ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್. ಎಲ್ ಭೈರಪ್ಪ ಬಗ್ಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ನೆನಪು ಹಂಚಿಕೊಂಡಿದ್ದಾರೆ. ಕಾದಂಬರಿ ಒಂದರ ಸಂಬಂಧ ಮುಸ್ಲಿಂ ಕುಟುಂಬ ಬಗ್ಗೆ ತಿಳಿಯಲು ಬಂದಿದ್ದ ಭೈರಪ್ಪ ಅವರು ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಕಾಲ ತಂಗಿದ್ದರು. ತಮ್ಮ ಮನೆಯಲ್ಲಿ ತಂಗಿದ್ದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಬಾನು ಮುಷ್ತಾಕ್. ಭೈರಪ್ಪನವರು ಆವರಣ ಕಾದಂಬರಿ ರಚನೆ ಮಾಡೋ ವೇಳೆ ತಮ್ಮ ಮನೆಯಲ್ಲಿ ಉಳಿದಿದ್ದ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಭೈರಪ್ಪನವರು ತಮ್ಮ ಮನೆಗೆ ಬರ್ತೀನಿ ಎಂದಾಗ ನಾನು ಸಹಜವಾಗಿಯೇ ಗಲಿಬಿಲಿಯಾಗಿದ್ದೆ. ಅವರ ಬರುವಿಕೆಗಾಗಿ ನಾನ್ ವೆಜ್ನಿಂದ ತುಂಬಿದ್ದ ನಮ್ಮ ಮನೆಯ ಫ್ರಿಡ್ಜ್ ಖಾಲಿ ಮಾಡಿ ತರಕಾರಿ ತುಂಬಿಸಿದ್ದೆವು ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಪಿ ಶೇಷಾದ್ರಿ ಮಾತನಾಡಿ, ಭೈರಪ್ಪ ಜ್ಞಾನಪೀಠ ಪ್ರಶಸ್ತಿ ಬಾರದೇ ಇರುವ ಬಗ್ಗೆ ಬೇಸರಪಡಲಿಲ್ಲ. ಅಭಿಮಾನಿಗಳು, ಜನರ ಎದೆಯಲ್ಲಿ ನನಗೆ ಪ್ರತ್ಯೇಕ ಪೀಠ ಕೊಟ್ಟಿದ್ದಾರೆ. ಅದುವೇ ನನಗೆ ದೊಡ್ಡ ಪ್ರಶಸ್ತಿ ಎಂದಿದ್ದರು. ಸಾವಿನ ಬಗ್ಗೆಯೂ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು. ಬದುಕು-ಸಾವು ಕತ್ತಲು ಬೆಳಕಿನ ಅರ್ಥ ನೀಡಿದ್ದರು. ಮೃತರಾದವರು ಆ ಜಗತ್ತಿನಿಂದ ವಾಪಾಸ್ ಬಂದಿಲ್ಲ. ಸ್ವಿಚ್ ಆಫ್ ಆನ್ ನಂತೆ ಈ ಬದುಕು ಬದಲಾಗುತ್ತದೆ. ಅತಿ ಹೆಚ್ಚು ಕೃತಿ ಅನುವಾದವಾಗಿದೆ ಅಂದ್ರೆ ಅದು ಭೈರಪ್ಪನವರದ್ದು ಎಂದು ನೆನಪು ಮಾಡಿಕೊಂಡಿದ್ದಾರೆ.

ನಿರ್ದೇಶಕ ಟಿ ಎನ್ ಸೀತಾರಾಮ್ ಮಾತನಾಡಿ, ಸಾಹಿತ್ಯದಲ್ಲಿ ಬೇರೆ ಲೋಕವನ್ನೇ ಸೃಷ್ಟಿ ಮಾಡಿದವರು ಎಸ್.ಎಲ್ ಭೈರಪ್ಪ. ಸಾಹಿತ್ಯದಲ್ಲಿ ಅವರನ್ನ ಮೀರಿಸುವವರೇ ಇರಲಿಲ್ಲ. ಬೈರಪ್ಪ ಅವರನ್ನ ಇವತ್ತು ನಾವು ಕಳೆದುಕೊಂಡಿದ್ದೇವೆ. ನಾವೆಲ್ಲರೂ ಅವರ ಜೊತೆ ಓದುಗರಾಗಿ ಒಳ್ಳೆಯ ಒಡನಾಟ ಇಟ್ಟುಕೊಂಡವರು. ಅವರಿಂದ ಕಲಿತಿರೋದು ತುಂಬ ಇದೆ. ಯಾವ ದೇಶಕ್ಕೂ ಹೋದ್ರು ಅವರನ್ನ ನೆನೆಯಬೇಕು. ಅವರನ್ನ ಕಳೆದುಕೊಂಡಿರೋದು ನಿಜಕ್ಕೂ ದುಖಃದ ವಿಷಯ ಎಂದಿದ್ದಾರೆ.
ಸಾಹಿತಿ ಭೈರಪ್ಪ ಅವರ ನಿಧನಕ್ಕೆ ನಟ ಮಂಡ್ಯ ರಮೇಶ್ ಸಂತಾಪ ಸೂಚಿಸಿದ್ದಾರೆ. ಭೈರಪ್ಪ ಅವರಿಗೆ ಜ್ಞಾನಪೀಠ ಕೊಡದೇ ಇದ್ರೇ ಏನಂತೆ, ಜನರ ಮನದಲ್ಲಿ ಜ್ಞಾನಪೀಠ ಕೊಟ್ಟಾಗಿದೆ. ಅವರ ಕಾದಂಬರಿ ಓದದೇ ಇದ್ರೆ ಕನ್ನಡ ಸಾಹಿತ್ಯ ಪೂರ್ಣವಾಗಲ್ಲ. ಅಂತಾರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಹಿರಿಮೆ ಏರಿಸಿದವರು ಭೈರಪ್ಪ ಅವರು. ಚಲನಚಿತ್ರ ರಂಗದಲ್ಲಿ ಡಾ ರಾಜ್ ಕುಮಾರ್ ಹೇಗೋ ಅದೇ ರೀತಿ ಕನ್ನಡ ಸಾಹಿತ್ಯ ಲೋಕದಲ್ಲಿ ಭೈರಪ್ಪ ಅಜರಾಮರ. ಅವರ ಅಷ್ಟೂ ಕಾದಂಬರಿ ಓದಿದ್ದೇನೆ. ವಿವಾದಗಳು ಅವರ ಮೇಲಿದ್ದವು. ಅವರ ಬರಹ ಓದಿದವರಿಗೆ ಅವರೇನು ಅವರ ನಿಲುವೇನು ಎಂದು ಗೊತ್ತಾಗುತ್ತದೆ ಎಂದಿದ್ದಾರೆ.
ಎಸ್.ಎಲ್ ಭೈರಪ್ಪ ನಿಧನಕ್ಕೆ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಸಾಹಿತ್ಯ ಲೋಕದ ರತ್ನ ಭೈರಪ್ಪ, ಅವರ ಒಂದೊಂದು ಕಾದಂಬರಿಯು ಅವಿಸ್ಮರಣೀಯ ಎಂದಿದ್ದಾರೆ. ಸಾರಸ್ವತ ಲೋಕದ ಪ್ರಮುಖ ಕೊಂಡಿ ಕಳೆದುಕೊಂಡಿದ್ದು, ಇಂತಹ ಮಹಾನ್ ಚೇತನರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಯದುವೀರ್ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಸಂತಾಪ ಸೂಚಿಸಿದ್ದಾರೆ.
ಸಾಹಿತ್ಯ ಕ್ಷೇತ್ರದ ದಿಗ್ಗಜ, ಪದ್ಮಭೂಷಣ ಭೈರಪ್ಪನವರು ನಮ್ಮನ್ನ ಅಗಲಿರೋದು ದುಖಃ ತಂದಿದೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರು ಸಾಹಿತ್ಯ ಲೋಕದ ಮಾಣಿಕ್ಯ. ಕಳೆದ ಹಲವು ವರ್ಷಗಳಿಂದ ಅವರ ಜೊತೆ ಅವಿನಾಭಾವ ಸಂಬಂಧ ಇತ್ತು. ಜಯದೇವ ಆಸ್ಪತ್ರೆಗೂ ಬಂದಿದ್ರು. 2 ಲಕ್ಷ ರೂಪಾಯಿ ದೇಣಿಗೆಯನ್ನೂ ಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ದೇವರು ನೋವು ಭರಿಸೋ ಶಕ್ತಿ ಕೊಡಲಿ ಎಂದು ಮಂಜುನಾಥ್ ಹೇಳಿದ್ದಾರೆ.


