ಹಾಸನ ಜಿಲ್ಲೆ ಬೇಲೂರು ಬಳಿಯ ಕೆರೆ ಬಳಿ 29 ವರ್ಷದ ಪ್ರಿಯಾಂಕಾ ಎಂಬ ಮಹಿಳೆಯ ಒಳ ಉಡುಪುಗಳು ಪತ್ತೆ ಆಗಿದ್ದವು. ಇದರಿಂದ ಗಾಬರಿಯಾದ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಾಸನ ಜಿಲ್ಲಾ ಪೊಲೀಸರು ಮೂರು ವಿಶೇಷ ತಂಡ ರಚನೆ ಮಾಡಿ ಮಹಿಳೆ ಪತ್ತೆಗೆ ಜಾಲ ಬೀಸಿದ್ದರು. ಈ ಮಹಿಳೆ ಮನೆಯಿಂದ ಹೋಗುವಾಗ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿದ್ದರು ಅನ್ನೋದು ಕೂಡ ವಿಶೇಷ. ಅತ್ತ ಬೇಲೂರಿನಲ್ಲಿ ರಾತ್ರೋರಾತ್ರಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೆರೆಯಲ್ಲಿ ಶೋಧ ಶುರು ಮಾಡಿತ್ತು. ಮಹಿಳೆಯ ಬಟ್ಟೆ, ಬ್ಯಾಗ್, ಚಪ್ಪಲಿ ಪತ್ತೆಯಾದ ಹೆದ್ದಾರಿ ಪಕ್ಕದ ಕೆರೆಯಲ್ಲಿ ಶೋಧ ಮಾಡಿದ್ದರು. ಆದರೆ ಅಷ್ಟರಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮತ್ತಾವರ ಮೂಲದ ಪ್ರಿಯಾಂಕಾಳನ್ನು ತುಮಕೂರು ಜಿಲ್ಲೆ ಕುಣಿಗಲ್ ಮೂಲದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಚಿಕ್ಕಮಗಳೂರಿನಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿದ್ದ ಪ್ರಿಯಾಂಕಾ, ಮದುವೆ ಮುಗಿಸಿ, ಕೆಲ ಸಮಯ ತಾಯಿ ಮನೆಗೆ ಹೋಗಿ ವಿಶ್ರಾಂತಿ ಪಡೆದು ಕುಣಿಗಲ್ ಕಡೆಗೆ ತೆರಳಿದ್ದರು. ಆದರೆ ಬೇಲೂರಿಂದ ತೆರಳುವ ಮಾರ್ಗ ಮಧ್ಯೆ ಬೇಲೂರಿನಲ್ಲಿ ನನ್ನ ಸಂಬಂಧಿಕರು ಸಿಕ್ಕಿದ್ದಾರೆ. ನಾನು ಊರಿಗೆ ಹೋಗ್ತೇನೆ ಎಂದು ಹೇಳಿ ಹೊರಟವಳು, ಬೇಲೂರು ಸಮೀಪದ ಕೆರೆ ಬಳಿ ಪ್ಯಾಂಟ್, ಒಳ ಉಡುಪು, ಚಪ್ಪಲಿ, ಐಡಿ ಕಾರ್ಡ್ ಬಿಸಾಕಿ ಎಸ್ಕೇಪ್ ಆಗಿದ್ದಳು. ನಾಪತ್ತೆ ಆಗಿದ್ದಾಳೆ ಅನ್ನೋ ವಿಚಾರ ಮಾಧ್ಯಮಗಳಲ್ಲಿ ತಲ್ಲಣಿಸಿದ ಕೂಡಲೇ ಪೊಲೀಸರು ತನಿಖೆಗೆ ಮುಂದಾಗಿದ್ದರು. ಇದೀಗ ಕುಣಿಗಲ್ನ ಲಾಡ್ಜ್ ಒಂದರಲ್ಲಿ ಗೆಳಯ ಡೇವಿಡ್ ಜೊತೆಗೆ ಸಿಕ್ಕಿ ಬಿದ್ದಿದ್ದಾಳೆ. ಗಂಡನ ಮನೆಗೆ ಹೋಗ್ತೇವೆ ಅಂತಾ ಹೊರಟವಳು ಮಾರ್ಗ ಮಧ್ಯೆ ಲಾಡ್ಜ್ಗೆ ಹೋಗಿದ್ದಳು.

ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕುಣಿಗಲ್ನಲ್ಲಿ ಪತ್ತೆ ಮಾಡಲಾಗಿದೆ. ಮಹಿಳೆ ಸಾವನ್ನಪ್ಪಿಲ್ಲ ಜೀವಂತವಾಗಿ ಇದ್ದಾಳೆ ಅನ್ನೋದನ್ನು ಪೊಲೀಸರು ಖಾತ್ರಿಪಡಿಸಿಕೊಂಡಿದ್ದಾರೆ. ಇದೀಗ ಪೊಲೀಸರು ಪ್ರಕರಣದ ವಿಚಾರಣೆಗೆ ಮುಂದಾಗಿದ್ದು, ಮಹಿಳೆಯನ್ನು ಹಾಸನ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಡೀ ದಿನ ಶೋಧ ಕಾರ್ಯಾಚರಣೆ ನಡೆಸಿದರೂ ಕೆರೆಯಲ್ಲಿ ಸಿಗದ ಮಹಿಳೆ ಕುರುಹು ಸಿಕ್ಕಿರಲಿಲ್ಲ. 30 ಲಕ್ಷದ ಚಿನ್ನಾಭರಣ ಹಾಕಿದ್ದ ಮಹಿಳೆಯನ್ನು ಕೊಲೆ ಮಾಡಿ ಕೆರೆಯಲ್ಲಿ ಎಸೆಯಲಾಗಿದೆ ಅನ್ನೋ ಅನುಮಾನದಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗಿತ್ತು. ಉಡುಪಿಯಿಂದ ಖ್ಯಾತ ಮುಳುಗು ತಜ್ಞರ ತಂಡದಿಂದ ಕೆರೆಯಲ್ಲಿ ಶೋಧ ಕಾರ್ಯ ಮಾಡಲಾಗ್ತಿತ್ತು. ಈ ಬಗ್ಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ಎಸ್ಕೇಪ್ ಆಗಿದ್ದ ಮಹಿಳೆ ಪ್ರಿಯಾಂಕಾ ಶನಿವಾರ ರಾತ್ರಿ ಪೊಲೀಸರ ಕೈಗೆ ಲಾಡ್ಜ್ನಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಅಕ್ರಮ ಸಂಬಂಧ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಗೊತ್ತಿರುವವರು ಸಿಕ್ಕಿದ್ದಾರೆ, ನಾನು ಊರಿಗೆ ಹೋಗ್ತಿದ್ದೀನಿ ಎಂದಿದ್ದ ಮಹಿಳೆ ಪ್ರಿಯಾಂಕಾ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಲಾಡ್ಜ್ನಲ್ಲಿ ಮಸ್ತಿ ಮಾಡ್ತಿದ್ದಳು ಅನ್ನೋದು ಗೊತ್ತಾದ ಬಳಿಕ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಪ್ರಕರಣ ದಾಖಲು ಮಾಡಿ ನಾಲ್ಕು ತಿಂಗಳು ಜೈಲುವಾಸದ ಅನುಭವ ಕೊಟ್ಟರೆ, ಈ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುವುದು ತಪ್ಪಲಿದೆ. ಇಲ್ಲದಿದ್ದರೆ ಗಂಡನನ್ನು ಬಿಟ್ಟು ತೆವಲಿಗಾಗಿ ತೆರಳುವ ಮಹಿಳೆಯರನ್ನು ಹುಡುಕುವುದೇ ಪೊಲೀಸರ ಕಾಯಕ ಆದರೂ ಅಚ್ಚರಿಯೇನು ಇಲ್ಲ. ಪ್ರತಿನಿತ್ಯ ರಾಜ್ಯದಲ್ಲಿ ಒಂದೆರಡು ಪ್ರಕರಣಗಳು ಇದೇ ರೀತಿ ನಡೆಯುತ್ತಿದ್ದರೆ..! ಕಥೆ ಏನು ಎನ್ನುವಂತಾಗಿದೆ.


