ದೇಶದಲ್ಲಿ ವೋಟ್ ಚೋರಿ ಅಂದ್ರೆ ಮತಗಳ್ಳತನ ನಡೆಯುತ್ತಿದೆ ಅನ್ನೋ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಲೇ ಇದೆ. ಆದರೆ ಆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಅಫಿಡವಿಟ್ ಕೊಟ್ಟು ಕೇಸ್ ದಾಖಲು ಮಾಡಿ ಎಂದರೆ ಕಾಂಗ್ರೆಸ್ ನಾಯಕರು ಅದಕ್ಕೆ ಸಿದ್ಧರಿಲ್ಲ. ಅಫಿಡವಿಟ್ ಕೊಟ್ಟರೆ ಸಿಕ್ಕಿ ಬೀಳ್ತೇವೆ ಅನ್ನೋ ಭಯ ಇದ್ದಿರಬೇಕು. ಆದರೆ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರೇ ಬಿಹಾರದಲ್ಲಿ ವೋಟ್ ಅಧಿಕಾರ್ ಯಾತ್ರೆ ನಡೆಸುತ್ತಿದ್ದು, ಮತಗಳ್ಳತನಕ್ಕೆ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದೀಗ ಕರ್ನಾಟಕ ರಾಜ್ಯದಲ್ಲಿ EVM ಬದಲು ಬ್ಯಾಲೆಟ್ ಪೇಪರ್ ಬಳಸಿ ಮತದಾನ ಮಾಡಿಸಲು ಸರ್ಕಾರ ಮುಂದಾಗಿದೆ.

ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅಗತ್ಯ ಕಾನೂನು ತಿದ್ದುಪಡಿ ತರಲು, ನಿಯಮಾವಳಿ ರಚನೆ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದಿದ್ದಾರೆ. ಜೊತೆಗೆ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ Electronic voting machine (EVM) ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಶಿಫಾರಸು ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು. ನಿಯಮಾವಳಿಗಳಿಗೂ ಕೆಲವು ತಿದ್ದುಪಡಿ ಮಾಡಬೇಕಾಗುತ್ತದೆ ಅಂತಾನೂ ಮಾಹಿತಿ ನೀಡಿದ್ದಾರೆ.
ಆಧುನಿಕತೆ ಬಂದ ಹಾಗೆ ಹೊಸ ಆವಿಷ್ಕಾರಗಳು ನಡೆಯುವುದು ಸರ್ವೇ ಸಾಮಾನ್ಯ. ಹೊಸತನದೊಂದಿಗೆ ಜನರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೆ ಹಿಂದಿನ ಕಾಲದ ಪದ್ದತಿಗೆ ಹೋಗೋಣ ಎಂದರೆ ಎಷ್ಟು ಸರಿ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಲ್ಲೂ ಹುಟ್ಟಿಕೊಳ್ಳುತ್ತದೆ. ಸರ್ಕಾರದ ನಿರ್ಧಾರ ಹೇಗಿದೆ ಎಂದರೆ ಕೀಪ್ಯಾಡ್ ಮೊಬೈಲ್ ಇದ್ದಾಗ ಯಾವುದೇ ಇನ್ಸ್ಟಾ, FB ಸೇರಿದಂತೆ ಜಾಲತಾಣಗಳು ಇರಲಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ಗಳು ಬರುತ್ತಿರಲಿಲ್ಲ. ಆಂಡ್ರಾಯ್ಡ್ ಸೇರಿದಂತೆ ಟಚ್ ಪ್ಯಾಡ್ ಮೊಬೈಲ್ಗಳು ಬಂದ ಬಳಿಕವೇ ಹೀಗೆಲ್ಲಾ ಆಗ್ತಿದೆ. ಹೀಗಾಗಿ ನಾವು ಮೊದಲಿನಂತೆ ಟಚ್ ಪ್ಯಾಡ್ ಮೊಬೈಲ್ ಬಳಸೋಣ ಎಂದರೆ ಸಾಧ್ಯವೆ..? ಅನ್ನೋ ಪ್ರಶ್ನೆಗೆ ಸರ್ಕಾರವೇ ಉತ್ತರ ಕಂಡುಕೊಳ್ಳಬೇಕಿದೆ.

ಈ ಹಿಂದೆ ನಮ್ಮ ಬಾಲ್ಯದ ಸಮಯದಲ್ಲಿ ವೋಟಿಂಗ್ ಮುಗಿಒದ ಬಳಿಕ ಕಳ್ ವೋಟ್ ಹಾಕುವುದಕ್ಕೆ ನಾಲ್ಕೈದು ಜನರು ಕುಳಿತಿರುತ್ತಿದ್ದರು, ಜನರನ್ನು ಹೊರಕ್ಕೆ ಕಳುಹಿಸಿದ ಬಳಿಕ ಏಜೆಂಟ್ನ ಮನವೊಲಿಸಿ ವೋಟಿಂಗ್ ಮಾಡಲಾಗ್ತಿತ್ತು ಅನ್ನೋ ಮಾತುಗಳು ನಮ್ಮ ಕಿವಿಗೂ ಬಿದ್ದಿದೆ. ಕೆಲವೊಮ್ಮೆ ವೋಟ್ ಬೂತ್ ಎತ್ತಿಕೊಂಡು ಹೋಗುವ ಚುನಾವಣಾ ಸಿಬ್ಬಂದಿಗಳನ್ನೇ ಪುಸಲಾಯಿಸಿ, ಹಣದ ಆಮೀಷವೊಡ್ಡಿ ವ್ಯಾನ್ಗಳಲ್ಲೇ ಮತದಾನ ಮಾಡಿಕೊಳ್ತಿದ್ರು ಅನ್ನೋ ಮಾತುಗಳು ಹಿರಿಯ ಪತ್ರಕರ್ತರೇ ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಬ್ಯಾಲೆಟ್ ಪೇಪರ್ನಲ್ಲಿ ಕಳ್ಳ ಮತದಾನ ಆಗುವುದಿಲ್ಲ ಎನ್ನುವುದಕ್ಕೆ ಸಾಧ್ಯವಿದೆಯೇ..?

ಇವಿಎಂ ಮಷಿನ್ನಲ್ಲಿ ಏನೂ ಆಗೋದೇ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳುತ್ತಿದೆ. ಆದರೆ ಇವಿಎಂ ಮಷಿನ್ನಿಂದ ಮತಗಳ ಕಳ್ಳತನ ಆಗುತ್ತದೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಸಾಬೀತು ಮಾಡಿ ತೋರಿಸಬೇಕು ಅಲ್ಲವೇ..? ಸರ್ಕಾರ ಅದನ್ನು ಒಪ್ಪದಿದ್ದಾಗ ಸುಪ್ರೀಂಕೋರ್ಟ್ ಕದ ತಟ್ಟುವ ಅವಕಾಶ ಕಾಂಗ್ರೆಸ್ಗೆ ಮಾತ್ರವಲ್ಲ, ಯಾರ್ಯಾರು ಇವಿಎಂ ವೋಟಿಂಗ್ ಮಷಿನ್ ವಿರೋಧಿಸುತ್ತಿದ್ದಾರೆ ಎಲ್ಲರಿಗೂ ಅವಕಾಶವಿದೆ. ಆದರೆ ರಾಜಕೀಯ ಕಾರಣಕ್ಕೆ ಮತ್ತೆ ಬ್ಯಾಲೆಟ್ ಪೇಪರ್ ಮತದಾನ ಮಾಡ್ತೇವೆ ಅನ್ನೋದು ಮೂರ್ಖತನವಾದೀತು. ತಪ್ಪುಗಳಿದ್ದಾಗ ಸರಿಪಡಿಸಲು ನೂರಾರು ಮಾರ್ಗಗಳು ಇರುವಾಗ ಬ್ಯಾಲೆಟ್ ಪೇಪರ್ ಬಳಕೆ ಸಲ್ಲದು.


