ಬೆಂಗಳೂರಿನಲ್ಲಿ ಪಾಪಿ ಮಗನಿಂದಲೇ ತಂದೆ – ತಾಯಿ ಕೊಲೆಯಾಗಿದೆ. 60 ವರ್ಷದ ನವೀನ್ ಚಂದ್ರ ಭಟ್, 55 ವರ್ಷದ ಶ್ಯಾಮಲಾ ಭಟ್ ಕೊಲೆಯಾದ ದಂಪತಿ. 33 ವರ್ಷದ ಮಗ ರೋಹನ್ ಚಂದ್ರ ಭಟ್ ಎಂಬಾತನಿಂದ ಕೊಲೆ ನಡೆದಿದೆ. HAL ಬಳಿಯ ವಿಜ್ಞಾನ ನಗರದ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಜೋಡಿ ಕೊಲೆ ನಡೆದಿದೆ ಅನ್ನೋ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದ್ದು, ಚಾಕುವಿನಿಂದ ಇರಿದ ಮಗ ಆ ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾನೆ.
ಬುಧವಾರ ಬೆಳಗ್ಗೆ 7.30 ರ ಸುಮಾರಿಗೆ ಘಟನೆ ನಡೆದಿದ್ದು, ಚಾಕುವಿನಿಂದ ತಂದೆ ತಾಯಿ ಇಬ್ಬರಿಗೂ ಇರಿದ ಬಳಿಕ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಿಸದೇ ದಂಪತಿ ಸಾವನ್ನಪ್ಪಿದ್ದಾರೆ. ಚಾಕು ಇರಿತದ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಗ ರೋಹನ್ ಚಂದ್ರ ಭಟ್ನನ್ನ ಬಂಧಿಸಿದ್ದಾರೆ. ಮೃತದೇಹಗಳು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಮೆರಿಕದಿಂದ ಮಗಳು ವಾಪಸ್ ಆದ ಬಳಿಕ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ.
ಕೊಲೆಯಾದ ನವೀನ್ ಚಂದ್ರ ಭಟ್ ನಿವೃತ್ತ ಜಲಸೇನ ಕ್ಯಾಪ್ಟನ್ ಆಗಿದ್ದರು. ಪತ್ನಿ ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ದಂಪತಿ ವಾಸವಾಗಿದ್ದ ಅಪಾರ್ಟ್ಮೆಂಟ್ ನಿವಾಸಿಗಳೂ ಪೊಲೀಸರಿಗೆ ದೂರು ನೀಡಿದ್ದಾರೆ. ಚಾಕುವಿನಿಂದ ಇರಿದು ನಂತರ ಆಸ್ಪತ್ರೆಗೆ ಸೇರಿಸಿದ ಮಗ ಎಂದು ತಿಳಿಸಿದ್ದಾರೆ. ಕೊಲೆಗೆ ನಿಖರ ಕಾರಣ ಮಾತ್ರ ಪತ್ತೆಯಾಗಿಲ್ಲ. ಆರೋಪಿ ಬಂಧಿಸಿದ ಹೆಚ್ಎಎಲ್ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ತಂದೆ ಜೊತೆಗೆ ಹಣಕಾಸು ವಿಚಾರಕ್ಕೆ ಜಗಳ ಆಗಿತ್ತು. ಇದೇ ಕಾರಣಕ್ಕೆ ಬೆಳಗ್ಗೆಯೂ ಗಲಾಟೆ ಮಾಡಿಕೊಂಡಿರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸದ್ಯಕ್ಕೆ ಯಾವುದೇ ಕೆಲಸ ಮಾಡದೆ ಮನೆಯಲ್ಲೇ ಉಳಿದಿದ್ದ ಮಗ ರೋಹನ್, ಕಳೆದ ವರ್ಷ ಗಲಾಟೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಿದ್ದನು. ಆ ಬಳಿಕ ತಂದೆ ತಾಯಿ ಜೊತೆಗೆ ಬಂದು ವಾಸವಿದ್ದು, ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.
ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಮಗ ರೋಹನ್ ಚಂದ್ರ ಭಟ್, ತಂದೆ ಜೊತೆಗೆ ಗಲಾಟೆ ವೇಳೆಯೇ ಚಾಕುವಿನಿಂದ ತಂದೆಗೆ ಇರಿದಿದ್ದಾನೆ. ಆ ಬಳಿಕ ತಂದೆಗೆ ಅಡ್ಡಲಾಗಿ ಬಂದ ತಾಯಿಗೂ ಚಾಕು ಇರಿದಿದ್ದಾನೆ. ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿರೋ ಆರೋಪಿ ರೋಹನ್ ಭಟ್, ನಾಲ್ಕು ಲಕ್ಷ ಹಣವನ್ನು ತಂದೆ ತಾಯಿ ಬಳಿ ಕೇಳಿದ್ದ. ಆದರೆ ಹಣ ಕೊಡಲು ನಿರಾಕರಿಸಿದಾಗ ಜಗಳವಾಗಿ ಮನೆಯಲ್ಲಿರೋ ಚಾಕುವಿನಿಂದ ಇರಿದಿದ್ದ ಎನ್ನಲಾಗ್ತಿದೆ. ಪೊಲೀಸರ ತನಿಖೆ ವೇಳೆ ಮಾನಸಿಕವಾಗಿ ವಿಚಿತ್ರ ವರ್ತನೆ ತೋರುತ್ತಿದ್ದಾನೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ.


