ಕಾಂಗ್ರೆಸ್ ಸರ್ಕಾರ ರಚನೆ ಆಗುವಾಗಲೇ ಭಾರೀ ಹಗ್ಗಜಗ್ಗಾಟ ನಡೆದಿತ್ತು. ಕೊನೆಗೆ ಇಬ್ಬರಿಗೂ ಎರಡೂವರೆ ವರ್ಷದ ಅವಧಿ ಅನ್ನೋ ಅಲಿಖಿತ ಒಪ್ಪಂದ ಮಾಡಿಕೊಂಡ ಬಳಿಕ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದರು. ಈ ಒಪ್ಪಂದದ ವಿಚಾರದ ದೆಹಲಿಯಿಂದ ಹೊರಡುವ ಮೊದಲೇ ಮಾಧ್ಯಮಗಳಿಗೆ ಮೌಕಿಕವಾಗಿ ಹೇಳಿ ಆಗಿತ್ತು. ಅದೇ ಕಾರಣಕ್ಕೆ ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರ ಆಗಿತ್ತು. ಆಗ ಯಾರೊಬ್ಬರೂ ಇದು ಸುಳ್ಳು ಎನ್ನುವ ಧೈರ್ಯ ಮಾಡಿರಲಿಲ್ಲ. ಏನೇ ಒಪ್ಪಂದ ಆಗಿದ್ದರೂ ಅದು ಹೈಕಮಾಂಡ್ ಮಟ್ಟದಲ್ಲಿ ಎಂದು ಹೇಳಿ ಸಮಯದೂಡುವ ಪ್ರಯತ್ನ ಮಾಡಿದ್ದರು. ಆ ಒಪ್ಪಂದ ಏನು..? ಈಗ ಜಾರಿಯಾಗುತ್ತಾ..? ಆ ಸಮಯ ಬಂದಿದ್ಯಾ..? ಅನ್ನೋ ಚರ್ಚೆ ಮತ್ತೆ ಶುರುವಾಗಿದೆ.

ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರ ಬೀಳಲಿದೆ. ಆ ಬಳಿಕ ಬಿಹಾರದಲ್ಲಿ ವಿಜಯ ಪತಾಕೆ ಹಾರಿಸುವ ಪಕ್ಷ ಅಧಿಕಾರ ಹಿಡಿಯುವುದು ಸರ್ವೇ ಸಮಾನ್ಯ. ಅದೇ ಸಮಯದಲ್ಲಿ ರಾಜ್ಯದಲ್ಲಿ ಅಧಿಕಾರ ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ ಅನ್ನೋದು ಕಾಂಗ್ರೆಸ್ ನಾಯಕರ ಅನಿಸಿಕೆ. ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯ ಇವತ್ತು ಕ್ಯಾಬಿನೆಟ್ ಸಚಿವರಿಗೆ ಔತಣಕೂಟ ಏರ್ಪಾಡು ಮಾಡಿದ್ದಾರೆ. ಈ ಡಿನ್ನರ್ ಮೀಟಿಂಗ್ ಬಗ್ಗೆ ಸಾಕಷ್ಟು ಜನರು ಸಮರ್ಥನೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಾಜಕೀಯವೇ ಇಲ್ಲ ಅಂತಾನೂ ಹೇಳುತ್ತಿದ್ದಾರೆ. ಜೊತೆಗೆ ಕೆಲವರು ಕ್ಯಾಬಿನೆಟ್ ಪುನಾರಚನೆ ಆಗುವ ಸಾಧ್ಯತೆ ಇದ್ದು, ಸಚಿವರಿಗೆ ಪರೋಕ್ಷವಾಗಿ ಮಾನಸಿಕ ಸಿದ್ಧತೆಗೆ ಸೂಚಿಸುತ್ತಾರೆ ಅಂತಾನೂ ಮಾಹಿತಿಯಿದೆ. ಆದರೆ ಡಿಕೆ ಶಿವಕುಮಾರ್ ಮಾತ್ರ ಸಿಎಂ ಕುರ್ಚಿ ಕಡೆಗೆ ಕಣ್ಣು ಬಿಟ್ಟು ಕುಳಿತಿದ್ದಾರೆ.
ನವೆಂಬರ್ 20ರ ಬಳಿಕ ಸಿಎಂ ಆಗ್ತೀನಿ ಅನ್ನೋ ಬಗ್ಗೆ ತನ್ನ ಆಪ್ತ ವಲಯದಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ ಎನ್ನಲಾಗ್ತಿದೆ. ತಮ್ಮ ಆಪ್ತರೊಂದಿಗೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಅಲ್ಲೀವರೆಗೂ ಯಾವುದೇ ನಕಾರಾತ್ಮಕ ಚರ್ಚೆಗಳು ಆಗದಂತೆ ನೋಡಿಕೊಳ್ತಿದ್ದಾರೆ. ಡಿ ಕೆ ಶಿವಕುಮಾರ್ ಮಾತಿನ ಬಳಿಕ ತಮ್ಮ ಸಾಹೇಬರು ಸಿಎಂ ಆಗ್ತಾರೆ ಅನ್ನೋ ಆಸೆಯಲ್ಲಿ ಆಪ್ತರು ಕೆಲಸ ಮಾಡ್ತಿದ್ದಾರೆ. ಇತ್ತೀಚಿಗಷ್ಟೇ ನೀವು ಸಿಎಂ ಆಗ್ಬೇಕು ಎಂದು ಹೇಳಿದ ವ್ಯಕ್ತಿಯೊಬ್ಬರಿಗೆ ಸಮಯ ಹತ್ತಿದ ಬಂದಿದೆ ಎಂದಿದ್ದರು ಡಿ.ಕೆ ಶಿವಕುಮಾರ್. ಆ ಬಳಿಕ ನನ್ನ ಮಾತನ್ನು ಬೇರೆ ರೀತಿ ಹೇಳ್ತಿದ್ದಾರೆ. ನಾನು ಹಾಗೆ ಹೇಳಿಲ್ಲ ಎಂದಿದ್ದರು. ಅದೇನೇ ಇರಲಿ, ಸಿಎಂ ಆಗುವ ಹಂಬಲದಲ್ಲಿ ಡಿಸಿಎಂ ಇದ್ದಾರೆ. ಯಾವುದೇ ರಾಜಕಾರಣಿಯಾದರೂ ಅದೊಂದು ಕನಸು. ಅದೇ ಕಾರಣಕ್ಕಾಗಿ ಸಿಕ್ಕ ಸಿಕ್ಕ ಸ್ವಾಮೀಜಿಗಳು, ಅವಧೂತರೂ ಕೂಡ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದೇ ಹಾರೈಸುತ್ತಿದ್ದಾರೆ.
ಸಿಎಂ ಔತಣಕೂಟ ಕೊಡುತ್ತಿರೋದು ಹಾಗೂ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದು ಎಲ್ಲದ್ದಕ್ಕೂ ತಾಳೆ ಹಾಕಿ ನೋಡಲಾಗ್ತಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದಾಗ ಏಕಾಏಕಿ ಹೊರಡುವ ಮೊದಲು ಎಲ್ಲಾ ಸಚಿವರುಗಳಿಗೆ ಒಂದು ಔತಣ ಏರ್ಪಡಿಸಿ ಉತ್ತಮ ರೀತಿಯಲ್ಲಿ ಸ್ಥಾನ ಬಿಟ್ಟುಕೊಡುವುದು ಎನ್ನಲಾಗ್ತಿದೆ. ಆದರೆ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ, ಏನಿದ್ದರೂ ಸಚಿವರ ಸ್ಥಾನಗಳನ್ನು ಬದಲಾವಣೆ ಮಾಡಬಹುದು. ಈಗ ಇರುವ ಅರ್ಧಕ್ಕೂ ಹೆಚ್ಚು ಜನರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ ಮಂತ್ರಿಗಳಾಗದೆ ಇರುವ ಪಕ್ಷದ ಹಿರಿಯ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಸರ್ಕಾರದ ಕೆಲಸಕ್ಕೆ ವೇಗ ನೀಡುವುದು, ಈ ಮೂಲಕ ಸಚಿವರಾಗಬೇಕು ಅನ್ನೋ ಕನಸು ಕಟ್ಟಿಕೊಂಡವರಿಗೆ ಅವಕಾಶ ಕೊಡುವುದು ಅಷ್ಟೇ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ಔತಣ ಕೂಡ ಜನರ ಮನಸ್ಸಲ್ಲಿ ಒಂದು ಬಗೆಯ ಅನಿಶ್ಚಿತತೆ ಕಟ್ಟಿಕೊಟ್ಟಿದೆ. ಎಲ್ಲದ್ದಕ್ಕೂ ಶೀಘ್ರವೇ ಉತ್ತರ ಸಿಗಬೇಕಿದೆ.


