ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರುತ್ತಿದೆ. ಈಗಾಗಲೇ ಅಬ್ಬರದ ಪ್ರಚಾರ ಮಾಡಲಾಗ್ತಿದೆ. ನಿನ್ನೆ ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿದ್ದಾರೆ. ಇನ್ನು ದಾವಣಗೆರೆಯಲ್ಲಿ ಇವತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಪ್ರಚಾರ ಮಾಡುವುದು ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಸೇರಿದಂತೆ ಇಲ್ಲೀವರೆಗೂ ಜಮೀರ್ ಅಹ್ಮದ್ ಚುನಾವಣಾ ಅಖಾಡಕ್ಕೆ ಪ್ರವೇಶ ಪಡೆದಿಲ್ಲ. ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಮುನಿದಿರುವ ಈ ಸಮಯದಲ್ಲಿ ಕಾಂಗ್ರೆಸ್ ಸಂಕಷ್ಟ ಅನುಭವಿಸುತ್ತಾ..? ಅನ್ನೋ ಶಂಕೆ ವ್ಯಕ್ತವಾಗ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ನನ್ನ ಬಳಿಕ ಮುಸ್ಲಿಮರು ಸ್ಪರ್ಧೆ ಮಾಡುವಂತೆ ಸೂಚಿಸಿದ್ರಂತೆ. ಹೀಗಾಗಿ ಸಾದಿಕ್ ಪೈಲ್ವಾನ್ ಈ ಬಾರಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ಕೂಡ ಟಿಕೆಟ್ ಆಕಾಂಕ್ಷಿಯಾಗಿ ಕಾಂಗ್ರೆಸ್ ಬಿ ಫಾರ್ಮ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದೀಗ ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದಿದ್ದಾರೆ. ಆದರೆ ನಾಮಪತ್ರ ವಾಪಸ್ ಪಡೆದಿಲ್ಲ. ಮುಸ್ಲಿಂ ಅಭ್ಯರ್ಥಿ ಆಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ಮುಸ್ಲಿಂ ಸಮುದಾಯ ಇನ್ನೂ 13 ಜನರು ಅಖಾಡದಲ್ಲಿದ್ದು, ಉಳಿದವರನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ.


ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಈ ಬಾರಿ ಗೆಲುವು ಕಂಡರೆ ಮುಂದಿನ ಒಂದು ಜನರೇಷನ್ ಕಾಲ ಅಂದರೆ 50 ರಿಂದ 60 ವರ್ಷಗಳ ಕಾಲ ರಾಜಕಾರಣ ಮಾಡಲು ಅವಕಾಶ ಇದೆ. ಅಲ್ಲೀವರೆಗೂ ಮುಸ್ಲಿಂ ಸಮುದಾಯ ಸಮರ್ಥ್ ಶಾಮನೂರು ಬೆಂಬಲಿಸಿಕೊಂಡು ರಾಜಕಾರಣ ಮಾಡಬೇಕಿದೆ. ಇನ್ನೆಂದೂ ಟಿಕೆಟ್ ಕೇಳುವ ಅವಕಾಶ ಸಿಗುವುದಿಲ್ಲ. ಹೀಗಾಗಿ ಈ ಬಾರಿ ಸಮರ್ಥ್ ಶಾಮನೂರು ಸೋಲಿಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೇಳಲು ಅವಕಾಶ ಸಿಗುತ್ತದೆ. ಸುಮಾರು 90 ಸಾವಿರದಷ್ಟು ಇರುವ ಮುಸ್ಲಿಂ ಮತದಾರರು ಈ ಬಗ್ಗೆ ಚಿಂತನೆ ಮಾಡ್ಬೇಕು ಅನ್ನೋದು ಮುಸ್ಲಿಂ ಸಮುದಾಯದ ನಾಯಕರ ಮಾತಾಗಿದೆ. ಆದರೆ ಜಮೀರ್ ನಡೆ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ.


ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮುಸ್ಲಿಮರಿಗೆ ಟಿಕೆಟ್ ಕೇಳಿದ್ದ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಾಯಕರನ್ನು ಗಮನ ಸೆಳೆಯುವ ಕೆಲಸ ಮಾಡಿದ್ದರು. ಆಗ ಆಕ್ರೋಶ ಹೊರಹಾಕಿದ್ದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಜಮೀರ್ ಅಹ್ಮದ್ ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಎಂಟ್ರಿ ಆಗಿದ್ಯಾಕೆ..? ಅವನಿಗೂ ದಾವಣಗೆರೆಗೂ ಏನು ಸಂಬಂಧ ಎಂದು ಏಕವಚನದಲ್ಲಿ ಮಾತನಾಡಿದ್ದರು. ಆ ಬಳಿಕ ಜಮೀರ್ ಕೂಡ ತಿರುಗೇಟು ನೀಡುವ ಕೆಲಸ ಮಾಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಜಮೀರ್ ಅಹ್ಮದ್ ಬಳಿ ಪ್ರಚಾರಕ್ಕೆ ಬರುವಂತೆ ಸೂಚಿಸಿದ್ದು, ಜಮೀರ್ ಪ್ರಚಾರಕ್ಕೆ ಬಾರದಿದ್ರೆ ಮುಸ್ಲಿಂ ಸಮುದಾಯಕ್ಕೆ ಬೇರೊಂದು ಸಂದೇಶ ರವಾನೆ ಆಗುವುದು ನಿಶ್ಚಿತ. ಆಗೊಂದು ವೇಳೆ ಮುಸ್ಲಿಂ ಸಮುದಾಯ ತಿರುಗಿಬಿದ್ದು ಮತಚಲಾಯಿಸಿದರೆ ಕಾಂಗ್ರೆಸ್ ಸೋಲುವುದು ನಿಶ್ಚಿತ ಅನ್ನೋದು ಮತದಾರರ ಅಭಿಪ್ರಾಯ.


