ಪ್ರೀತಿ ಅನ್ನೋ ಮಾತಿಗೆ ಬೆಲೆಯಿಲ್ಲ.. ಪ್ರೀತಿ ಮಾಡಿದವರು ಮದುವೆ ಆಗ್ತಾರೆ ಅನ್ನೋ ಗ್ಯಾರಂಟಿಯೂ ಇಲ್ಲ. ವಾರಂಟಿಯೂ ಇಲ್ಲ ಅನ್ನುವಂತಾಗಿದೆ. ಕಣ್ಸನ್ನೆ ಮೋಡಿಗೆ ಬಿದ್ದು ಪ್ರೀತಿ ಅನ್ನೋ ಹೆಸರಲ್ಲಿ ಆಡಬಾರದ ಆಟ ಆಡಿ ಸಮಸ್ಯೆ ಎದುರಾಗಿ ಎದುರಿಗೆ ನಿಂತಾಗ ಏನು ಮಾಡ್ಬೇಕು ಅನ್ನೋದು ಗೊತ್ತಾಗದೆ ಸಂಕಷ್ಟಕ್ಕೆ ಸಿಲುಕುವ ಘಟನೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಪ್ರೀತಿಸುವಾಗ ನನ್ನ ರಾಜ.. ನನ್ನ ರಾಣಿ.. ಚಿನ್ನ.. ಬಂಗಾರಿ ಅಂದವರು ಕೊನೆಗೆ ನೀನ್ಯಾರೋ..? ನಾನ್ಯಾರೋ..? ಅನ್ನೋ ಹಂತಕ್ಕೆ ಬಂದು ಬಿಡ್ತಾರೆ. ಪ್ರೀತಿ, ಪ್ರೇಮ ಅಂತಾ ಕೈಕೈ ಹಿಡ್ಕೊಂಡು ಓಡಾಡಿದ ಬಳಿಕ 3 ತಿಂಗಳ ಗರ್ಭಿಣಿ ಮಾಡಿದ್ದ ಪ್ರೇಮಿ, ಮದುವೆ ಆಗು ಅಂದಾಗ ಒಲ್ಲೆ ಅಂದಿದ್ದ. ಮನನೊಂದ ಗರ್ಭಿಣಿ ಯುವತಿ ನೇಣಿಗೆ ಕೊರಳೊಡ್ಡಿದ್ದಾಳೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದ ಸಿಂಧು ಪರಮಣ್ಣನವರ್ ಅನ್ನೋ ಯುವತಿ ವಿದ್ಯಾಭ್ಯಾಸಕ್ಕೆ ಅಂತಾ ತನ್ನ ಮಾವನ ಮನೆಯಾದ ಹಲಗೇರಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಳು. ಸಿಂಧು ಪರಮಣ್ಣನವರ್ ತನ್ನ ಕ್ಲಾಸ್ಮೆಂಟ್ ಕ್ಯಾವ್ಯಾ ಜೊತೆಗೆ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆದೇ ಸಮಯದಲ್ಲಿ ಸಿಂಧು ಬಾಳಿಗೆ ಬಿರುಗಾಳಿಯಂತೆ ಎಂಟ್ರಿ ಕೊಟ್ಟವನ ಹೆಸರು ಶರತ್ ಕುಮಾರ್. ಈತ ಸಿಂಧು ಫ್ರೆಂಡ್ಸ್ ಕ್ಯಾವ್ಯಾಳ ಅಣ್ಣನೇ ಆಗಿದ್ದ. ರಾಣೇಬೆನ್ನೂರು ತಾಲೂಕಿನ ಕುದರಿಹಾಳದ ನಿವಾಸಿ ಆಗಿದ್ದ ಶರತ್ ಕುಮಾರ್, ಮಾಜಿ ಶಾಸಕ ಬಿಜೆಪಿಯ ಅರುಣ್ ಪೂಜಾರಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ..

ಸ್ನೇಹಿತೆ ಕಾವ್ಯಾ ಜೊತೆಗೆ ಆಗಾಗ ಸಿಂಧು ಮನೆಗೆ ಬರ್ತಿದ್ದಳು. ಆ ವೇಳೆ ಆಕೆಯನ್ನು ಸೆಳೆದ ಶರತ್ ಕುಮಾರ್. ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದನು. ಸಿಂಧು ಪ್ರೇಮ ಪಾಶದಲ್ಲಿ ಬೀಳುತ್ತಿದ್ದ ಹಾಗೆ, ಇಬ್ಬರು ಪ್ರೇಮಾನುರಾಗದಲ್ಲಿ ಮುಳುಗಿದ್ದರು. ಕಳೆದ 4 ವರ್ಷದಿಂದ ಇಬ್ಬರು ಪ್ರೀತಿಯ ಅಮಲಿನಲ್ಲೇ ತೇಲಾಡಿದ್ರು. ಪ್ರಿಯಕರನ ಬಲೆಗೆ ಬಿದ್ದವಳು ತನ್ನ ಸರ್ವಸ್ವವನ್ನೇ ಅರ್ಪಿಸಿಕೊಂಡಳು. ಇಬ್ಬರ ಮಧ್ಯೆ ಸರಸ ಸಲ್ಲಾಪ ಶುರುವಾಗಿತ್ತು. ಅಷ್ಟರಲ್ಲಿ ಸಿಂಧು 3 ತಿಂಗಳ ಗರ್ಭಿಣಿ ಆಗಿದ್ದಾಳೆ ಅನ್ನೋದು ಗೊತ್ತಾಗಿತ್ತು. ಈ ವಿಷಯವನ್ನು ಸಿಂಧು ಹೇಳುತ್ತಿದ್ದ ಹಾಗೆ ದೇಹವನ್ನು ಹುರಿದು ಮುಕ್ಕಿದ್ದ ಕಿರಾತಕ ನಿರಾಕರಿಸಿದ್ದ. ಪೊಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಯೂ ಆಗಿತ್ತು. ಆದರೂ ಶರತ್ ಮಾತ್ರ ಕಡ್ಡಿ ಮುರಿದ ಹಾಗೆ ಮದುವೆಗೆ ನಿರಾಕರಿಸಿದ್ದ.

ಶರತ್ಗೆ ಮೆಸೇಜ್ ಮಾಡಿದ್ದ ಸಿಂಧು ಕಾಡಿ ಬೇಡಿ ಮದುವೆ ಆಗುವಂತೆ ಮನವಿ ಮಾಡಿದ್ದಳು. ಆದರೆ ಆಕೆಯನ್ನು ಪ್ರೀತಿಸದೆ ದೇಹವನ್ನು ಅಷ್ಟೇ ಇಚ್ಛಿಸಿದ್ದ ಕಟುಕ ಮನಸ್ಸಿನ ಶರತ್ ಸಾಧ್ಯವೇ ಇಲ್ಲ ಎಂದಿದ್ದ. ಮನನೊಂದ ಮಗಳು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರೋಶದ ಕಟ್ಟೆ ಒಡೆದಿತ್ತು. ಗರ್ಭಿಣಿ ಮಾಡಿ ಕೈಕೊಟ್ಟ ಅಮರ ಪ್ರೇಮಿ ಶರತ್ ಮನೆ ಮುಂದೆ ಶವವಿಟ್ಟು ರಾತ್ರಿಯೆಲ್ಲಾ ಗೋಳಾಡಿದ್ರು. ಮೊದಲೇ ರಾಜಕೀಯ ಪ್ರಭಾವ ಹೊಂದಿರುವ ಹುಡುಗ ಸದ್ಯ ಎಸ್ಕೇಪ್ ಆಗಿದ್ದಾನೆ. ಈಗ ಪ್ರಕರಣ ದಾಖಲಿಸಿರುವ ಪೊಲೀಸರು ಮೊದಲೇ ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದರೆ ಆ ಭಯಕ್ಕಾದರೂ ಮದುವೆ ಆಗುವ ಸಾಧ್ಯತೆಯಿತ್ತು. ಅಥವಾ ನಿರಾಕರಿಸಿದ ಮೇಲೆ ಆಕೆಗೆ ಕೌನ್ಸೆಲಿಂಗ್ ಮಾಡಿಸಿ ಮುಂದಿನ ಜೀವನದ ಬಗ್ಗೆ ತಿಳಿಸಬೇಕಿತ್ತು. ಯಾವುದನ್ನೂ ಮಾಡದ್ದಕ್ಕೆ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.



