ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ RSS ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಶಾಂತಿ ಸಭೆ ಆಯೋಜನೆ ಮಾಡಲಾಗಿತ್ತು. ಕಲಬುರಗಿ ಡಿಸಿ ಕಚೇರಿಯಲ್ಲಿ ನಡೆದ ಸಭೆ ವೇಳೆ ಹೈಡ್ರಾಮಾ ನಡೆದಿದ್ದು, ಜಿಲ್ಲಾಧಿಕಾರಿ ಮುಂದೆಯೇ ಸಭೆಯಲ್ಲಿ ಹಲ್ಲೆ ಯತ್ನ ನಡೆದಿದ್ಯಾ ಅನ್ನೋ ಅನುಮಾನ ಮೂಡಿದೆ. ನನ್ನ ಮೇಲೆ ಹಲ್ಲೆಗೆ ಯತ್ನ ನಡೀತು ಅಂತ ಅಂಬಾರಾಯ ಅಷ್ಟಗಿ ಆರೋಪ ಮಾಡಿದ್ದಾರೆ. RSS ಪರ ಚರ್ಚೆಗೆ ಆಗಮಿಸಿದ್ದ ರಾಜ್ಯ BJP SC ಮೋರ್ಚಾ ಉಪಾಧ್ಯಕ್ಷ ಅಂಬರಾಯ ಅಷ್ಟಗಿ ಮೇಲೆ ಹಲ್ಲೆ ಯತ್ನ ನಡೆದಿದೆ ಎನ್ನಲಾಗಿದೆ. ಹಲ್ಲೆ ಯತ್ನದ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಅಂತ ಅಂಬರಾಯ ಆರೋಪ ಮಾಡಿದ್ದಾರೆ. ಸಚಿವರ ಕುಮ್ಮಕ್ಕಿನಿಂದಲೇ ನನ್ನ ಮೇಲೆ ಹಲ್ಲೆ ಯತ್ನ ನಡೆದಿದೆ. ನನಗೆ ಜೀವ ಬೆದರಿಕೆ ಸಹ ಹಾಕಲಾಗಿದೆ ಅಂತ ಆರೋಪ ಮಾಡಿದ್ದಾರೆ.

ಅಂಬರಾಯ ಅಷ್ಟಗಿ ವಿರುದ್ಧ ದಲಿತ ಸಂಘಟನೆಗಳು ಗರಂ ಆಗಿದ್ದು, ಶಾಂತಿ ಸಭೆ ಹಾಳು ಮಾಡಿದ್ದು ಅಂಬಾರಾಯ್ ಅಷ್ಟಗಿ ಅಂತ ಕಿಡಿ ಕಾರಿದ್ದಾರೆ. ಆರ್ಎಸ್ಎಸ್ ಪಥಸಂಚಲನ ವೇಳೆ ಲಾಠಿ ಬಿಟ್ಟು ರಾಷ್ಟ್ರಧ್ವಜ, ಸಂವಿಧಾನ ಪೀಠಿಕೆ ಹಿಡಿಯಲಿ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾಠಿ ಹಿಡಿದು ಪಥಸಂಚಲನಕ್ಕೆ ದಲಿತ ಸಂಘಟನೆಗಳು ವಿರೋಧ ಮಾಡಿವೆ. ಹೀಗಾಗಿ ಶಾಂತಿ ಸಭೆಯಲ್ಲಿ ಪಥ ಸಂಚಲನ ವಿಚಾರವಾಗಿ ಒಮ್ಮತ ಮೂಡಿಲ್ಲ. ಸಂಘಟನೆಗಳ ಲಿಖಿತ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲು ಕಲಬುರಗಿ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಚಾರವಾಗಿ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ವಿಚಾರವಾಗಿ ಆದೇಶ ಮಾಡಿ RSSಗೆ ಅಂಕುಶ ಹಾಕಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆದಂತಾಗಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ ಹೈಕೋರ್ಟ್. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಮಾಡಿದೆ.

ರಾಜ್ಯ ಸರ್ಕಾರ, ಗೃಹ ಇಲಾಖೆ, ಹುಬ್ಬಳ್ಳಿ ಕಮಿಷನರ್ಗೆ ನೋಟಿಸ್ ನೀಡಿದೆ. ಅಕ್ಟೋಬರ್ 18, 2025ರಂದು ರಾಜ್ಯ ಸರ್ಕಾರ ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು ಪುನಶ್ಚೇತನ ಸಂಸ್ಥೆ. ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
2025ರ ಅಕ್ಟೋಬರ್ 18 ರಂದು ರಾಜ್ಯ ಸರ್ಕಾರ ಸಂಘ ಸಂಸ್ಥೆಗಳು, ಸರ್ಕಾರಿ ಜಾಗ ಬಳಕೆ ಸಂಬಂಧ ಆದೇಶ ಮಾಡಿತ್ತು. ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು ರಾಜ್ಯ ಸರ್ಕಾರ. ಸರ್ಕಾರದ ಆದೇಶ ಪ್ರಶ್ನಿಸಿದ್ದ ಪುನಶ್ಚೇತನ ಸೇವಾ ಸಂಸ್ಥೆ. ಧಾರವಾಡ ಸಂಚಾರಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದ ಸಂಸ್ಥೆ, ಸರ್ಕಾರದ ಆದೇಶಕ್ಕೆ ತಡೆ ನೀಡಲು ಮನವಿ ಮಾಡಿತ್ತು. ಇದೀಗ ಹೈಕೋರ್ಟ್ ಆದೇಶ ಮಾಡಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಸಂವಿಧಾನ ನೀಡಿರುವ ಹಕ್ಕನ್ನ ಕಿತ್ತುಕೊಳ್ಳಲು ಆಗದು ಎಂದಿರುವ ಪೀಠ, ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ರಾಜ್ಯ ಸರ್ಕಾರ ಆದೇಶದಲ್ಲಿ ಸರ್ಕಾರಿ ಜಾಗ ಬಳಕೆಗೆ ಸರ್ಕಾರದ ಅನುಮತಿ ಕಡ್ಡಾಯ ಮಾಡಿತ್ತು. ಎಲ್ಲಾ ಸಂಘ ಸಂಸ್ಥೆಗಳಿಗೂ ಇದು ಅನ್ವಯ ಎನ್ನಲಾಗಿತ್ತು. ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ಕಂಡೀಷನ್ ಹಾಕಿತ್ತು. ಸ್ಥಳೀಯ ಆಡಳಿತ, ಪೊಲೀಸರ ಅನುಮತಿ ಕಡ್ಡಾಯ ಎಂದಿತ್ತು ಸರ್ಕಾರ. ಇದೀಗ ಸರ್ಕಾರದ ಆದೇಶಕ್ಕೆ ಧಾರವಾಡ ಪೀಠ ತಡೆಯಾಜ್ಞೆ ನೀಡ ಆದೇಶ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆದಂತಾಗಿದೆ. ಸರ್ಕಾರಕ್ಕೆ ಮುಜುಗರ ಆಗಿದ್ದು ಸತ್ಯವೇ ಆಗಿದ್ದು, ಸಿಎಂ ಸಿದ್ದರಾಮಯ್ಯ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಅವಕಾಶವಿದ್ದು, ನಾವು ಏಕಸದಸದ್ಯ ಪೀಠದ ಆದೇಶ ಪ್ರಶ್ನಿಸುತ್ತೇವೆ. ಈ ಬಗ್ಗೆ ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.


