ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ಕಳೆದ ಎಂಟತ್ತು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್ನಲ್ಲೂ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯ ಸರ್ಕಾರ ತಡವಾಗಿ ಸ್ಪಂದಿಸಿದ್ದಕ್ಕೆ ಅನ್ನದಾತರ ಆಕ್ರೋಶ ನೆತ್ತಿಗೇರಿದೆ. ಇವತ್ತು ಸಿಎಂ ಸಿದ್ದರಾಮಯ್ಯ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಭೆ ನಡೆಸಲಿದ್ದಾರೆ. ಜೊತೆಗೆ ರೈತರನ್ನೂ ಸಭೆಗೆ ಆಗಮಿಸುವಂತೆ ಸಿಎಂ ಮನವೊಲಿಕೆ ಮಾಡುವ ಕೆಲಸ ಮಾಡಿದ್ದಾರೆ. ಜೊತೆಗೆ ಎಲ್ಲಾ ಜಿಲ್ಲೆಯ ರೈತರುಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಆದರೂ ಸಭೆಗೆ ಬರುವಂತೆ ನೋಡಿಕೊಳ್ಳುವಂತೆ ಡಿಸಿಗಳಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರಕ್ಕೆ ಬಂದಿದ್ದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ರೈತರ ಜೊತೆಗೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ರು. ಆದರೆ ಸಂಧಾನ ಸಫಲವಾಗದೆ ವಾಪಸ್ ಆಗಿದ್ದರು. ಸಚಿವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ಹೊರ ಹಾಕಿದ್ದರು. ಗುರುವಾರ ಸಂಜೆಯೊಳಗೆ ನಿರ್ಧಾರ ಮಾಡದಿದ್ದರೆ ಶುಕ್ರವಾರ ಹೆದ್ದಾರಿ ತಡೆಯುವ ಘೋಷಣೆ ಮಾಡಿದ್ದರು. ಆದರೆ ನಿನ್ನೆ ಸರ್ಕಾರ ಯಾವುದೇ ನಿರ್ಧಾರ ಮಾಡಲಿಲ್ಲ. ಆದರೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರೈತರ ಬಳಿಗೆ ಹೋಗಿದ್ದರು. ಇನ್ನೂ 2 ದಿನಗಳ ಕಾಲಾವಕಾಶ ಕೇಳಿಕೊಂಡರು. ಶನಿವಾರ ಸಂಜೆಯೊಳಗೆ ನಿರ್ಧಾರ ಹೇಳುವ ಬಗ್ಗೆ ಭರವಸೆ ಮೂಡಿಸಿದ್ದಾರೆ.
ಸಚಿವರು ಗುರ್ಲಾಪುರಕ್ಕೆ ಬಂದು ವಾಪಸ್ ತೆರಳುವಾಗ ಕಬ್ಬು ಬೆಳೆಗಾರರ ಕಿಚ್ಚು ಹೆಚ್ಚಾಗಿತ್ತು. ಸಚಿವ ಶಿವಾನಂದ ಪಾಟೀಲ್ ಕಾರಿನ ಮೇಲೆ ಚಪ್ಪಲಿ, ವಾಟರ್ ಬಾಟೆಲ್ ಎಸೆದು ಕೆಂಡಕಾರಿದ್ರು. ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ 8 ದಿನಗಳ ನಂತರ ಆಗಮಿಸಿದ್ದಕ್ಕೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು. ಸಕ್ಕರೆ ಸಚಿವರ ಜೊತೆಗೆ ಸಕ್ಕರೆ ಆಯುಕ್ತ ಎ.ದಳವಾಯಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಭೀಮಾಶಂಕರ್ ಗುಳೇದ್ ಸಾಥ್ ಕೊಟ್ಟಿದ್ರು. ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಸಚಿವರು ಬರ್ತಿದ್ದಂತೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಕರೆದಿರುವ ಸಭೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬನ್ನಿ ಎಂದು ಸಕ್ಕರೆ ಸಚಿವರು ರೈತರಿಗೆ ಆಹ್ವಾನ ನೀಡಿದರು. ಆದರೆ ನಾವು ಎಲ್ಲಿಗೂ ಬರಲ್ಲ, ನೀವೇ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಸಚಿವರನ್ನು ಬೀಳ್ಕೊಟ್ಟರು. ಇವತ್ತು ಬೆಳಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ರೈತರಿಗೆ ಎಷ್ಟು ಹಣ ಕೊಡಲಾಗ್ತಿದೆ. ಎಷ್ಟು ಕೊಡಬಹುದು..? ಅನ್ನೋ ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇನ್ನೂ ರೈತರ ಜೊತೆಗೂ ಒಂದು ಸಭೆ ಮಾಡಲು ಸಿಎಂ ನಿರ್ಧಾರ ಮಾಡಿದ್ದು, ರೈತರು ಸಭೆಗೆ ಬರಲ್ಲ ಎಂದಿರುವ ಕಾರಣದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ.
ಆದರೆ ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟ ಆಗುತ್ತಾ..? ಇಲ್ವಾ ಅನ್ನೋ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಇಂದಿನ ಸಭೆಯಲ್ಲಿ ಎಲ್ಲಾ ಮಾಹಿತಿ ಪಡೆದುಕೊಂಡು ಆ ಬಳಿಕ ಸರ್ಕಾರದ ಮಟ್ಟದಲ್ಲಿ ಮತ್ತೊಂದು ಸಭೆ ಮಾಡಿ ಅಂತಿಮ ನಿರ್ಧಾರ ಪ್ರಕಟ ಮಾಡಲು ಮುಖ್ಯಮಂತ್ರಿ ನಿರ್ಧಾರ ಮಾಡಿದ್ದಾರೆ. ಅದೇ ಕಾರಣಕ್ಕೆ ಶಿವಾನಂದ ಪಾಟೀಲ್ ಅವರು 2 ದಿನಗಳ ಕಾಲಾವಕಾಶ ಕೇಳಿಕೊಂಡಿದ್ದಾರೆ. ಅಂದರೆ ಶನಿವಾರ ಈ ಬಗ್ಗೆ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ. ಈಗಾಗಲೇ ₹3200 ರೂಪಾಯಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ರೈತರು ₹3500ಕ್ಕೆ ಪಟ್ಟು ಹಿಡಿದಿದ್ದಾರೆ. ಅಂತಿಮವಾಗಿ ಸರ್ಕಾರ ಮಧ್ಯಸ್ಥಿಕೆಯಲ್ಲಿ ಒಂದು ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.


