ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು ಸ್ಫೋಟ ಸಂಭವಿಸಿ 10 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಸೋಮವಾರ (10/11/2025) ಸಂಜೆ 6 ಗಂಟೆ 52 ನಿಮಿಷದ ವೇಳೆಗೆ ಕೆಂಪುಕೋಟೆ ಬಳಿಯ ಸಿಗ್ನಲ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ i20 ಕಾರು ಏಕಾಏಕಿ ಸ್ಫೋಟವಾಗಿದೆ. ಮೆಟ್ರೋ ಗೇಟ್ ನಂ.1ರ ಬಳಿ ಸ್ಫೋಟ ಆಗ್ತಿದ್ದ ಹಾಗೆ ಸುತ್ತಮುತ್ತಲ ವಾಹನಗಳು ಬೆಂಕಿಯಿಂದ ಹೊತ್ತಿ ಉರಿದವು. ಸ್ಥಳೀಯರ ಮಾಹಿತಿಯಂತೆ ಮೂರು ಬಾರಿ ಸ್ಫೋಟ ಸಂಭವಿಸಿತು ಎನ್ನಲಾಗಿದೆ. ಏನಾಯ್ತು ಅನ್ನೋದು ಗೊತ್ತಾಗುವ ಅಷ್ಟರಲ್ಲಿ ಬೆಂಕಿ ಹೊತ್ತಿ ಉರಿದಿದೆ. ದುರ್ಘಟನೆಯಲ್ಲಿ ಹಲವಾರು ಜನ ಪ್ರಾಣ ಬಿಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೂಡಲೇ ಕಾರ್ಯ ಪ್ರವೃತರಾದ ಪೊಲೀಸರು ಹಾಗೂ ಭದ್ರತಾ ಪಡೆಗಳು, ಎಲ್ಲರನ್ನೂ LNJP ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೆಹಲಿ ಸ್ಫೋಟ ಸಂಬಂಧದ ಬಳಿಕ ಭಾರತ ದೇಶಾದ್ಯಂತ ಅಲರ್ಟ್ ಘೋಷಣೆ ಮಾಡಲಾಗಿದೆ. ಬಿಹಾರ, ಉತ್ತರ ಪ್ರದೇಶ, ಅಯೋಧ್ಯೆ ರಾಮ ಮಂದಿರ, ಲಕ್ನೋ, ಪಂಜಾಬ್, ಖೇರಳ, ಕರ್ನಾಟಲ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಹೈ ಅಲರ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ಮಾತುಕತೆ ನಡೆಸಿ, ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುವಂತೆ ಸೂಚನೆ ಕೊಟ್ಟಿದ್ದರು. ನರೇಂದ್ರ ಮೋದಿ ಸೂಚನೆಯಂತೆ ಅಮಿತ್ ಷಾ ಕೂಡಲೇ LNJP ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಆ ಬಳಿಕ ಘಟನೆ ನಡೆದ ಕೆಂಪು ಕೋಟೆಗೂ ಅಮಿತ್ ಷಾ ಭೇಟಿ ನೀಡಿದ್ರು. ಗುಪ್ತಚರ ಇಲಾಖೆ ಮುಖ್ಯಸ್ಥರ ಜೊತೆಗೂ ಸಮಾಲೋಚನೆ ನಡೆಸಿದ್ರು.


ದೆಹಲಿ ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕಾರು ಸ್ಫೋಟದ ಭೀಕರತೆಗೆ 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಾವನ್ನಪ್ಪಿದವರ ಬಗ್ಗೆ LNJP ವೈದ್ಯರು ಮಾಹಿತಿ ನೀಡಿದ್ದಾರೆ. ದೆಹಲಿ ಸ್ಫೋಟ ಬೆನ್ನಲ್ಲೇ ಶಂಕಿತನೋರ್ವನ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಶಂಕಿತನನ್ನ ಬಂಧಿಸಿರುವ ಪೊಲೀಸ್ರು, ಭದ್ರತಾ ಪಡೆಗಳು ವಿಚಾರಣೆ ನಡೆಸುತ್ತಿದ್ದಾರೆ. ಸ್ಫೋಟದ ಹಿಂದೆ ಉಗ್ರರ ಕೈವಾಡ ಇದೆ ಅನ್ನೋದು ಖಚಿತವಾಗಿದೆ. ಸ್ಫೋಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮಾಹಿತಿ ಕೊಟ್ಟಿದ್ದು, ಸ್ಫೋಟಕ್ಕೆ ಬಳಸಲಾದ ವಸ್ತುಗಳು ಹಾಗೂ ಸ್ಫೋಟದ ಹಿಂದಿನ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಸ್ಫೋಟಕ್ಕೆ ಕಾರಣವಾದ ಹುಂಡೈ ಐ-20 ಕಾರು ಮಾಲೀಕನ ಪತ್ತೆ ಮಾಡಲಾಗಿದೆ.

i20 ಮಾಲೀಕನನ್ನು ಹರಿಯಾಣ ಮೂಲದ ಸಲ್ಮಾನ್ ಎಂದು ಗುರುತಿಸಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ನಾನು ಆ ಕಾರನ್ನು ಈ ಮೊದಲೇ ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಶೇಷ ಅಂದರೆ ಈ ಕಾರನ್ನು ನಕಲಿ ದಾಖಲೆ ಸೃಷ್ಟಿಸಿ ಹತ್ತಾರು ಜನರಿಂದ ಜನರಿಂದ ಹಸ್ತಾಂತರ ಆಗಿದೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ, ಈ ದಾಳಿಗೆ ಪುಲ್ವಾಮಾ ಲಿಂಕ್ ಕೂಡ ಸಿಕ್ಕಿದೆ. ಕೊನೆಯದಾಗಿ ಜಮ್ಮು ಕಾಶ್ಮೀರದ ಪುಲ್ವಾಮದ ತಾರಿಕ್ ಎಂಬಾತನಿಗೆ ಮಾರಾಟ ಆಗಿದೆ ಎನ್ನುವುದು ಪತ್ತೆಯಾಗಿದೆ. ಹರಿಯಾಣ ಮೂಲದ ಸಲ್ಮಾನ್ ಕೈವಾಡ ಇದೆಯಾ..? ಪುಲ್ವಾಮಾ ಮೂಲದ ತಾರಿಕ್ ಕೈವಾಡ ಇದೆಯಾ..? ಈ ಸ್ಫೋಟ ನಡೆಯುವ ಮುನ್ನ ಕಾರಿನಲ್ಲಿ 2 ರಿಂದ 3 ಜನರಿದ್ದರು ಅನ್ನೋ ಮಾಹಿತಿ ಸಿಕ್ಕಿದ್ದು, ಅವರು ಯಾರು ಅನ್ನೋ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ.

ಆದರೆ ಬಿಹಾರದಲ್ಲಿ ಇಂದು 2ನೇ ಹಂತದ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಹಿಂದಿನ ದಿನವೇ ಉಗ್ರರು ಕೈಚಳಕ ತೋರಿಸಿದ್ದು, ಕೊಂಚ ಭೀತಿ ಉಂಟಾಗುವಂತೆ ಮಾಡಿದೆ. ಆದರೆ ಬಿಹಾರವೂ ಸೇರಿದಂತೆ ದೇಶದ ಪ್ರತಿ ರಾಜ್ಯದಲ್ಲೂ ಹೈಅಲರ್ಟ್ ಘೋಷಣೆ ಮಾಡಿದೆ. ಈ ಹಿಂದೆ ಪಾಕಿಸ್ತಾನ ಪ್ರೇರಿತ ದಾಳಿ ಅನ್ನೋ ಕಾರಣಕ್ಕೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕೈಗೊಂಡಿದ್ದ ಭಾರತ, ಇನ್ನೊಮ್ಮೆ ಭಾರತದಲ್ಲಿ ಉಗ್ರರ ಕೃತ್ಯ ನಡೆದರೆ ಪಾಕಿಸ್ತಾನದ ವಿರುದ್ಧ ಸಮರ ಸಾರುವ ಎಚ್ಚರಿಕೆ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡ್ಬೇಕಿದೆ.


