಪ ಮಾಡಿದ್ದಾರೆ. 64 ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿದ್ದು, ದರ್ಶನ್ ಪರ ವಕೀಲರಾದ ಸುನಿಲ್ ಮತ್ತು ವಕೀಲ ಶೋಭಿತ್ ಕೋರ್ಟ್ಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 17ರಂದು ಆಕ್ಷೇಪಣೆ ಸಲ್ಲಿಸಲು ಜೈಲಾಧಿಕಾರಿಗಳಿಗೆ ಅವಕಾಶ ಕೊಟ್ಟು ಕೋರ್ಟ್ ಅರ್ಜಿಯನ್ನು ಮುಂದೂಡಿಕೆ ಮಾಡಿದೆ. ಜೈಲಿನ ಮ್ಯಾನ್ಯುವಲ್ ಪ್ರಕಾರ ಹಾಸಿಗೆ ದಿಂಬು ಕೊಟ್ಟಿದ್ದರೂ ಪ್ರತ್ಯೇಕವಾಗಿ ಹಾಸಿಗೆ ದಿಂಬು ಕೇಳುತ್ತಿದ್ದಾರಾ..? ಅಥವಾ ಹಾಸಿಗೆ ದಿಂಬು ಪೂರೈಕೆಯಲ್ಲಿ ಏನಾದರೂ ಸಮಸ್ಯೆ ಇದ್ಯಾ ಅನ್ನೋ ಬಗ್ಗೆ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ ಬಳಿಕ ಕೋರ್ಟ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಸ್ಪಷ್ಟನೆಗೂ ಕೋರ್ಟ್ ಸೂಚನೆ ಕೊಟ್ಟಿದೆ..


