ಬೆಂಗಳೂರಿನನಲ್ಲಿ ಐಟಿ ದಾಳಿ ನಡೆದಿದ್ದು ತೆರಿಗೆ ವಂಚನೆ ಆರೋಪ ಹಿನ್ನೆಲೆ ಪರಿಶೀಲನೆ ಮಾಡಲಾಗ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಸಂಬಂದಿಸಿದಂತೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ಮಾಡಿರೊ ಐಟಿ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಮಾಲೀಕರು, ಕಾಲೇಜು, ಆಡಳಿತ ಮಂಡಳಿಯವರ ನಿವಾಸ, ಕಚೇರಿಗಳ ಮೇಲೆ ದಾಳಿ ಮಾಡಿ ಶೋಧ ಕೈಗೊಂಡಿದ್ದಾರೆ. ಹೊಸಕೆರೆಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹನುಮಂತನಗರ ಸೇರಿದಂತೆ ಹಲವಾರು ಕಡೆ ದಾಳಿ ನಡೆದಿದೆ. ಇಷ್ಟು ಮಾತ್ರವಲ್ಲದೆ ಕೆಲವು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ IT ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ಮಾಡಿದ್ದಾರೆ.

ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜ್, ಹನುಮಂತನಗರ ಕಾಲೇಜ್, ಆಂಧ್ರದ ಕುಪ್ಪಂ ಕಾಲೇಜ್ ಸೇರಿದಂತೆ ಹಲವೆಡೆ IT ಟೀಂ ದಾಳಿ ಮಾಡಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಶಾಖೆಗಳ ಮೇಲೂ ದಾಳಿ ನಡೆದಿದ್ದು, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ದಿವಂಗತ ದೊರೆಸ್ವಾಮಿ ನಾಯ್ಡು ಅವರ ಮನೆ ಮೇಲೂ ದಾಳಿ ಮಾಡಿದ್ದು, ದೊರೆಸ್ವಾಮಿ ಸಂಬಂಧಿಕರ ಮನೆ ಮೇಲೂ ರೇಡ್ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಚೆನ್ನೈ, ಮಂಗಳೂರು, ಆಂಧ್ರದಿಂದ ಬಂದಿರೋ 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಲೆಕ್ಕಪತ್ರಗಳ ತಲಾಶ್ ಮಾಡ್ತಿದೆ.

ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಜೊತೆಗೆ ಆದಾಯ ತೆರಿಗೆ ವಂಚನೆ ಮಾಡಿರೋ ಆರೋಪವೂ ಇರುವ ಹಿನ್ನಲೆಯಲ್ಲಿ ರೇಡ್ ನಡೆಸಿ ಐಟಿ ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದಾರೆ. ಸದ್ಯ ಪಿಇಎಸ್ ಶಿಕ್ಷಣ ಸಂಸ್ಥೆ ನೋಡಿಕೊಳ್ಳುತ್ತಿರುವ ದೊರೆಸ್ವಾಮಿ ಪುತ್ರ ಜವಹರ್ ದೊರೆಸ್ವಾಮಿ. ಮೂರು ಇನ್ನೋವಾ ಕಾರು ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು, ಕಾಲೇಜಿನ ಹಣಕಾಸು ಲೆಕ್ಕ, ಪೀಠೋಪಕರಣಗಳ ಖರೀದಿ ಬಿಲ್ಗಳು, ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಖರ್ಚು ಮಾಡಿರುವ ಹಣದ ವಿವರ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ.


