ಪ್ರೀತಿ, ಪ್ರೇಮ ಅನ್ನೋದು ಎಷ್ಟು ಮಧುರವೋ ಅಷ್ಟೇ ಘನ ಘೋರ. ಪ್ರೇಮದ ಹುಚ್ಚು ನೆತ್ತಿಗೇರಿದ್ರೆ ನಡೆಯೋದು ರಕ್ತಚರಿತ್ರೆ ಅನ್ನೋದು ಪ್ರತಿನಿತ್ಯ ಸಾಬೀತು ಆಗ್ತಿದೆ. ಅದರಲ್ಲೂ ಒನ್ ಸೈಡ್ ಲವ್ ಅನ್ನೋದು ಸಾಕಷ್ಟು ಡೇಂಜರ್ ಅನ್ನೋದು ಈ ಪ್ರಕರಣದಲ್ಲೂ ಗೊತ್ತಾಗಿದೆ. ಎದೆಯೊಳಗಿನ ಪ್ರೀತಿಯ ಕಿಚ್ಚಿಗೆ ಅಮಾಯಕ ಹೆಣ್ಣು ಮಗಳ ರಕ್ತ ಹರಿಸಿದ್ದಾನೆ. ಬೆಂಗಳೂರಲ್ಲಿ ಲವ್ ಮೀ, ಲವ್ ಮೀ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಹಾಡಹಗಲೇ ವಿದ್ಯಾರ್ಥಿನಿ ಹೆಣ ಕೆಡವಿದ್ದಾನೆ. ಮುದ್ದು ಮುಖದ ಚೆಲುವೆ ಯಾಮಿನಿ ಪ್ರಿಯಾ. ಶ್ರೀರಾಂಪುರದ ಸ್ವತಂತ್ರನಗರದ ನಿವಾಸಿ. ಬನಶಂಕರಿಯ ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮ್ ವ್ಯಾಸಾಂಗ ಮಾಡ್ತಿದ್ದಳು. ಹೆತ್ತವರ ಮುದ್ದಿನ ಮಗಳಾಗಿದ್ದ ಯಾಮಿನಿ, ಮೆಡಿಕಲ್ ಫೀಲ್ಡ್ನಲ್ಲಿ ಸಾಧನೆ ಮಾಡ್ಬೇಕು ಅನ್ನೋ ಕನಸು ಕಟ್ಟಿಕೊಂಡು ಓದಿನ ಕಡೆಗೆ ಗಮನ ಹರಿಸಿದ್ದಳು. ಆದರೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಎದುರಿನ ಮನೆಯ ಯುವಕ ಪ್ರೀತಿ ಸಿಗದಿದ್ದಾಗ ಕೊಲೆ ಮಾಡುವ ಸಂಚು ಮಾಡಿದ್ದಾನೆ.

ಯಾಮಿನಿ ಪ್ರಿಯಾಳ ಹಿಂದೆ ಬಿದ್ದಿದ್ದು ಎದುರಿನ ಮನೆಯ ವಿಘ್ನೇಶ್. ಯಾಮಿನಿ ಪ್ರಿಯಾ ಬಾಳಿಗೆ ಅಕ್ಷರಶಃ ವಿಘ್ನವಾಗಿದ್ದ ವಿಘ್ನೇಶ, ದಿನಿವಿಡೀ ಪ್ರೀತ್ಸೆ ಪ್ರೀತ್ಸೆ ಅಂತ ಇನ್ನಿಲ್ಲದಂತೆ ಕಾಡುತ್ತಿದ್ದ. ಮೆಸೇಜ್ ಮಾಡೋದು, ಕಾಲ್ ಮಾಡಿ ಮಿಡ್ನೈಟ್ನಲ್ಲೂ ಕಾಟ ಕೊಡೋ ಕೆಲಸ ಮಾಡ್ತಿದ್ದ. ಆದರೆ ಯಾಮಿನಿ ಪ್ರಿಯಾಗೆ ಅದೆಲ್ಲ ಇಷ್ಟ ಇರಲಿಲ್ಲ. ಹೀಗಾಗಿ ನಂಬರ್ ಬ್ಲಾಕ್ ಮಾಡಿ ಸುಮ್ಮನಾಗಿದ್ದಳು. ಆದರೂ ಇವನ ಹುಚ್ಚಾಟ ಕಡಿಮೆ ಆಗಿರಲಿಲ್ಲ. ಯಾಮಿನಿ ಪ್ರಿಯಾ ಕಾಲೇಜಿಗೆ ಹೊರಟಾಗ, ಪ್ರೀತಿಸಲೇಬೇಕು ಅಂತ ಹಿಂದಿದೆ ಬೀಳ್ತಿದ್ದ. ಇದರಿಂದ ಬೇಸತ್ತಿದ್ದ ಪ್ರಿಯಾ ಮನೆಯಲ್ಲಿ ವಿಷ್ಯ ತಿಳಿಸಿದ್ದಳು. ಹೀಗಾಗಿ ಪ್ರಿಯಾ ಹೆತ್ತವರು, ವಿಘ್ನೇಶ್ಗೆ ವಾರ್ನಿಂಗ್ ಕೊಟ್ಟಿದ್ರು. ಆದರೂ ಹಳೇ ಛಾಳಿ ಬಿಟ್ಟಿರಲಿಲ್ಲ. ಇದರಿಂದ ಕೊನೆಗೆ ಪ್ರಿಯಾ ಶ್ರೀರಾಂಪುರ ಪೊಲೀಸರಿಗೆ ದೂರು ಕೊಟ್ಟು ಕೊಟ್ಟಿದ್ದರು.
ಯಾಮಿನಿ ಪ್ರಿಯಾ ಹಿಂದೆ ಬಿದ್ದು ಲಾಠಿ ಏಟು ತಿಂದು ಎಚ್ಚರಿಕೆ ನೀಡಿದರೂ ವಿಘ್ನೇಶನಿಗೆ ಪ್ರೀತಿಯ ಹಂಬಲ ಕಡಿಮೆ ಆಗಿರಲಿಲ್ಲ. ಜೊತೆಗೆ ತನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಳು ಅನ್ನೋ ದ್ವೇಷವೂ ಹೆಚ್ಚಾಗಿತ್ತು. ಹೀಗಾಗಿ ಯಾಮಿನಿ ಪ್ರಿಯಾ ಬಾಳಿಗೆ ರಾಕ್ಷಸನಾಗಿ ಹೋಗಿದ್ದ. ನನಗೆ ಸಿಗದವಳು ಈ ಜಗತ್ತಲ್ಲಿ ಯಾರಿಗೂ ಸಿಗಬಾರ್ದು ಅಂತ ಡಿಸೈಡ್ ಮಾಡಿದ್ದ ವಿಘ್ನೇಶ. ಯಾಮಿನಿ ಪ್ರಿಯಾ ನೆತ್ತರು ಹರಿಸೋದಕ್ಕೆ ಪ್ಲಾನ್ ಮಾಡಿದ್ದ. ಗುರುವಾರ ಬೆಳಗ್ಗೆಯಿಂದಲೂ ಹೊಂಚು ಹಾಕಿ ಮಂತ್ರಿ ಮಾಲ್ ಬಳಿ ಕಾದು ಕುಳಿತಿದ್ದ. ಮಧ್ಯಾಹ್ನ 2:30ರ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸ್ ಬರ್ತಿದ್ದ ಯಾಮಿನಿ ಪ್ರಿಯಾ, ಮಂತ್ರಿ ಮಾಲ್ ಬಳಿ ಇಳಿದು ಇಂದಿರಾ ಕ್ಯಾಂಟಿನ್ ಮಾರ್ಗದಲ್ಲಿ ಮನೆಗೆ ಹೋಗುತ್ತಿದ್ದಳು. ಈ ವೇಳೆ ಬೈಕ್ನಲ್ಲಿ ಫಾಲೋ ಮಾಡಿಕೊಂಡು ಬಂದ ವಿಘ್ನೇಶ್, ರೈಲ್ವೆ ಟ್ರ್ಯಾಕ್ ಬಳಿ ಅಡ್ಡಗಟ್ಟಿದ್ದಾನೆ. ಏಕಾಏಕಿ ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಸೀಳಿದ್ದಾನೆ. ಮನಸೋ ಇಚ್ಛೆ ಬರ್ಬರವಾಗಿ ಇರಿದಿದ್ದಾನೆ. ರಕ್ತದ ಮಡುವಲ್ಲಿ ಬಿದ್ದ ಯಾಮಿನಿ ಪ್ರಿಯಾ ಒದ್ದಾಡಿ ಪ್ರಾಣ ಬಿಟ್ಟ ಬಳಿಕವಷ್ಟೇ ಅಲ್ಲಿಂದ ಪರಾರಿ ಆಗಿದ್ದಾನೆ.
ಶ್ರೀರಾಂಪುರ ಪೊಲೀಸರು ಹಾಗೂ ಸೋಕೊ ಟೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯಕ್ಕೆ ಬಳಸಿದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾಮಿನಿ ಪ್ರಿಯಾ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪ್ರೀತಿಸಲಿಲ್ಲ ಅನ್ನೋ ಕಾರಣಕ್ಕೆ ಕೊಂದು ಪರಾರಿ ಆಗಿರುವ ಹಂತಕನ ಪತ್ತೆಗಾಗಿ ಸ್ಪೆಷಲ್ ಟೀಂ ರಚನೆ ಮಾಡಲಾಗಿದೆ. ಕೊಲೆಯಾದ ಯಾಮಿನಿ ಪ್ರಿಯಾ ತಂದೆ ಗೋಪಾಲ್ ಮಾತನಾಡಿ, ಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡ್ತಿದ್ದ. ಈ ಹಿಂದೆ ಬಂದು ಪ್ರೀತಿ ಮಾಡು ಎಂದು ಒತ್ತಾಯಿಸ್ತಿದ್ದ. ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ವಿ. ಆರು ತಿಂಗಳ ಹಿಂದೆ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ರು. ಒಂದು ತಿಂಗಳ ಹಿಂದೆ ನಾನು ಮಗಳಿಗೆ ಕೇಳಿದ್ದೆ, ಮತ್ತೆ ಏನಾದ್ರೂ ಬಂದು ಟಾರ್ಚರ್ ಮಾಡ್ತಿದ್ದಾನಾ ಅಂತಾ. ಆದರೆ ಇಲ್ಲ ಇವಾಗ ಬರ್ತಿಲ್ಲ ಅಂತ ಹೇಳಿದ್ದಳು. ಕಾಲೇಜಿಗೆ ಹೋಗಿ ಬರುವಾಗ ಹೀಗೆ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.


