ಜಮ್ಮು ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ ಸಂಭವಿಸಿದೆ. ಮತ್ತೆ 11 ಜನರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನ ಕಣ್ಮರೆ ಆಗಿದ್ದಾರೆ. ಕಣಿವೆ ರಾಜ್ಯದ ಜನರ ನೆಮ್ಮದಿಯನ್ನು ಹಾಳು ಮಾಡಿದ್ದಾನೆ ವರುಣ. ಜಮ್ಮು ಕಾಶ್ಮೀರದ ಜನರ ನೆಮ್ಮದಿಯೇ ಮಳೆಯಲ್ಲಿ ಕೊಚ್ಚಿ ಹೋಗಿದೆ. ಕಳೆದ 10 ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಮಳೆ ಬಹುತೇಕ ರಾಜ್ಯವನ್ನೇ ಮುಳುಗಿಸಿದೆ. ಇಲ್ಲಿವರೆಗೂ ಸುಮಾರು 150ಕ್ಕೂ ಹೆಚ್ಚು ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ.. ಇಷ್ಟಾದ್ರೂ ವರುಣಾರ್ಭಟ ಮಾತ್ರ ಕಡಿಮೆಯಾಗಿಲ್ಲ.

ಜಮ್ಮು ಕಾಶ್ಮೀರದ ರಿಯಾಸಿಯ ಭದ್ದರ್ ಗ್ರಾಮದಲ್ಲಿ ಮೇಘಸ್ಫೋಟದ ಜೊತೆಗೆ ಭೂಕುಸಿತ ಆಗಿದೆ. ಭೂಮಿ ಕುಸಿದ ರಭಸಕ್ಕೆ ಭದ್ದರ್ ಗ್ರಾಮದ ಒಂದೇ ಕುಟುಂಬದ 7 ಸಾವನ್ನಪ್ಪಿದ್ದಾರೆ. ಮನೆಯ ಮಾಲೀಕ ನಜೀರ್ ಅಹ್ಮದ್, ಪತ್ನಿ ವಝೀರಾ ಬೇಗಂ (35) ಮಕ್ಕಳಾದ ಬಿಲಾಲ್ ಅಹ್ಮದ್ (13) ಮೊಹಮ್ಮದ್ ಮುಸ್ತಫಾ (11) ಮೊಹಮ್ಮದ್ ಆದಿಲ್ (08) ಮುಬಾರಕ್ (6) ಮತ್ತು 5 ವರ್ಷದ ಮೊಹಮ್ಮದ್ ವಾಸಿಂ ಮೃತಪಟ್ಟಿದ್ದಾರೆ.. 7 ಜನರ ಸಾವಿಗೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ

ಜಮ್ಮು ಕಾಶ್ಮೀರ ರಂಬನ್ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಐವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರಾಜ್ಗಢ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ ನಂತರ ಹಠಾತ್ ಪ್ರವಾಹ ಉಂಟಾಗಿ ಐವರು ಕಣ್ಮರೆಯಾಗಿದ್ದಾರೆ. ಎರಡೂ ಸ್ಥಳಗಳಲ್ಲಿ ಸೇನಾಪಡೆ, SDRF, NDRF ಸೇರಿದಂತೆ ರಕ್ಷಣಾ ಸಿಬ್ಬಂದಿ ಬದುಕುಳಿದ ಜನರಿಗಾಗಿ ಹುಡುಕಾಟ ನಡೆಸಿದ್ದಾರೆ. ಬಿಟ್ಟೂ ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನಾಹುತಗಳ ಮೇಲೆ ಅನಾಹುತಗಳು ಆಗ್ತಿದ್ದು, ಜನರು ಜಾಗರೂಕತೆಯಿಂದ ಇರಬೇಕು. ಭೂಕುಸಿತದ ಜಾಗಗಳಲ್ಲಿ ವಾಸವಿದ್ರೆ ಮನೆ ಬಿಟ್ಟು ಹೊರಗೆ ಬನ್ನಿ ಅಂತಾನೂ ಸಿಎಂ ಓಮರ್ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಇನ್ನೂ ಹಿಮಾಚಲ ಪ್ರದೇಶದಲ್ಲೂ ವರುಣ ತನ್ನ ರಣಚಂಡಿ ಆಟವನ್ನು ಮುಂದುವರಿಸಿದ್ದಾನೆ. ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಭೂಕುಸಿತ ಆಗ್ತಿದೆ. ಮನಾಲಿ ನಗರದಿಂದ ಕೂಗಳತೆ ದೂರದಲ್ಲೇ ಭೂಕುಸಿತವಾಗಿ ಹೆದ್ದಾರಿ ಬಂದ್ ಆಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲೂ ಪ್ರವಾಹ ಹೆಚ್ಚಾಗಿ ಸಾವು ನೋವುಗಳು ಸಂಭವಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವು ನೀಡುವ ಕೆಲಸ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲೂ ಗಂಗಾ ನದಿ ಉಕ್ಕಿ ಹರಿದು 17ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ ಆಗಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಾಜಿಪುರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಗುಜರಾತ್ನ ಸಬರ್ಕಾಂತದಲ್ಲೂ ರಣಮಳೆ ಅಟ್ಟಹಾಸ ಮಾಡುಇತ್ತಿದೆ. ರಕ್ಕಸ ಮಳೆಯಿಂದಾಗಿ ಸಬರ್ಕಾಂತದಲ್ಲಿ ಮನೆಗಳು, ಕಾರುಗಳು ಸಂಪೂರ್ಣವಾಗಿ ಮುಳುಗಿವೆ.ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ಅಬ್ಬರ ಇರಲಿದ್ದು, ಉತ್ತರ ಭಾರತದ ಹಲವು ರಾಜ್ಯಲ್ಲಿ ಮಳೆ ಅಬ್ಬರಿಸಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


