ರಾಜ್ಯದ ಬಹುದೊಡ್ಡ ಜೈಲು ಆಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ನನ್ನು ಇರಿಸಲಾಗಿದೆ. ಕಳೆದ ಬಾರಿ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿತ್ತು ಅನ್ನೋ ಕಾರಣಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಈಗಲೂ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಇದಕ್ಕಾಗಿ ಇವತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಾರಿ ಶಿಫ್ಟ್ ಮಾಡಲು ಕೋರ್ಟ್ಗೆ ಏನು ಕಾರಣ ಕೊಡ್ತಾರೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ.

ಜೈಲುಗಳಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಉತ್ತಮ ವ್ಯವಸ್ಥೆಗಳನ್ನು ಹೊಂದಿರುವ ಜೈಲು ಅಂದರೆ ಪರಪ್ಪನ ಅಗ್ರಹಾರ ಜೈಲು. ಈ ಜೈಲಿನಲ್ಲಿ ದರ್ಶನ್ನನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ಗೆ ಮಾಹಿತಿ ಕೊಡ್ತಾರೋ..? ಅಥವಾ ಬೆಂಗಳೂರು ಜೈಲಿನಲ್ಲಿ ಇರುವ ಅಧಿಕಾರಿಗಳು ಭ್ರಷ್ಟರು, ದರ್ಶನ್ ಬಳಿ ಹಣ ಪಡೆದುಕೊಂಡು ಐಷಾರಾಮಿ ವ್ಯವಸ್ಥೆ ಕೊಟ್ಟು ಬಿಡುತ್ತಾರೆ ಅನ್ನೋ ಅನುಮಾನವಿದೆ ಎಂದು ಕೋರ್ಟ್ಗೆ ಹೇಳುತ್ತಾರೋ ಅನ್ನೋ ಕುತೂಹಲವಿದೆ. ಒಂದು ವೇಳೆ ಕಳೆದ ಬಾರಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದೆವು. ಅದೇ ಕಾರಣಕ್ಕೆ ಈ ಬಾರಿಯೂ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಎಂದರೆ ದರ್ಶನ್ ಪರ ವಕೀಲರ ಸ್ವಾಭಾವಿಕವಾಗಿ ವಿರೋಧಿಸ್ತಾರೆ.

ದರ್ಶನ್ ಬಂಧನ ಆದ ದಿನವೇ ಈ ಬಗ್ಗೆ ದರ್ಶನ್ ಪರ ವಕೀಲರು ಮಾತನಾಡಿ, ಒಂದು ವೇಳೆ ದರ್ಶನ್ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವುದಾದರೆ ನಮ್ಮ ವಾದವನ್ನು ಆಲಿಸಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ಇದೀಗ ಏಕಾಏಕಿ ಕೋರ್ಟ್ ಎದುರು ಬೇರೆ ಜೈಲಿಗೆ ಶಿಫ್ಟ್ ಮಾಡಬೇಕು ಎಂದರೆ ಖಂಡಿತವಾಗಿಯೂ ಕಾರಣ ಕೇಳುತ್ತಾರೆ. ಆಗ ಕಳೆದ ಬಾರಿ ಶಿಫ್ಟ್ ಮಾಡಿದ್ದೇ ಕಾರಣ ಹೇಳಿದರೆ ಕೋರ್ಟ್ ಮಾನ್ಯ ಮಾಡುವ ಸಾಧ್ಯತೆ ತೀರಾ ಕಡಿಮೆ. ಕಳೆದ ಬಾರಿ ಭದ್ರತಾ ಲೋಪಕ್ಕೆ ಕಾರಣ ಆಗಿದ್ದು ಜೈಲು ಸಿಬ್ಬಂದಿಗಳು. ಈ ಬಾರಿ ಕಟ್ಟುನಿಟ್ಟಾಗಿ ಕೆಲಸ ಮಾಡುವ ಸಿಬ್ಬಂದಿ ನಿಯೋಜಿಸಿ ಎನ್ನಬಹುದು. ಅಥವಾ ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರ ಆಗಿರುವಂತೆ ಸಿಸಿಟಿವಿ ಹಾಗೂ ಜೈಲು ಸಿಬ್ಬಂದಿ ಬಾಡಿ ಕ್ಯಾಮೆರಾ ಹಾಕಿದ ಮೇಲೆ ಭಯ ಯಾಕೆ ಅಂತಾನೂ ಕೇಳಬಹುದು.

ಇವತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್ಗೆ ಅರ್ಜಿ ಹಾಕಿದರೂ ಇಂದೇ ಕೋರ್ಟ್ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ರೌಡಿಗಳ ವಿಚಾರದಲ್ಲಿ ಅಂದರೆ ಎರಡು ಗ್ಯಾಂಗ್ಗಳ ನಡುವೆ ಪರಸ್ಪರ ಗಲಾಟೆ ನಡೆಯುವ ಸಾಧ್ಯತೆ ಇರುತ್ತದೆ ಅನ್ನೋ ಕಾರಣಕ್ಕೆ ಕೋರ್ಟ್ ಶಿಫ್ಟ್ ಮಾಡಲು ಒಪ್ಪಿಗೆ ಸೂಚಿಸುತ್ತದೆ. ಆದರೆ ದರ್ಶನ್ ವಿಚಾರದಲ್ಲಿ ಅದ್ಯಾವುದೂ ಇಲ್ಲ. ದರ್ಶನ್ ಏನು ಬೇರೆ ಕೈದಿಗಳ ಜೊತೆಗೆ ಹೊಡೆದಾಡುವುದಿಲ್ಲ. ಐಷಾರಾಮಿ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದು ಜೈಲು ಸಿಬ್ಬಂದಿಗಳೇ ಆಗಿದ್ದಾರೆ. ಜೈಲು ಸಿಬ್ಬಂದಿಗಳ ತಪ್ಪನ್ನು ಇಟ್ಟುಕೊಂಡು ಬೇರೆ ಜೈಲಿಗೆ ಸ್ಥಳಾಂತರ ಮಾಡುತ್ತೇವೆ ಎಂದರೆ ಹೇಗೆ..? ಎನ್ನುವ ಪ್ರಶ್ನೆ ಸಾಮಾನ್ಯ ಜನರಲ್ಲಿ ಬರುತ್ತದೆ. ಈ ಬಾರಿ ಕೋರ್ಟ್ ಒಪ್ಪಿಗೆ ಸೂಚಿಸವ ಸಾಧ್ಯತೆ ತೀರಾ ಕಡಿಮೆ ಅಂತಾನೇ ಹೇಳಬಹುದು.


