ಟೆಕ್ಕಿ ಅಂದ್ರೆ ಸಾಫ್ಟ್ವೇರ್ ಎಂಜಿನಿಯರ್. ಟೆಕ್ನಾಲಜಿ ಬಗ್ಗೆ ತುಂಬಾ ಚೆನ್ನಾಗಿ ತಿಳ್ಕೊಂಡು ಇರ್ತಾರೆ. ಅದೇ ರೀತಿ ಪಿಯುಸಿಯಲ್ಲಿ ಸೈನ್ಸ್ ಬಗ್ಗೆಯೂ ಚೆನ್ನಾಗಿ ಓದಿಕೊಂಡು ಇರ್ತಾರೆ. ಅದೇ ಕಾರಣಕ್ಕೆ ಅವರಿಗೆ ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಸಿಗುತ್ತದೆ. ಕಂಪ್ಯೂಟರ್ನಲ್ಲೇ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುವ ಜನ ಅಂದ್ರೆ ಅದು ಟೆಕ್ಕಿಗಳು. ಆದರೆ ಸಣ್ಣದೊಂದು ಸಮಸ್ಯೆ ಎದುರಾದರೆ ಅದರಿಂದ ಹೊರಬರುವುದು ಹೇಗೆ..? ಅನ್ನೋದು ಗೊತ್ತಾಗದೆ ಮೂರ್ಖನಂತೆ ವರ್ತಿಸಿರುವ ಘಟನೆಯೊಂದು ನಡೆದಿದೆ. ಲೈಂಗಿಕ ಸಮಸ್ಯೆ ಎಂದು ಬೀದಿಯಲ್ಲಿ ಟೆಂಟ್ ಹಾಕಿಕೊಂಡು ಕೂರುವ ವ್ಯಕ್ತಿಯನ್ನು ನಂಬಿ 48 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಕಾಮ ಅನ್ನೋದು ಪ್ರತಿಯೊಂದು ಜೀವಿಯಲ್ಲೂ ತನ್ನದೇ ಆದ ಮಹತ್ವ ಇದೆ. ಆದರೆ ಲೈಂಗಿಕ ಕ್ರಿಯೆಯೇ ಬದುಕು ಅನ್ನೋದಕ್ಕೂ ಸಾಧ್ಯವಿಲ್ಲ. ಎಷ್ಟೊಂದು ಜನರು ಎಲ್ಲವನ್ನೂ ಮೀರಿ ನಿಲ್ಲುತ್ತಾರೆ. ಅದೇ ರೀತಿ ಸಾಕಷ್ಟು ಜನರ ಬದುಕು ಹಾಳಾಗಿರುವುದು ಇದೇ ಲೈಂಗಿಕ ವಿಚಾರಕ್ಕೆ ಅನ್ನೋದು ಕೂಡ ಸತ್ಯ. ಲೈಂಗಿಕ ಸಮಸ್ಯೆಯಿಂದ ಬಳಲ್ತಿದ್ದ ಟೆಕ್ಕಿ, ಹತ್ತಾರು ಕಡೆ ಔಷಧಿ ಪಡೆದಿದ್ದ. ಆದರೆ ಎಲ್ಲೂ ಆತನ ಪರಿಹಾರ ಸಿಕ್ಕಿರಲಿಲ್ಲ. ಟೆಕ್ಕಿ ತೇಜಸ್, ಬೆಂಗಳೂರಿನ ಕೆಂಗೇರಿಯ ಸನೈರಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದರು. ಒಂದು ದಿನ ಆಸ್ಪತ್ರೆಗೆ ಹೋಗಿ ಬರುವಾಗ ದಾರಿ ಪಕ್ಕದಲ್ಲಿ ಟೆಂಟ್ ಹಾಕೊಂಡು ಕಾಯುತ್ತ ಕೂಲಿತಿದ್ದ ಗುರೂಜಿಯ ಜಾಹೀರಾತು ಕಣ್ಣಿಗೆ ಬಿದ್ದಿತ್ತು.
ನಿಮ್ಮ ಲೈಂಗಿಕ ಸಮಸ್ಯೆಗೆ ನಾವು ಪರಿಹಾರ ಕೊಡ್ತೀವಿ. ಒಂದೇ ಒಂದು ಹನಿ ತೈಲ ನಿಮ್ಮ ಬದುಕನ್ನೇ ಬದಲಿಸುತ್ತೆ ಅಂತಾ ಅಡ್ವರ್ಟೈಸ್ಮೆಂಟ್ ಅಂಟಿಸಿದ್ದ. ಇದನ್ನ ನೋಡ್ತಿದ್ದಂತೆ ರಸ್ತೆ ಪಕ್ಕದಲ್ಲಿದ್ದ ಟೆಂಟ್ ಕಣ್ಣಿಗೆ ಬಿದ್ದಿತ್ತು. ಆಯುರ್ವೇದ ಚಿಕಿತ್ಸೆ ಅಲ್ವಾ..? ಒಂದು ಸಾರಿ ಟ್ರೈ ಮಾಡೋಣ ಅಂತಾ ಟೆಂಟ್ ಒಳಗೆ ಎಂಟ್ರಿ ಕೊಟ್ಟಿದ್ದರು ತೇಜಸ್. ವಿಜಯ್ ಗುರೂಜಿ ಅನ್ನೋ ಈತ ಮಾತಲ್ಲೇ ಮರಳು ಮಾಡಿ, ಮಾತಲ್ಲೇ ಕಾಮಲೋಕವನ್ನು ಒಂದು ರೌಂಡ್ ಹಾಕಿಸಿಬಿಟ್ಟ. ಕುಳಿತಲ್ಲೇ ಪುಳಕಗೊಂಡಿದ್ದ ತೇಜಸ್ಗೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತಾಗಿತ್ತು. ನರನಾಡಿಗಳು ಬಿಗಿಗೊಂಡು ಆತ ಹೇಳಿದಷ್ಟು ಹಣ ಕೊಡುವುದಕ್ಕೆ ಸಜ್ಜಾಗಿದ್ದ. ಲೈಂಗಿಕ ಸಮಸ್ಯೆ ಅಂತಿದ್ದಂತೆ ತೈಲದ ರುಚಿ ತೋರಿಸೋದಕ್ಕೆ ಶುರು ಮಾಡಿದ್ದ ವಿಜಯ್ ಗುರೂಜಿ.

ಅನ್ನ ಹಳಸಿತ್ತು.. ನಾಯಿ ಹಸಿದಿತ್ತು ಅನ್ನೋ ರೀತಿ ಆಗಿತ್ತು ಈ ಕೇಸ್. ತೈಲ ಕೊಡೋದಕ್ಕೂ ಮೊದಲು, ಈ ಮನೆಹಾಳು ಗುರೂಜಿ ಷರತ್ತು ಹಾಕಿದ್ನಂತೆ. ಆನ್ಲೈನ್ ಪೇಮೆಂಟ್ ಮಾಡಬಾರದು, ಒಬ್ಬರೇ ಏಕಾಂಗಿಯಾಗಿ ಬಂದು ಔಷಧಿ ತೆಗೆದುಕೊಳ್ಳಬೇಕು ಅಂತಾನು ಹೇಳಿದ್ನಂತೆ. ಈತನ ಮಾತು ನಂಬ್ಕೊಂಡು ಲಕ್ಷ ಲಕ್ಷ ಹಣ ಸುರಿದ ತೇಜಸ್. ಮೊದಲು ದೇವರಾಜ್ ಬೂಟಿ ತೈಲ ಆಮೇಲೆ ಭವನ ಬೂಟಿ ತೈಲ. ಆ ತೈಲ ಈ ತೈಲ ಅಂತಾ ಲಕ್ಷದ ಮೇಲೆ ಲಕ್ಷ ಪೀಕೋದಕ್ಕೆ ಶುರು ಮಾಡಿದ್ದ. ಕೂಡಿಟ್ಟ ಕಾಸೆಲ್ಲಾ ತೈಲದ ಬಾವಿಗೆ ತುಂಬಿದ್ದಾಯ್ತು. ಕೊನೆಗೆ ಬ್ಯಾಂಕ್ನಲ್ಲಿ 20 ಲಕ್ಷ ಲೋನ್ ಕೂಡ ಮಾಡಿ ಕೊಟ್ಟಿದ್ದೂ ಆಯ್ತು. ಹೀಗೆ 48 ಲಕ್ಷ ಹಣ ಪೀಕಿದರೂ ಲೈಂಗಿಕ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿರಲಿಲ್ಲ. ಗುರೂಜಿಯನ್ನು ಪ್ರಶ್ನೆ ಮಾಡಿದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವಂತೆ ಮಾಡ್ತೀನಿ ಅಂತಾ ಬೆದರಿಕೆ ಹಾಕಿದ್ನಂತೆ.
ಆ ಬಳಿಕ ತೇಜಸ್ ಆರೋಗ್ಯದಲ್ಲಿ ಸಣ್ಣದಾಗಿ ಸಮಸ್ಯೆಗಳು ಕಾಡೋದಕ್ಕೆ ಶುರುವಾಗಿತ್ತು. ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿದಾಗ ಗುರೂಜಿ ಕೊಟ್ಟ ಆಯುರ್ವೇದ ಔಷಧಿಯಿಂದ ಕಿಡ್ನಿಗೆ ಸಮಸ್ಯೆಯಾಗಿದೆ ಅಂತಾ ವೈದ್ಯರು ಹೇಳಿದ್ದರು. ದಿಕ್ಕು ಕಾಣದಂತಾದ ತೇಜಸ್, ವಿಜಯ್ ಗೂರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದಿಕ್ ಟೆಂಟ್ ವಿರುದ್ಧ ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಮದ ಆಸೆಗೆ ಬಿದ್ದು 48 ಲಕ್ಷ ಹಣ ಕಳೆದುಕೊಂಡಿದ್ದೂ ಅಲ್ಲದೆ ಕಿಡ್ನಿಯೂ ಸಂಕಷ್ಟಕ್ಕೆ ಸಿಲುಕಿದೆ. ಮನುಷ್ಯನಲ್ಲಿ ಅಲ್ಲೊಂದು ಇಲ್ಲೊಂದು ಈ ರೀತಿಯ ಸಮಸ್ಯೆಗಳು ಸಾಕಷ್ಟು ಜನರಿಗೆ ಸರ್ವೇ ಸಾಮಾನ್ಯ. ಆದರೆ ಅದನ್ನು ದೌರ್ಬಲ್ಯ ಎಂದುಕೊಂಡು ಕುಗ್ಗುವ ಬದಲು, ಅದರಿಂದ ಹೊರಬರಲು ಇರುವ ಸುಲಭ ಪರಿಹಾರ ಯಾವುದು..? ಅನ್ನೋದನ್ನು ಹುಡುಕಿಕೊಂಡರೆ ಬದುಕು ಸುಲಭ ಎನ್ನಬಹುದು.


