ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಅನ್ನೋ ಮಾತು ಒಂದು ಕಾಲದಲ್ಲಿ ಇತ್ತು. ಆದರೆ ಇದೀಗ ಮದುವೆ ಅನ್ನೋದು ಒಂದು ಒಂದು ಒಪ್ಪಂದ ಅಷ್ಟೇ. ಕಾನೂನು ಪ್ರಕಾರ ಇದು ಹೌದಾದರೂ ಸಂಸಾರಗಳ ಉಳಿವಿಗಾಗಿ ಇದು ಉತ್ತಮ ಅಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತವೆ. ಆದರೆ ನಾವು ಇಲ್ಲಿ ಹೇಳೋಕೆ ಹೊರಟಿರುವ ವಿಚಾರ ಎರಡನೇ ಮದುವೆ. ಋಣ ಇಲ್ಲದೆ ಯಾವ ಸಂಬಂಧಗಳೂ ಸೃಷ್ಟಿ ಆಗಲ್ಲ ಅನ್ನೋ ಮಾತಿನಂತೆ ಒಬ್ಬನ ಜೊತೆ ಮದುವೆ ಆಗಿತ್ತು. ಆದರೆ ಈಕೆ ಮತ್ತೊಬ್ಬನ ಜೊತೆ ಸಂಸಾರ ಶುರು ಮಾಡಿದ್ದಳು. ಇದು ಸಾಲದು ಅಂತಾ ಮಗದೊಬ್ಬನ ಸಂಗ ಮಾಡಿದ್ದಳು. ಇದಕ್ಕೆ ಯಾವ ಋಣವೂ ಇಲ್ಲ. ಯಾವ ಅನುಬಂಧವೂ ಇಲ್ಲ.

ತುಮಕೂರು ಜಿಲ್ಲೆ ಪಾವಗಡ ಮೂಲದ ಮಹಿಳೆ ಅಂಜಲಿ ಒಂದಲ್ಲ ಎರಡು ಮದುವೆ ಆಗಿದ್ದಳು. ಇದರ ನಡುವೆ ಮತ್ತೊಬ್ಬರ ನಡುವೆ ಸ್ನೇಹ ಬೆಳೆಸಿದ್ದಳು. ಗಂಡನಿಲ್ಲದ ಹೊತ್ತಲ್ಲಿ ಹೊಸ್ತಿಲು ದಾಟಿದ ಕಾರಣಕ್ಕೆ ಎರಡನೇ ಗಂಡನ ಕೈಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ. ಈಕೆಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇತ್ತು. ಆದರೆ ಗಂಡ – ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಇದೇ ಕಾರಣಕ್ಕೆ ಗಂಡ ಹಾಗೂ ಮಗುವನ್ನು ಬಿಟ್ಟು ಒಬ್ಬಂಟಿ ಜೀವನ ನಡೆಸುತ್ತಿದ್ದಳು. ಆಗ ಯಾದಗಿರಿಯ ಸುರಪುರ ಮೂಲದ ರವಿಚಂದ್ರ ಅನ್ನೋ ವ್ಯಕ್ತಿಯ ಪರಿಚಯವಾಗಿತ್ತು.

ಫೇಸ್ಬುಕ್ನಲ್ಲಿ ಸ್ನೇಹವಾಗಿತ್ತೋ ಅಥವಾ ಇನ್ಸ್ಟಾಗ್ರಾಂನಲ್ಲಿ ಪರಿಚಯ ಆಗಿತ್ತೋ ಗೊತ್ತಿಲ್ಲ. ಅಥವಾ ನೇರಾನೇರ ಮುಖತಃ ಪರಿಚಯದಲ್ಲಿ ಪ್ರೇಮ ಅರಳಿತ್ತೋ ಅನ್ನೋದು ಗೊತ್ತಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸೋದಕ್ಕೆ ಶುರು ಮಾಡಿದ್ರು. ರವಿಚಂದ್ರನಿಗೂ ಕೂಡ ಈಗಾಗಲೇ ಒಂದು ಮದುವೆ ಆಗಿ ಹೆಂಡತಿಯಿಂದ ದೂರವಾಗಿದ್ದ. ಹೀಗಾಗಿ ಅಂಜಲಿ ಹಾಗೂ ರವಿಚಂದ್ರನ ಈಡು ಜೋಡು ಸರಿಯಾಗಿತ್ತು ಅನ್ನೋ ಕಾರಣಕ್ಕೆ ಇಬ್ಬರೂ ಮದುವೆ ಆಗಿದ್ದರು. ಎರಡು ತಿಂಗಳ ಹಿಂದೆ ಅಮೃತನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಜೀವನವನ್ನೂ ಶುರು ಮಾಡಿದ್ದರು..

ಅಂಜಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ರೆ, ರವಿಚಂದ್ರ ಟ್ರಾವೆಲ್ಸ್ನಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಬಸ್ ಡ್ರೈವರ್ ಆಗಿದ್ದ ರವಿ, ಒಮ್ಮೆ ಮನೆಯಿಂದ ಹೋದರೆ ಆತ ಮತ್ತೆ ಮನೆಗೆ ಬರುತ್ತಿದ್ದದ್ದು ವಾರಕ್ಕೊಮ್ಮೆ ಮನೆಗೆ ಬರ್ತಿದ್ದ. ಯಾವಾಗ ಗಂಡ ಆಗೊಮ್ಮೆ ಈಗೊಮ್ಮೆ ಮನೆಗೆ ಬರೋದಕ್ಕೆ ಶುರು ಮಾಡಿದ್ನೋ ಆಗ ಅಂಜಲಿಯ ಕಣ್ಣ ಮುಚ್ಚಾಲೆ ಆಟ ಶುರುವಾಗಿತ್ತು. ಯಾವುದೋ ಹುಡುಗನ ಜೊತೆ ಅಕ್ರಮ ಸಂಬಂಧ ಮಾಡಿಕೊಂಡಿದ್ದಳಂತೆ. ಗುರುವಾರ ರಾತ್ರಿ 11 ಗಂಟೆಗೆ ಮನೆಗೆ ಬಂದಿದ್ದ. ಈ ವೇಳೆ ರವಿಚಂದ್ರನಿಗೆ ಆಘಾತ ಎದುರಾಗಿತ್ತು. ಪತ್ನಿ ಅಂಜಲಿ ಮನೆಯಲ್ಲೇ ಇರ್ಲಿಲ್ಲ.

ಅಂಜಲಿ ನಂಬರ್ಗೆ ಫೋನ್ ಮಾಡಿದ್ರೆ ಸ್ವಿಚ್ಡ್ ಆಫ್ ಅಂತಾ ಬರ್ತಿತ್ತು. ಸಿಟ್ಟಲ್ಲಿ ಹೊರಕ್ಕೆ ಹೋದವನು ಕಂಠಪೂರ್ತಿ ಕುಡಿದು ಟೈಟ್ ಆಗಿದ್ದ. ಮಧ್ಯರಾತ್ರಿ ಮನೆಗೆ ಬರ್ತಿದ್ದಂತೆ ಹೆಂಡತಿ ನಿದ್ದೆಗೆ ಜಾರಿದ್ದಳು.. ರಾತ್ರಿ 1 ಗಂಟೆ ಸುಮಾರಿಗೆ ಗಲಾಟೆ ಶುರು ಮಾಡಿದವನು ಮನಸೋ ಇಚ್ಚೆ ಚಾಕುವಿನಿಂದ ಚುಚ್ಚಿದ್ದ. ಪತ್ನಿ ಅಂಜಲಿ ಸಾಯೋ ಸ್ಥಿತಿಗೆ ಬರ್ತಿದ್ದಂತೆ ಅಮೃತಹಳ್ಳಿ ಪೊಲೀಸರ ಬಳಿ ಹೋಗಿ ಶರಣಾಗಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ರು, ಅಂಜಲಿ ಪರಿಸ್ಥಿತಿ ನೋಡಿದಾಗ ಸಣ್ಣದಾಗಿ ಉಸಿರಾಡ್ತಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲಿಸೋದಕ್ಕೆ ಪ್ರಯತ್ನ ಮಾಡಿದ್ರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಪ್ರಾಣ ಹೋಗಿದೆ.


