ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಜಾಮೀನು ರದ್ದು ಮಾಡಿದೆ. ಜೊತೆಗೆ ಈ ಆದೇಶ ಇಡೀ ದೇಶಕ್ಕೆ ಅನ್ವಯ ಆಗಲಿದೆ ಎಂದಿರುವ ಕೋರ್ಟ್, ದೇಶದ ಎಲ್ಲಾ ರಾಜ್ಯಗಳ ಹೈಕೋರ್ಟ್ಗೆ ಆದೇಶದ ಪ್ರತಿ ಸಲ್ಲಿಸಲು ಸೂಚನೆ ಕೊಡಲಾಗಿದೆ. ಆರೋಪಿಗಳಿಗೆ ಜೈಲಿನಲ್ಲಿ 5 ಸ್ಟಾರ್ ಆತಿಥ್ಯ-ನೀಡಿರುವುದೂ ಜಾಮೀನು ರದ್ದಾಗಲು ಪ್ರಮುಖ ಕಾರಣ ಎನ್ನಬಹುದು. ಇನ್ಮುಂದೆ ಜೈಲಿನಲ್ಲಿ ಇಂಥಾ ಘಟನೆಗಳು ನಡೆದರೆ ಸುಮ್ನಿರಲ್ಲ. ಮೊದಲು ಜೈಲು ಅಧೀಕ್ಷಕರನ್ನ ಅಮಾನತು ಮಾಡಲಾಗುತ್ತದೆ. ದುಷ್ಕೃತ್ಯದಲ್ಲಿ ಭಾಗಿಯಾಗುವ ಬೇರೆ ಅಧಿಕಾರಿಗಳಿಗೂ ಅನ್ವಯ ಆಗಲಿದೆ. ಈ ಆದೇಶ ಎಲ್ಲಾ ಜೈಲು ಅಧೀಕ್ಷಕರಿಗೆ, ರಾಜ್ಯ ಸರ್ಕಾರಕ್ಕೂ ಅನ್ವಯ ಆಗಲಿದೆ ಎಂದಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಜಾಮೀನು ರದ್ದು ಮಾಡುವಾಗ ಆರೋಪಿಗಳ ಪರ ವಕೀಲರ ವಾದಕ್ಕೂ ಮನ್ನಣೆ ನೀಡಿದೆ. ದರ್ಶನ್ ಪ್ರಕರಣದಲ್ಲಿ ಪೊಲೀಸರ ವರ್ತನೆಯನ್ನೂ ಖಂಡಿಸಿದೆ. ಆರೋಪಿಗಳ ಪರ ವಕೀಲರ ವಾದವನ್ನ ಕೋರ್ಟ್ ಗೌರವಿಸುತ್ತದೆ. ಪೊಲೀಸರು ಸಂವಿಧಾನದ 22(1)ನೇ ವಿಧಿ ಪಾಲಿಸಬೇಕು. ಯಾರನ್ನೇ ಬಂಧಿಸಿದ್ರೂ ನಿಖರವಾದ ಕಾರಣ ನೀಡಬೇಕು. ಕಾರಣವನ್ನೇ ತಿಳಿಸದೇ ಹೆಚ್ಚು ಟೈಂ ಬಂಧನದಲ್ಲಿ ಇಟ್ಟುಕೊಳ್ಳಬಾರದು. 50 (1) Cr.PC ಅಡಿ ವಾರಂಟ್ ಇಲ್ಲದೇ ಬಂಧಿಸಬಹುದು. ಆದ್ರೆ ಯಾವ ಅಪರಾಧಕ್ಕೆ ಬಂಧನ ಅಂತ ಕಾರಣ ತಿಳಿಸಬೇಕು ಎಂದು ಸೂಚಿಸಿದೆ.
ಸುಪ್ರೀಂಕೋರ್ಟ್ ಆದೇಶ ದರ್ಶನ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಅನ್ನೋದು ಸತ್ಯವೇ ಆಗಿದೆ. ದರ್ಶನ್ ಅಂಡ್ ಗ್ಯಾಂಗ್ಗೆ ಬೇಲ್ ರದ್ದಾದ ಬಳಿಕ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡರ್, ದರ್ಶನ್ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಈ ಆದೇಶದಿಂದ ನ್ಯಾಯಾಂಗದ ಮೇಲೆ ನಂಬಿಕೆ ಹೆಚ್ಚಾಗಿದೆ. ರೇಣುಕಾಸ್ವಾಮಿ ಪತ್ನಿ ಸಹನಾ ಮಾತನಾಡಿ, ಕಾನೂನಿನ ಎದುರು ಎಲ್ಲರೂ ಸಮಾನರು. ತಪ್ಪು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ರೇಣುಕಾಸ್ವಾಮಿ ತಾಯಿ ರತ್ನ ಮಾತನಾಡಿ, ಇವತ್ತಿನ ಕೋರ್ಟ್ ತೀರ್ಪು ನಮಗೆ ನಂಬಿಕೆ ಮೂಡಡಿಸಿದೆ ಎಂದಿದ್ದಾರೆ.
ದರ್ಶನ್ ಗ್ಯಾಂಗ್ನಲ್ಲಿ ಆರೋಪಿ ಆಗಿ ಜಾಮೀನು ಪಡೆದು, ಮತ್ತೆ ಜಾಮೀನು ರದ್ದಾದ ಬಳಿಕ ಮತ್ತೆ ಬಂಧನಕ್ಕೆ ಒಳಗಾಗಿರುವ A7 ಅನುಕುಮಾರ್ ಅಲಿಯಾಸ್ ಅನು ತಾಯಿ ಜಯಮ್ಮ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದ ಬಳಿಕ ಕಣ್ಣೀರು ಹಾಕಿದ್ದಾರೆ. ನಮ್ಮ ಮಗ ಜೈಲಿನಿಂದ ವಾಪಸ್ ಆದಾಗ ನೆಮ್ಮದಿ ಆಗಿದ್ದೆವು. ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡ್ತಿದ್ದೇವೆ. ಮತ್ತೆ ಇದೇ ಪರಿಸ್ಥಿತಿ ಬಂದ್ರೆ ಬದುಕೋದು ಹೇಗೆ..? ನಾವು ಈ ನೋವನ್ನ ಸುಧಾರಿಸಿಕೊಳ್ಳೋದು ಹೇಗೆ..? ನಮಗ್ಯಾರೂ ಕೈ ಹಿಡಿದಿಲ್ಲ, ನಮ್ಮ ಕಷ್ಟಕ್ಕೆ ಯಾರೂ ಆಗಿಲ್ಲ. ದೇವರು ನೆಮ್ಮದಿ ಕೊಡಲಿಲ್ಲ ಎಂದು ಗೋಳಾಡಿದ್ದಾರೆ. ಅಪರಾಧ ಮಾಡುವಾಗ ನಾವು ಹೇಗೆ ಆ ಅಪರಾಧದಲ್ಲಿ ಸೇರಿಕೊಳ್ತೇವೆ ಅನ್ನೋದು ಅನುಕುಮಾರ್ ವಿಚಾರದಲ್ಲಿ ಸತ್ಯವಾಗಿದೆ.


