ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಕೋರ್ಟ್ಗೆ ಹೇಳಿದ್ದ ಅನಾಮಿಕನನ್ನು SIT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಸತತ ನಾಲ್ಕೂವರೆ ಗಂಟೆಗಳ ಕಾಲ SIT ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಹಲವು ಪ್ರಶ್ನೆಗಳನ್ನು ಕೇಳಿರೋ SIT ಟೀಂ, 1994 ರಿಂದ 2014 ರವರೆಗಿನ ಶವಗಳ ಹೂತು ಹಾಕಿರೋ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಜೊತೆಗೆ ಅನಾಮಿಕನ ಜೊತೆ ಇದ್ದವರ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡಲಾಗಿದೆ. ಇದುವರೆಗೂ 17 ಸ್ಪಾಟ್ ತೋರಿಸಿದ್ದು ಅದರಲ್ಲಿ ಸ್ಪಾಟ್ ನಂಬರ್ 6ರಲ್ಲಿ ಮಾತ್ರ ಮೂಳೆ ಸಿಕ್ಕಿದೆ. ಒಂದೇ ಒಂದು ಕಡೆ ಮಾತ್ರ ಅಸ್ಥಿಪಂಜರ ಸಿಕ್ಕಿದೆ. ಮತ್ತೊಂದು ಕಡೆ ಅನಾಮಿಕ ತೋರಿಸಿದ ಸ್ಥಳದ ಪಕ್ಕದಲ್ಲೇ ಅಸ್ಥಿ ಪಂಜರ ಸಿಕ್ಕಿದೆ.

ಈ ಬಗ್ಗೆಯೂ SIT ಅಧಿಕಾರಿಗಳು ಅನಾಮಿಕ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದು, ಧರ್ಮಸ್ಥಳದಲ್ಲಿ ಭೌಗೋಳಿಕವಾಗಿ ಸಾಕಷ್ಟು ಬದಲಾವಣೆ ಆಗಿದೆ. ಕೆಲವು ಕಡೆಗಳಲ್ಲಿ ಮರಗಳು ಬೆಳೆದಿವೆ, ಇನ್ನು ಕೆಲ ಕಡೆ ಮರಗಳ ಬೇರುಗಳು ಬೆಳೆದಿವೆ. ಹೀಗಾಗಿ ನಿರ್ದಿಷ್ಟವಾದ ಸ್ಥಳ ಗುರ್ತಿಸೋದಕ್ಕೆ ಸ್ವಲ್ಪ ಕಷ್ಟ ಆಗ್ತಿದೆ. ಆದರೆ ನಾನು ಶವಗಳನ್ನು ಹೂತು ಹಾಕಿರೋದು ಸತ್ಯ ಎಂದಿದ್ದಾನಂತೆ. ಇನ್ನು ಮೂರು ಕಡೆಗಳಲ್ಲಿ ಜಾಗ ತೋರಿಸ್ತೀನಿ, ಅಲ್ಲಿಯೂ ಮಣ್ಣು ಅಗೆದರೆ ಶವಗಳ ಅಸ್ಥಿ ಸಿಗುತ್ತದೆ. ಬೇಕಾದರೆ ನನ್ನ ಜೊತೆಯಲ್ಲಿ ಕೆಲಸ ಮಾಡ್ತಾ ಇದ್ದವರ ಬಳಿ ಕೇಳಿ ಎಂದು ನಾಲ್ಕೈದು ಜನರ ಹೆಸರು ಹೇಳಿದ್ದಾನೆ ಎನ್ನಲಾಗಿದೆ.

ನೂರಾರು ಶವಗಳನ್ನು ನಾನು ಹೂತಾಕಿದ್ದೀನಿ, ಬಹುತೇಕ ಹೆಣ್ಣು ಮಕ್ಕಳ ಶವಗಳ ಮೇಲೆ ಗಾಯದ ಗುರುತುಗಳು ಇದ್ದವು. ಮೇಲ್ನೋಟಕ್ಕೆ ಅತ್ಯಾಚಾರ ಆಗಿರೋ ಹಾಗೆ ಅನಿಸುತ್ತದೆ. ಮಾಹಿತಿ ಕೇಂದ್ರದಿಂದ ನನಗೆ ಸೂಚನೆ ಬರುತಿತ್ತು. ನಾನು ಹೋಗ್ತಾ ಇದ್ದೆ, ಅವರು ಹೇಳಿರೋ ಕಡೆ ಹೋಗಿ ಶವ ತೆಗೆದುಕೊಂಡು ಹೋಗಿ ಮಣ್ಣು ಮಾಡ್ತಿದ್ದೆ. ನಾನು ಶವ ಹೂತು ಹಾಕಿದ ಬಗ್ಗೆ ಗ್ರಾಮ ಪಂಚಾಯ್ತಿಗೆ ವಿಚಾರ ಹೇಳುತ್ತಿರಲಿಲ್ಲ. ಪೊಲೀಸರಿಗೂ ವಿಚಾರ ಹೇಳ್ತಿರಲಿಲ್ಲ. ಧರ್ಮಸ್ಥಳದ ಮಾಹಿತಿ ಕೇಂದ್ರದಿಂದ ಬಂದ ಆದೇಶವನ್ನು ಅಷ್ಟೇ ನಾನು ಪಾಲನೆ ಮಾಡುತ್ತಿದ್ದೆ ಎಂದಿದ್ದಾನೆ ಎನ್ನಲಾಗ್ತಿದೆ.

ಬಹುತೇಕ ಸರ್ಕಾರಕ್ಕೆ ಕೊಡೋ ವರದಿಯಲ್ಲಿ ಇದನ್ನೆಲ್ಲಾ SIT ಉಲ್ಲೇಖ ಮಾಡುವ ಸಾಧ್ಯತೆ ಇದೆ. ಆದರೆ ಆತ ಹೇಳಿದಂತೆ ತನಿಖೆ ವೇಳೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಅಂತ ವರದಿ ನೀಡುವ ಮೂಲಕ ಅಲ್ಲಿಗೆ ಅಂತ್ಯ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ನಡುವೆ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್, ಅನಾಮಿಕ ಹೇಳಿರುವುದು ನೋಡಿದರೆ ಸಂಚು ಮಾಡಿದ್ದಾರೆ ಎಂದಿದ್ದಾರೆ. ಆದರೆ ಸರ್ಕಾರದ ಪ್ರಮುಖ ಸ್ಥಾನದಲ್ಲಿ ಇದ್ದವರೇ ಈ ರೀತಿಯ ಹೇಳಿಕೆ ಕೊಟ್ಟಿರುವುದು SIT ತನಿಖೆ ಹಾಗೂ SIT ಅಧಿಕಾರಿಗಳು ನೀಡುವ ವರದಿ ಮೇಲೂ ಅನುಮಾನ ಮೂಡುವಂತೆ ಮಾಡಿದೆ. ಸೋಮವಾರ ವಿಧಾನಸಭೆಯಲ್ಲಿ SIT ಬಗ್ಗೆ ಅಧಿಕೃತ ನಿರ್ಧಾರ ಪ್ರಕಟ ಆಗುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ.


