ಬೆಂಗಳೂರಲ್ಲಿ ಎಟಿಎಂಗೆ ಹಣ ತುಂಬುವ ವಾಹನದಿಂದ 7 ಕೋಟಿ ಹಣವನ್ನು ಲೂಟಿ ಮಾಡಿರುವ ಘಟನೆ ನಡೆದಿದೆ. ಜೆಪಿ ನಗರದ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ತೆರಳುತ್ತಿದ್ದ ವಾಹನವನ್ನು ಡೈರಿ ಸರ್ಕಲ್ ಮೇಲೆ ತಡೆದಿರುವ ದುಷ್ಕರ್ಮಿಗಳು ವಾಹನವನ್ನು ಅಡ್ಡಗಟ್ಟಿ, ನಾವು RBI ಅಧಿಕಾರಿಗಳು, ಡಾಕ್ಯುಮೆಂಟ್ ವೇರಿಫೈ ಮಾಡಬೇಕು ಎಂದಿದ್ದರು. ದಾಖಲೆ ತೋರಿಸಲು ಮುಂದಾಗ್ತಿದ್ದ ಹಾಗೆ ಗನ್ ಪಾಯಿಂಟ್ನಲ್ಲಿ ಗಣವನ್ನು ಇನ್ನೋವಾ ಕಾರಿಗೆ ಶಿಫ್ಟ್ ಮಾಡಿಕೊಂಡಿದ್ದರು. ಒಟ್ಟು 7 ಕೋಟಿ 11 ಲಕ್ಷ ರೂಪಾಯಿ ಹಣ ದೋಚಿಕೊಂಡು ರಾಬರ್ಸ್ ಟೀಂ ಎಸ್ಕೇಪ್ ಆಗಿದೆ. ಇನ್ನೋವಾ ಕಾರಿನಲ್ಲಿ ಏಳೆಂಟು ಜನರು ಇದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಜೆಪಿ ನಗರದ HDFC ಬ್ಯಾಂಕ್ ನಿಂದ ಹಣ ತರ್ತಾ ಇದ್ದ ವಾಹನವನ್ನು ತಡೆದು ಹಣ ಲೂಟಿ ಮಾಡಿರುವ ಪ್ರಕರಣದಲ್ಲಿ ಬೆಂಗಳೂರಿನಾದ್ಯಂತ ಪೊಲೀಸರಿಗೆ ಅಲರ್ಟ್ ಮೆಸೇಜ್ ನೀಡಿ ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಹೊಸಕೋಟೆ ಸಮೀಪದ ಭಟ್ಟರಹಳ್ಳಿ ಟೋಲ್ ದಾಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡೈರಿ ಸರ್ಕಲ್, ದೊಮ್ಮಲೂರು, ಇಂದಿರಾನಗರ, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಇನೋವಾ ಕಾರ್ ಸಂಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಮಾರ್ಗದುದ್ದಕ್ಕೂ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹ ಮಾಡಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ FSL ಟೀಂ ಆಗಮಿಸಿ ವಾಹನದ ಮೇಲಿದ್ದ ಫಿಂಗರ್ ಪ್ರಿಂಟ್ಸ್ ಪರಿಶೀಲನೆ ಮಾಡಿದ್ದಾರೆ. ಡೋರ್ ಹಾಗೂ ಕಾರಿನ ಒಳಭಾಗದಲ್ಲಿ ಫಿಂಗರ್ ಫ್ರಿಂಟ್ ಪರಿಶೀಲನೆ ಮಾಡಿದ್ದಾರೆ.

KA 03 NC 8052 ಕಾರಿನಲ್ಲಿ ಬಂದು ರಾಬರಿ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹ ಆಗಿದೆ. ಬೆಂಗಳೂರು ಪೂರ್ವ (ಇಂದಿರಾನಗರ) RTO ಕಚೇರಿಯಲ್ಲಿ ಜನವರಿ 2018 ರಲ್ಲಿ ನೋಂದಣಿಯಾಗಿದೆ. ದರೋಡೆ ಮಾಡುವ ಉದ್ದೇಶದಿಂದಲೇ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿರುವ ದುಷ್ಕರ್ಮಿಗಳು, ಗೌರ್ನಮೆಂಟ್ ಆಫ್ ಇಂಡಿಯಾ ಎಂದು ಕಾರಿನ ಮೇಲೆ ಬರೆಸಿಕೊಂಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಹಾಕಿಕೊಂಡು ದರೋಡೆ ಮಾಡಲಾಗಿದೆ. ನಂಬರ್ ಪ್ಲೇಟ್ ಪ್ರಕಾರ ಪಿ.ಬಿ. ಗಂಗಾಧರನ್ ಎಂಬುವರ ಹೆಸರಿನಲ್ಲಿ ಸ್ವಿಫ್ಟ್ ಕಾರು ನೋಂದಣಿ ಆಗಿದೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ನೋಂದಣಿ ಆಗಿರುವ ಕಾರು, ಗರುಡಾ ಆಟೋ ಕ್ರಾಫ್ಟ್ ಲಿಮಿಟೆಡ್ ಶೋರೂಂನಿಂದ 2018ರಲ್ಲಿ ಕಾರು ಖರೀದಿ ಆಗಿತ್ತು.

ಗನ್ ಪಾಯಿಂಟ್ನಲ್ಲಿ ATM ವಾಹನದ ಸಿಬ್ಬಂದಿಯನ್ನು ಬೆದರಿಸಿ ವಾಹನವನ್ನು ಡೈರಿ ಸರ್ಕಲ್ ಕಡೆಗೆ ತಂದಿದ್ದಾರೆ. ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಜನ ಸಂಚಾರ ಕಡಿಮೆ ಇದ್ದ ಕಾರಣಕ್ಕೆ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿ ಇನ್ನೋವಾ ಕಾರಿಗೆ ಹಣವನ್ನು ಶಿಫ್ಟ್ ಮಾಡಿದ್ದಾರೆ. ದರೋಡೆಕೋರರು ಹಿಂದಿ ಭಾಷೆ ಮಾತನಾಡ್ತಿದ್ರು ಅನ್ನೋ ಮಾಹಿತಿ ಇದೆ. ಪೊಲೀಸರು ATM ವಾಹನದ ಸಿಬ್ಬಂದಿಯ ವಿಚಾರಣೆ ಮಾಡ್ತಿದ್ದಾರೆ. ಡ್ರೈವರ್, ಗನ್ ಮ್ಯಾನ್ ಸೇರಿ ನಾಲ್ವರು ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗ್ತಿದೆ. ATM ವಾಹನದಲ್ಲೂ ಇಬ್ಬರು ಗನ್ ಮ್ಯಾನ್, ಓರ್ವ ಡ್ರೈವರ್ ಹಾಗೂ ಓರ್ವ ಹ್ಯಾಂಡ್ಲರ್ ಇದ್ದರು. ಎಲ್ಲರನ್ನೂ ಸಿದ್ದಾಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಣ ದರೋಡೆ ಮಾಡಲು ಖತರ್ನಾಕ್ ಪ್ಲಾನ್ಮಾಡಿರುವ ಆರೋಪಿಗಳು, ಮೊದಲಿಗೆ ಜೆನ್ ಕಾರಿನಲ್ಲಿ ಎಟಿಂಎಂ ವ್ಯಾನ್ ಅಡ್ಡಗಟ್ಟಿದ್ದಾರೆ. ಆ ಬಳಿಕ ಜೆನ್ ಕಾರಿಂದ ಇನ್ನೋವಾ ಕಾರಿಗೆ ದರೋಡೆಕೋರು ಶಿಫ್ಟ್ ಆಗಿದ್ದಾರೆ. ಎರಡೂ ಕಾರಿನ ನಂಬರ್ಗಳು ನಕಲಿ ಅನ್ನೋದು ಗೊತ್ತಾಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ದರೋಡೆ ಮಾಡಿದ್ದಾರೆ. ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಸಂಪರ್ಕ ಮಾಡುವ ರಸ್ತೆಯಲ್ಲಿ ಕೃತ್ಯ ನಡೆದಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಲಾಗಿದೆ. ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗ್ತಿದೆ. ಮೇಲ್ನೋಟಕ್ಕೆ ಸಿಎಂಎಸ್ ಸಿಬ್ಬಂದಿಯ ಮೇಲೂ ಅನುಮಾನವಿದೆ ಎಂದಿದ್ದಾರೆ. ಘಟನೆ ನಡೆದ ಬಳಿಕ ತಡವಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಅವರ ಬಳಿ ಇದ್ದ ಆರ್ಮ್ ಯಾಕೆ ಬಳಕೆ ಮಾಡಿಲ್ಲ..? ಹೀಗಾಗಿ ಎಲ್ಲಾ ಆಯಾದಲ್ಲೂ ತನಿಖೆ ಮಾಡಲಾಗುತ್ತಿದೆ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲಾಗುತ್ತದೆ ಎಂದಿದ್ದಾರೆ.


