ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಬೆಂಗಳೂರಿಗೆ ಬಂದಿದ್ರು. ಅಂದು ಡಿಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯ ವೇಷ ಭೂಷಣವನ್ನೇ ಅನುಸರಿಸಿದಂತೆಯೂ ಕಂಡು ಬಂತು. KSR ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿದ ಡಿಸಿಎಂ ಡಿಕೆ ಶಿವಕುಮಾರ್ ಸಂಪೂರ್ಣ ಕಾರ್ಯಕ್ರಮ ಮುಗಿಯುವ ತನಕ ಜೊತೆಯಲ್ಲೇ ಸಾಥ್ ನೀಡಿದ್ದರು. ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ರೈಲು ನಿಲ್ದಾಣದ ತನಕವೂ ಜೊತೆಯಲ್ಲೇ ಕುಳಿತು ಉಭಯ ಕುಷಲೋಪರಿ ವಿಚಾರ ಮಾಡುತ್ತನಗುವಿನ ಅಲೆಯಲ್ಲಿ ತೇಲಿದ್ದರು. ಆ ಬಳಿಕ, IIIT ಸಭಾಂಘಣದಲ್ಲಿ ನಡೆದ ಕಾರ್ಯಕ್ರಮದಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್ ಮೋದಿ ಜೊತೆಗೆ ಮಾತುಕತೆಯಲ್ಲಿ ತೊಡಗಿದ್ದರು.

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ವೇಳೆ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾಗ್ತಿದ್ದ ಹಾಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಬೆಂಗಳೂರಿಗೆ ಬೇಕಿರುವ ಯಹೋಜನೆಗಳು ಮತ್ತು ಅನುದಾನದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ರು. ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳು ಹಾಗು ಕೇಂದ್ರ ಸರ್ಕಾರದಿಂದ ಬೇಕಿರುವ ಅಗತ್ಯ ನೆರವು ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಮಹಾರಾಷ್ಟ್ರ ಹಾಗೂ ಗುಜರಾತ್ ಅಭಿವೃದ್ಧಿಗೆ ಸಹಕಾರ ನೀಡುವಂತೆ ಬೆಂಗಳೂರು ಅಭಿವೃದ್ಧಿಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಎಲ್ಲಾ ಯೋಜನೆಗಳನ್ನೂ ಮೋದಿಗೆ ತೋರಿಸಿ, ದಾಖಲೆಗಳ ಸಮೇತ ಅಭಿವೃದ್ಧಿಗೆ ಸಹಕಾರ ಕೋರುವ ಕೆಲಸ ಮಾಡಿದ್ರು. ಈ ನಡುವೆ ಮೋದಿಗೆ ಬೆಳ್ಳಿ ಗಣಪತಿಯೊಂದನ್ನು ಉಡುಗೊರೆ ಆಗಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಗೆ ಯಾವುದೇ ಉಡುಗೊರೆ ಕೊಡಬೇಕಿದ್ದರೂ SPG ಭದ್ರತೆಯನ್ನು ಮುಗಿಸಿಯೇ ಹೋಗಬೇಕು. ನಿಮ್ಮ ಉಡುಗೊರೆಯನ್ನು ನರೇಂದ್ರ ಮೋದಿ ಗಮನಕ್ಕೆ ತಂದ ಬಳಿಕವಷ್ಟೇ ಅದು ವೇದಿಕೆ ಮೇಲೆ ಬರುವುದಕ್ಕೆ ಸಾಧ್ಯ. ಹೀಗಿರುವಾಗ ಡಿ.ಕೆ ಶಿವಕುಮಾರ್ ಅವರು ಬೆಳ್ಳಿ ಗಣೇಶನ ವಿಗ್ರಹವನ್ನು ಉಡುಗೊರೆ ಆಗಿ ನೀಡಿದ್ದರು. ಆದರೆ ಈ ಉಡುಗೊರೆಯನ್ನು ತಂದಿದ್ದು ಬಿಜೆಪಿ ಶಾಸಕ, ಆದರೆ ಆ ಉಡುಗೊರೆಯನ್ನು ಪ್ರಧಾನಿ ಮೋದಿಗೆ ಕೊಟ್ಟಿದ್ದು ಡಿ.ಕೆ ಶಿವಕುಮಾರ್ ಅನ್ನೋ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ರೀತಿಯ ಸುದ್ದಿ ಪ್ರಸಾರ ಮಾಡುವ ಮುನ್ನ ಒಮ್ಮೆ ಪರಿಶೀಲನೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರರಾದ ತ್ಯಾಗರಾಜ ಪುಟ್ಟಪ್ಪ ಅವರು ಜಾಲತಾಣದಲ್ಲಿ ಬರೆದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದಿದ್ದ ಗಣೇಶನ ವಿಗ್ರಹವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನರೇಂದ್ರ ಮೋದಿಗೆ ಕೊಟ್ಟಿದ್ದಲ್ಲ. ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಮನೆಯಿಂದ ಗಣೇಶ ಮೂರ್ತಿಯನ್ನು ತಂದಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಚೇರಿ ಸಿಬ್ಬಂದಿ SPG ಭದ್ರತಾ ಸಿಬ್ಬಂದಿ ಬಳಿ ಕೊಟ್ಟು ಪರೀಕ್ಷೆ ನಡೆಸಿದ ಬಳಿಕವೇ ಉಡುಗೊರೆಯನ್ನು ನರೇಂದ್ರ ಮೋದಿಯವರಿಗೆ ಕೊಟ್ಟದ್ದು. ಈ ಸುದ್ದಿಯನ್ನು ನೊಡಿದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಸ್ವತಃ ಫೋನ್ ಮಾಡಿ, ಪೇಪರ್ನಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ನಾನು ಈ ರೀತಿ ಯಾರಿಗೂ ಹೇಳಿಲ್ಲ, ನನಗೆ ವೇದಿಕೆ ಮೇಲೆ ಹೋಗುವುದಕ್ಕೇ ಅವಕಾಶ ಇರಲಿಲ್ಲ, ನಾನು ಹೇಗೆ ವಿಗ್ರಹ ತರಲಿ ಎಂದಿದ್ದಾರೆ. ಹಾಗಿದ್ದ ಮೇಲೆ ಈ ರೀತಿಯ ಸುಳ್ಳು ಸುದ್ದಿ ಸೃಷ್ಟಿಯಾಗಿದ್ದು ಎಲ್ಲಿಂದ..? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರವನ್ನು ವಿಜಯವಾಣಿ ಪತ್ರಿಕೆ ಅವರೇ ಕೊಡಬೇಕಿದೆ. ಆದರೂ ಈ ರೀತಿಯ ಸುದ್ದಿ ಮಾಡುವಾಗ ರಾಜ್ಯ ಮಟ್ಟದ ಪತ್ರಿಕೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಆ ರೀತಿ ಆಗಿದ್ದರೂ ಸತ್ಯವೇ ಎಂದು ಒಮ್ಮೆ ಪರೀಕ್ಷಿಸಿದ್ದರೆ ಚೆನ್ನಾಗಿತ್ತು ಎನ್ನಬಹುದು.


