ಮೂತ್ರ ವಿಸರ್ಜನೆಗೆ ಹೋಗಬೇಕು ಎಂದ ವಿದ್ಯಾರ್ಥಿ ಥಳಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಾನುಮತಿ ಎಂಬ ಶಿಕ್ಷಕಿ ವಿದ್ಯಾರ್ಥಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಯಳಂದೂರು ತಾಲೂಕಿನ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಎರಡು ಮೂರು ಬಾರಿ ಕೇಳಿದ್ದ ವಿದ್ಯಾರ್ಥಿಗೆ ಮೊದಲು ನೋಟ್ಸ್ ಬರೆದುಕೋ ಅಂತಾ ಹೇಳಿದ್ರಂತೆ ಶಿಕ್ಷಕಿ. ಮೂತ್ರ ವಿಸರ್ಜನೆಗೆ ಅವಸರವಾದ ಹಿನ್ನಲೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದಾಗಿ ಕೇಳಿದ್ದಕ್ಕೆ ಕೋಪಗೊಂಡು ಕೋಲಿನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೈ, ಭುಜ ಹಾಗೂ ಕುಂಡಿಯ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ವಿದ್ಯಾರ್ಥಿ ಮೇಲೆ ಶಿಕ್ಷಕಿಯಿಂದ ಮನಬಂದಂತೆ ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ವಿದ್ಯಾರ್ಥಿ ಮಾತನಾಡಿದ್ದು, ಮೇಡಂ ಬೋರ್ಡ್ ಮೇಲೆ ಬರೆಯುತ್ತಿದ್ದರು. ಮೂತ್ರ ವಿಸರ್ಜನೆಗೆ ಅವಸರವಾಗಿತ್ತು. ಮೂತ್ರ ವಿಸರ್ಜನೆಗೆ ಹೋಗಲು ಪರ್ಮಿಷನ್ ಕೇಳಿದೆ. ಮೊದಲು ನೋಟ್ಸ್ ಬರೆದುಕೊ ಅಂತಾ ಹೇಳಿದರು. ಅವಸರ ಆಗ್ತಿದ್ರಿಂದ ಬರೆಯೊಕೆ ಆಗ್ತಿರಲಿಲ್ಲ. ನಾನು ಮೂರು ಬಾರಿ ಹೋಗಲೂ ಅನುಮತಿ ಕೇಳಿದೆ. ನೋಟ್ಸ್ ಏನು ಬರೆದಿದ್ದಿಯಾ ಅಂತಾ ಚೆಕ್ ಮಾಡಿದರು. ಮೇಡಂ ಅರ್ಜೆಂಟ್ ಆಗಿದೆ, ಬರೆಯೊಕೆ ಆಗ್ತಿರಲಿಲ್ಲ ಎಂದೆ. ಮೊದಲು ತಲೆಗೆ ಹೊಡೆದರು. ನಂತರ ಜಾಮಿಟ್ರಿ ಬಾಕ್ಸ್ ಮುರಿದು ಹೋಗುವ ತನಕ ಹೊಡೆದರು. ನಂತರ ಪಕ್ಕದ. ರೂಮಿನಿಂದ ಕೋಲು ತಂದು ಮನಸೋ ಇಚ್ಚೆ ಹಲ್ಲೆ ನಡೆಸಿದರು. ಸುಸ್ತಾಗಿ ಕೆಲಹೊತ್ತು ಮಲಗಿದ್ದೆ. ಸಂಜೆ ಮನೆಗೆ ಬಂದು ನಮ್ಮ ಅಪ್ಪನ ಬಳಿ ಬಗ್ಗೆ ಹೇಳಿದೆ ಎಂದಿದ್ದಾನೆ ವಿದ್ಯಾರ್ಥಿ.
ವಿದ್ಯಾರ್ಥಿ ಮೇಲೆ ಶಿಕ್ಷಕಿಯಿಂದ ಮನಬಂದಂತೆ ಥಳಿತ ಪ್ರಕರಣದ ಬಗ್ಗೆ ಮಾತನಾಡಿರುವ ಪೋಷಕರು, ಶಿಕ್ಷಕಿ ಭಾನುಮತಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಶಾಲಾ ಆಡಳಿತ ಮಂಡಳಿ ಯಾವುದಕ್ಕೂ ಕೂಡ ಸ್ಪಂದಿಸುತ್ತಿಲ್ಲ. ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಬೇಕು. ಆಕೆಗೆ ಎಲ್ಲೂ ಕೆಲಸ ಸಿಗಬಾರದು. .ಶಿಕ್ಷಕಿಯನ್ನು ವಜಾ ಮಾಡುವರೆಗೂ ನನ್ನ ಮಗನನ್ನು ಶಾಲೆಗೆ ಕಳಿಸಲ್ಲ. ಆಡಳಿತ ಮಂಡಳಿಯವರು ಇಲ್ಲಿಯವರೆಗೂ ಬಂದು ವಿಚಾರಿಸಿಲ್ಲ. ಹಿಂದೆಯೂ ಕೂಡ ಆಕೆ ಐದಾರು ಮಕ್ಕಳಿಗೆ ಹೊಡೆದಿದ್ದಾರೆ ಎಂದು ವಿದ್ಯಾರ್ಥಿ ತಂದೆ ಶಿವಕುಮಾರ್ ಹೇಳಿದ್ದಾರೆ.

ವಿದ್ಯಾರ್ಥಿ ಮೇಲೆ ಶಿಕ್ಷಕಿಯಿಂದ ಮನಸೋ ಇಚ್ಛೆ ಥಳಿತ ಪ್ರಕರಣದ ಬಳಿಕ ಶಿಕ್ಷಕಿಯನ್ನು ವಜಾಗೊಳಿಸಿದೆ ಶಾಲಾಡಳಿತ ಮಂಡಳಿ. ಯಳಂದೂರು ಎಸ್ಡಿವಿಎಸ್ ಶಾಲೆಯಲ್ಲಿ ಘಟನೆ ನಡೆದಿತ್ತು. ಶಿಕ್ಷಕಿ ಭಾನುಮತಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಮೂತ್ರ ವಿಸರ್ಜನೆಗೆ ಹೋಗಬೇಕೆಂದ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ್ದರು. ವಿದ್ಯಾರ್ಥಿಯ ಮೈಮೇಲೆಲ್ಲಾ ಬಾಸುಂಡೆ ಬಂದಿತ್ತು. ಶಿಕ್ಷಕಿಯ ಪೈಶಾಚಿಕ ವರ್ತನೆಗೆ ಪೋಷಕರು ಆಕ್ರೋಶಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಜೊತೆ ಶಿಕ್ಷಣಾಧಿಕಾರಿಗಳು ಸಭೆ ನಡೆಸಿದ ಬಳಿಕ ಶಿಕ್ಷಕಿ ಮೇಲೆ ಕಾನೂನು ಕ್ರಮ ಜರುಗಿಸಲು ಶಿಕ್ಷಣಾಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.


