ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಮೂವರು ಸೋದರಿಯರು ಸೂಸೈಡ್ ಮಾಡ್ಕೊಂಡಿದ್ರು.. ಆತ್ಮಹತ್ಯೆಗೆ ಕಾರಣ ಅಂದ್ರೆ ಆತ್ಮಹತ್ಯೆಗೆ ಪ್ರಚೋದಿಸುವ ಕೊರಿಯನ್ ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದರು. 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಆನ್ಲೈನ್ ಗೇಮ್ ಸಂಕಷ್ಟಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಅದೂ ಕೂಡ ಬೆಂಗಳೂರಿನ ಸೋಲದೇವನಹಳ್ಳಿ ಮೂಲದವರು ಬಿಹಾರದ ನಳಂದಾದ ರೂಮಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾರಣ ಕಳೆದ ವರ್ಷ ಆಗಸ್ಟ್ 8ರಂದು ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ ತಂಗಿ ಮಗನನ್ನ ಕೊಂದಿದ್ದ ಮಾವನ ಬಗ್ಗೆ ರಾಜ್ಯದಲ್ಲಿ ದೊಡ್ಡ ಸುದ್ದಿ ಆಗಿತ್ತು. ಅವತ್ತು ಕೊಲೆಯಾಗಿದ್ದ ಬಾಲಕನ ಹೆಸರು ಅಮೋಘ ಕೀರ್ತಿ. ಅಮೋಘ ಕೀರ್ತಿಯನ್ನ ಕೊಂದಿದ್ದು 50 ವರ್ಷದ ಸೋದರ ಮಾವ ನಾಗಪ್ರಸಾದ್. ಇದೀಗ ಅದೇ ನಾಗಪ್ರಸಾದ್ ಮತ್ತು ಮೃತ ಬಾಲಕ ಅಮೋಘ ಕೀರ್ತಿ ತಾಯಿ 48 ವರ್ಷದ ಶಿಲ್ಪಾ, 43 ವರ್ಷದ ಚಿಕ್ಕಮ್ಮ ಶೃತಾ ಹಾಗು ಅಮೋಘ ಕೀರ್ತಿ ಅಜ್ಜಿ 78 ವರ್ಷದ ಸುಮಂಗಲಾ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ..

FREE FIRE ಆನ್ಲೈನ್ ಗೇಮ್ಗೆ ಅಮೋಘ ಕೀರ್ತಿ ದಾಸನಾಗಿದ್ದ. ಗೇಮ್ ಹುಚ್ಚಿಗೆ ಹಣ ಬೇಕು ಅಂತಾ ಪದೇ ಪದೇ ಮನೆಯರನ್ನು ಪೀಡಿಸ್ತಿದ್ದ. ತಂಗಿ ಮಗನ ಆನ್ಲೈನ್ ಗೇಮ್ ಚಟ ತಪ್ಪು ಎಂದು ಮಾವ ನಾಗಪ್ರಸಾದ್ ಎರಡೇಟು ಹೊಡೆದು ಬುದ್ದಿ ಹೇಳಿದ್ದರು. ಆದರೂ ಆನ್ಲೈನ್ ಗೇಮ್ಗೆ ದಾಸನಾಗಿದ್ದ ಅಮೋಘ ಕೀರ್ತಿ, ಹಣಕ್ಕಾಗಿ ಪೀಡಿಸುವುದನ್ನ ಬಿಟ್ಟಿರ್ಲಿಲ್ಲ. ಆನ್ಲೈನ್ ಗೇಮ್ ಹುಚ್ಚಿಗೆ ಹಣಕ್ಕಾಗಿ ಪೀಡಿಸ್ತಿದ್ದ ಅಮೋಘ ಕೊನೆಗೆ ಚಾಕು ತಂದು ಮಾವನಿಗೆ ಇರಿಯಲು ಮುಂದಾಗಿದ್ದ. ಆಗ ಇಬ್ಬರ ಮಧ್ಯೆ ಗಲಾಟೆ, ನೂಕಾಟ ತಳ್ಳಾಟ, ನೂಕಾಟದಲ್ಲಿ ಅಮೋಘನ ಕುತ್ತಿಗೆಗೆ ಚಾಕುವಿನ ಪೆಟ್ಟು ಬಿದ್ದು ಅಮೋಘ ಕೀರ್ತಿ ಸತ್ತು ಹೋಗಿದ್ದ. ಆ ಬಳಿಕ ಮನೆಬಿಟ್ಟು ಹೋಗಿದ್ದ ಮಾವ ನಾಗಪ್ರಸಾದ್, 3 ದಿನದ ಬಳಿಕ ಪೊಲೀಸರಿಗೆ ಶರಣಾಗಿದ್ದರು. ಆದರೆ ಮಗನನ್ನ ಕೊಂದ ಅಣ್ಣನಿಗೆ ಅಮೋಘ ಕೀರ್ತಿ ತಾಯಿಯೇ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ದರು. ಜೈಲಿನಿಂದ ಬಿಡುಗಡೆ ಆದ ಬಳಿಕ ತೀರ್ಥಯಾತ್ರೆಗೆ ಹೋಗಿದ್ದವರು ಜೀವನ ಮುಗಿಸಿದ್ದಾರೆ.

ಬಿಹಾರದ ನಳಂದಾ ಎಸ್ಪಿ ಭಾರತ್ ಸೋನಿ ಮಾತನಾಡಿ, ಬೆಂಗಳೂರು ಪೊಲೀಸರನ್ನ ಸಂಪರ್ಕಿಸಿದ್ದೀವಿ, 25ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳ ಸ್ಟ್ರಿಪ್ ಸಿಕ್ಕಿದೆ. ಸ್ವಲ್ಪ ಹಣ, ಸಾಮಾನುಗಳು ಸುರಕ್ಷಿತವಾಗಿದೆ. ಸೋಲದೇವನಹಳ್ಳಿ ಪೊಲೀಸರಿಗೆ ಹೇಳಿದ್ದೀವಿ, ಅವರಿಂದ ನಮಗೆ ಮಾಹಿತಿಗಳು ಸಿಗಬೇಕಿದೆ. ಆತ್ಮಹತ್ಯೆ ಕಾರಣ ಏನು.,.? ಏನು ಸಮಸ್ಯೆ ಅಂತ ಅವ್ರು ಹೇಳ್ತಾರೆ ಎಂದಿದ್ದಾರೆ. ನಳಂದಾ ಜಿಲ್ಲೆಯ ರಾಜಗಿರದ ಜೈನ ಧರ್ಮ ಶಾಲೆಯಲ್ಲಿ ನಾಲ್ವರು ರೂಮ್ ಮಾಡಿಕೊಂಡಿದ್ದರು. ಪೊಲೀಸ್ ಮೂಲಗಳ ಪ್ರಕಾರ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ಸಂಜೆ ಧರ್ಮಶಾಲೆ ಸುತ್ತ ಕೆಟ್ಟ ವಾಸನೆ ಬರುವುದಕ್ಕೆ ಶುರುವಾದ ಬಳಿಕ ಮಠದವರು, ಇಲಿನೋ-ಬೆಕ್ಕೋ ಸತ್ತಿದೆ ಅಂತ ಮೋರಿ, ಸಂಪು, ಡ್ರೈನೇಜ್ ಎಲ್ಲವನ್ನೂ ಕ್ಲೀನ್ ಮಾಡಿದ್ದರು. ಆದರೂ ಗಬ್ಬುನಾತ ನಿಲ್ಲದೆ ಇದ್ದಾಗ ರೂಮ್ ಪರಿಶೀಲನೆ ಮಾಡಿದಾಗ ದುರಂತ ಬೆಳಕಿಗೆ ಬಂದಿದೆ.
ನಳಂದಾ ಪೊಲೀಸರು, ಸೋಲದೇವನಹಳ್ಳಿ ಪೊಲೀಸರನ್ನ ಸಂಪರ್ಕಿಸಿ ಎಲ್ಲಾ ಮಾಹಿತಿ ಹಂಚ್ಕೊಂಡಿದ್ದಾರೆ. ಮೃತರ ಬಳಿಯಿದ್ದ ಒಡವೆಗಳು, ಹಣ ಎಲ್ಲವೂ ಹಾಗೇಯಿದೆ. ಜೊತೆಗೆ 25 ನಿದ್ದೆ ಮಾತ್ರೆಗಳ ಖಾಲಿ ಸ್ಟ್ರಿಪ್ಗಳು ಸಿಕ್ಕಿದೆ. ಆದ್ರೂ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡ್ತಿದ್ದು, ನಾಲ್ವರ ಶವಗಳನ್ನ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಆದರೆ ಎಲ್ಲಾ ಪೋಷಕರಿಗೂ ಮಕ್ಕಳ ಮೇಲೆ ಕಾಳಜಿ ಇರುತ್ತದೆ. ಆದರೂ ಆಧುನಿಕತೆಯ ಭರಾಟೆಯಲ್ಲಿ ಎಲ್ಲರ ಕೈನಲ್ಲೂ ಮೊಬೈಲ್ಗಳು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇನ್ನಾದರೂ ಮೊಬೈಲ್ ಬಳಕೆಗೆ ಕಡಿವಾಣ ಹಾಕಿದರೆ ಉತ್ತಮ. ಮಕ್ಕಳು ಯಾವ ಆಟ ಆಡುತ್ತಾರೆ..? ಏನು ಮಾಡುತ್ತಿದ್ದಾರೆ ಅನ್ನೋ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಈ ರೀತಿಯ ಅನಾಹುತಕ್ಕೆ ಆಹ್ವಾನ ಕೊಟ್ಟಂತೆ ಆಗುತ್ತದೆ. ಮಗನ ಹತ್ಯೆಯಿಂದ ನೊಂದ ನಾಗಪ್ರಸಾದ್ ಹಾಗು ಅವರ ತಂಗಿಯರು, ತಾಯಿ ಸಮೇತ ಸಾವಿಗೆ ಶರಣಾಗಿದ್ದಾರೆ..


