ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ ಜನ ಜೀವನ ಅಸ್ತವ್ಯಸ್ಥ ಆಗಿದೆ. ಯಾದಗಿರಿ ಜಿಲ್ಲೆಯ ಅಲಿಪುರ ಗ್ರಾಮಕ್ಕೆ ಜನರಿಗೆ ಜಲದಿಗ್ಬಂದನ ಉಂಟಾಗಿದೆ. ಊರಿನ ಕೆರೆ ಭರ್ತಿಯಾಗಿ ಕೋಡಿ ಮೇಲಿಂದ ನೀರು ಹರಿದು ಗ್ರಾಮಕ್ಕೆ ನುಗ್ಗಿದೆ. ಯಾದಗಿರಿ ತಾಲೂಕಿನ ಅಲಿಪುರ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಗ್ರಾಮದ 30 ಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತ ಆಗಿವೆ. ಮನೆಯೊಳಗೆ ನೀರು ನುಗ್ಗಿದ್ರಿಂದ ಧವಸ ಧಾನ್ಯಗಳೆಲ್ಲಾ ನೀರು ಪಾಲಾಗಿದೆ. ಮತ್ತೊಂದೆಡೆ ಚಾಮನಾಳ ಗ್ರಾಮದ ಹಳ್ಳದ ಸೇತುವೆಯೂ ಜಲಾವೃತ ಆಗಿದ್ದು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಗದಗ ಜಿಲ್ಲೆಯ ನವಿಲು ತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಮಾಡಲಾಗಿದೆ. ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಮಲಪ್ರಭಾ ನದಿ ಪಾತ್ರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನರಗುಂದ ತಾಲೂಕಿನ ಲಖಮಾಪೂರ, ವಾಸನ, ಕೊಣ್ಣೂರ, ಶಿರೋಳ ಸೇರಿದಂತೆ ನದಿ ಪಾತ್ರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲಪ್ರಭಾ ನದಿಗೆ ಜನ ಜಾನುವಾರುಗಳ ಜೊತೆಗೆ ಹೋಗದಂತೆ ಸೂಚನೆ ಕೊಡಲಾಗಿದೆ. ಧ್ವನಿ ವರ್ಧಕದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲೂ ಭಾರೀ ಮಳೆಯಾಗ್ತಿದೆ. ಬೋಂತಿ ನಾಮಾ ನಾಯಕ ತಾಂಡಾ ಕೆರೆ ಕಟ್ಟೆ ಒಡೆದು ಹೋಗಿದ್ದು, ಜಮೀನಿಗೆಲ್ಲಾ ನೀರು ನುಗ್ಗಿದೆ. ಇದರ ಪರಿಣಾಮ ಸೋಯಾಬಿನ್, ತೊಗರಿ, ಹೆಸರು, ಉದ್ದು ಬೆಳೆ ನೀರು ಪಾಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಸರ್ವನಾಶವಾಗಿದೆ.. ಕಮಲನಗರ ತಾಲೂಕಿನ ನಂದಿ ಬಿಜಲಗಾಂವ್ ಗ್ರಾಮದಲ್ಲಿ 15 ಎಮ್ಮೆಗಳು ಕೊಚ್ಚಿ ಹೋಗಿದ್ದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಎಮ್ಮೆಗಳ ಕಳೇಬರಹ ಪತ್ತೆಯಾಗಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗ್ತಿದೆ. ಪರಿಣಾಮ ಕೆಆರ್ಎಸ್ ಡ್ಯಾಂಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ 50 ಸಾವಿರ ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗ್ತಿದೆ. ನದಿ ಪಾತ್ರದ ಜನ ಸುರಕ್ಷಿತವಾಗಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಾಗಲಕೋಟೆಯ ಲೋಕಾಪುರ ಪಟ್ಟಣದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ವಸ್ತುಗಳು, ದವಸ ಧಾನ್ಯಗಳು ಮಳೆ ನೀರಿಗೆ ಆಹುತಿಯಾಗಿವೆ. ಶಿವಮೊಗ್ಗದಲ್ಲಿ ಭದ್ರಾನದಿ ನೀರು ಎಲ್ಲೆಂದರಲ್ಲಿ ನುಗ್ತಿದ್ದು, ಭದ್ರಾವತಿಯ ಹೊಸ ಸೇತುವೆ ಬಹುತೇಕ ಮುಳುಗಿ ಹೋಗಿದೆ. ನದಿ ಪಾತ್ರದ ಜನರಿಗೆ ಮಳೆ ನೀರು ನುಗ್ಗುವ ಅತಂಕ ಶುರುವಾಗಿದ್ದು, ವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆದೆ ಜಿಲ್ಲಾಡಳಿತ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಶೃಂಗೇರಿ ತಾಲೂಕಿನ ತೆಕ್ಕೂರು ಬಳಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿದ್ದು, ಶೃಂಗೇರಿ – ತೆಕ್ಕೂರು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತ ಆಗಿದೆ. ಧಾರಾಕಾರ ಮಳೆಗೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಬಳಿಯ ಕೊಂಡೇಖಾನ್ ಸಮೀಪ ಮಣ್ಣು ಕುಸಿದಿದೆ. ಮಣ್ಣು ಕುಸಿದ ಹಿನ್ನೆಲೆ ಕೆಸರು ರಸ್ತೆಯಲ್ಲಿ ಪ್ರವಾಸಿಗರು ಸಿಲುಕಿ ಪರದಾಡಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಇಲ್ಲೆದೆ ಗೋಳಾಡುವಂತಾಗಿದೆ. ಮಳೆಯಾದ್ರೆ ಸಾಕು ವಿದ್ಯಾರ್ಥಿಗಳ ಜಾಗರಣೆ ಶುರುವಾಗುತ್ತದೆ. ಸೋರುತ್ತಿರುವ ವಸತಿ ನಿಲಯದಲ್ಲಿ ಮಕ್ಕಳು ವಾಸ ಮಾಡಬೇಕಾಗಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮದ ಹಾಸ್ಟೆಲ್ ಇದಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಯಲದಲ್ಲಿ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಹಾಸ್ಟೆಲ್ ಇದಾಗಿದ್ದು, ಹಾಸ್ಟೆಲ್ ನಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದ್ದಾರೆ. ಆದ್ರೆ ಬಡ ಮಕ್ಕಳಿಗೆ ಮೂಲ ಸೌಕರ್ಯ ಸಿಗ್ತಿಲ್ಲ. ಕುಡಿಯಲು, ದಿನ ಬಳಕೆಗೆ ನೀರು ಸಿಗುತ್ತಿಲ್ಲ. ವಸತಿ ನಿಲಯದ ಕೊಠಡಿಗಳು ಮಳೆ ಬಂದ್ರೆ ಸೋರುತ್ತಿವೆ ಎಂದು ಆರೋಪಿಸಲಾಗಿದೆ.


