The Public Spot
ಟ್ರೆಂಡ್

CM, DCM ಕೈಯಲ್ಲಿ 33 ಲಕ್ಷದ ವಾಚ್.. ಕದ್ದಿದ್ದೋ..? ಕೊಂಡಿದ್ದೋ..? ಲೆಕ್ಕ ಕೇಳಿದ ಛಲವಾದಿ..

ರಾಜ್ಯ ರಾಜಕಾರಣದಲ್ಲಿ 2ನೇ ಬಾರಿಗೆ ವಾಚ್​ ವಿಚಾರ ಸದ್ದು ಮಾಡುತ್ತಿದೆ. ಈ ಮೊದಲು ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಹ್ಯೂಬ್ಲೋಟ್​ ವಾಚ್​ ಗಿಫ್ಟ್​ ಪಡೆದಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಕಟ್ಟಿದ್ದ ಒಂದೇ ರೀತಿಯ ಕಾರ್ಟಿಯರ್​ ಕಂಪನಿಯ ವಾಚ್​ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡುವೆ ಇದೀಗ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಒಂದೇ ಕಂಪನಿಯ ಎರಡು ವಾಚ್‌ಗಳನ್ನ ಕಟ್ಟುಕೊಂಡಿರೋದು ಮಾಧ್ಯಮದಲ್ಲಿ ಸುದ್ದಿಯಾಗಿದೆ. ಎಲ್ಲೋ ಕಳ್ಳತನ ಆಗಿದ್ದ ಹ್ಯೂಬ್ಲೋಟ್ ವಾಚನ್ನು ಸಿಎಂಗೆ ಕಳ್ಳರು ಗಿಫ್ಟ್ ಕೊಟ್ಟಿದ್ದರು. ಮಜವಾದಿ ನಾಯಕರು ಅದನ್ನ ಹಾಕಿಕೊಂಡು ಮೆರೆದಿದ್ದೇ ಮೆರೆದಿದ್ದು..! ಕಾಂಗ್ರೆಸ್​ನಲ್ಲಿ ಒಂದು ಸಂಸ್ಕೃತಿ ಇದೆ. ಕದ್ದ ಮಾಲ್‌ನ ವಾಪಸ್ ಕೊಟ್ರೆ ಮುಗೀತು. ATM ಹಣ ಕದ್ದವರನ್ನ ಯಾಕೆ ಅರೆಸ್ಟ್ ಮಾಡಿದ್ರಿ..? ಅವರೂ ಕದ್ದಿದ್ದನ್ನು ವಾಪಸ್​ ಕೊಟ್ಟಿದ್ದಾರಾಲ್ಲ..! ಅವರನ್ನು ಬೀಡಬೇಕಲ್ವಾ..? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಆಗಿತ್ತು. ಈ ಬಗ್ಗೆ ನಾನು ಚುನಾವಣೆಯಲ್ಲಿ ಅಫಿಡವಿಟ್ ಸಲ್ಲಿಸಿದ್ದೇನೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ಅವರು ಕೊಟ್ಟಿರೋ ಅಫಿಡವಿಟ್ ತಂದಿದ್ದೇನೆ. ರೋಲೆಕ್ಸ್, ಹ್ಯೂಬ್ಲೆಟ್ ವಾಚ್ ಎರಡನ್ನ ಮಾತ್ರ ನಮೂದು ಮಾಡಿದ್ದಾರೆ. ಈಗ ಅವರ ಕೈಯಲ್ಲಿ ಇರೋದು ಕಾರ್ಟಿಯಾರ್ ವಾಚ್. ಚುನಾವಣಾ ಆಯೋಗಕ್ಕೆ ಕೊಟ್ಟ ಅಫಿಡವಿಟ್​ನಲ್ಲಿ ಎಲ್ಲಿದೆ..? 46 ರಿಮದ 47 ಲಕ್ಷ ಆಗುತ್ತದೆ ಈ ವಾಚ್​ಗೆ ಎಂದಿರುವ ಛಲವಾದಿ ನಾರಾಯಣಸ್ವಾಮಿ, ಇದು ಕದ್ದ ವಾಚಾ..? ಇಲ್ಲ ಹಣ ಪೇ ಮಾಡಿದ್ದಾ.? ದಾಖಲೆ ಬಿಡುಗಡೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ.

ಕಾರ್ಡಿಯಲ್​ ವಾಚ್​ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಸವಾಲ್ ಹಾಕಿರುವ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರು ವಾಚ್ ಪ್ರಿಯರು. ಅವರು ಹಾಕುವ ಶೂಗಳ ಬೆಲೆಯೂ ಕೂಡ ಲಕ್ಷಾಂತರ ರೂಪಾಯಿ ಆಗಿರುತ್ತದೆ. ಇದರ ಲೆಕ್ಕ ಕೊಡಿ. ಎಲ್ಲರೂ ಕಟ್ಟೋ ವಾಚ್ ಬೇರೆ ಬೇರೆ ಇರಬಹುದು. ಆದ್ರೆ ಅವರ ಸಮಯ ಸರಿ ಇಲ್ಲ. ಒಬ್ಬರು ಬಿಟ್ಟುಕೊಡಬೇಕು, ಒಬ್ಬರು ತಗೋಬೇಕು. ನಾಟಿ ಕೋಳಿ ಸಾರು ಸವಿದಿದ್ದೇ ಸವಿದಿದ್ದು. ವೇಣುಗೋಪಾಲ್, ಸಿದ್ದರಾಮಯ್ಯ ನಿನ್ನೆ ಎಲ್ಲಾ ಚರ್ಚೆ ಮಾಡಿದ್ದಾರೆ. ಜನರಿಗೆ ಇಬ್ಬರೂ ಲೆಕ್ಕ ಕೊಡಬೇಕು. ಈ ವಾಚ್‌ಗಳು ಕೊಂಡ ಮಾಲಾ ಇಲ್ಲ ಕದ್ದ ಮಾಲಾ.? ಇದರ ಬಗ್ಗೆ ತನಿಖೆಗೆ ಕೊಡಿ ಎಂದು ಒತ್ತಾಯ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್​ ಹೇಳಿದ್ರು ಅಫಿಡವಿಟ್​ನಲ್ಲಿ ವಾಚ್ ಬಗ್ಗೆ ನಮೂದು ಮಾಡಿದ್ದೀನಿ ಅಂತ. ಹಾಗಾದ್ರೆ ನಿಮ್ಮ ಅಫಿಡವಿಟ್​ನಲ್ಲಿ ಕಾರ್ಟಿಯರ್ ವಾಚ್ ಬಗ್ಗೆ ಉಲ್ಲೇಖ ಇಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್​ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ ಛಲವಾದಿ ನಾರಾಯಣಸ್ವಾಮಿ. ಚುನಾವಣೆ ಅಫಿಡವಿಟ್​ನಲ್ಲಿ ಎರಡೇ ವಾಚ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾರ್ಟಿಯಾರ್ ವಾಚ್​ಗೆ ಇಂದು 43 ಲಕ್ಷ ರೂಪಾಯಿ ಬೆಲೆ ಇದೆ. ಇದರ ಲೆಕ್ಕ ಕೊಡಿ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಬಳಿ 18 ವಾಚ್​ಗಳು ಇದೆಯಂತೆ. ಸಿದ್ದರಾಮಯ್ಯ ಹಾಕುವ ಒಂದೊಂದು ಶೂ ಬೆಲೆ ಲಕ್ಷ ರೂಪಾಯಿ ಆಗುತ್ತದೆ. ನೀವು ಎಷ್ಟಾದರೂ ವಾಚ್ ಹಾಕಿ ಆದರೆ ಜನರಿಗೆ ಲೆಕ್ಕ ಕೊಡಿ ಅಷ್ಟೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಕಾರ್ಟಿಯರ್ ವಾಚ್ ಧರಿಸಿದ್ದಕ್ಕೆ ಛಲವಾದಿ ನಾರಾಯಣಸ್ವಾಮಿ ಟೀಕೆ ಮಾಡಿ, ಚುನಾವಣಾ ಅಫಿಡವಿಟ್ ಪ್ರದರ್ಶಿಸಿದ್ದಾರೆ. ಡಿ.ಕೆ ಶಿವಕುಮಾರ್​ ಬಳಿ ಎರಡೇ ವಾಚ್ ಇರೋದು ಅಂತ ಅಫಿಡವಿಟ್‌ನಲ್ಲಿದೆ. ಅದರಲ್ಲಿ ಒಂದು ಹ್ಯೂಬ್ಲೋಟ್ ವಾಚ್ ಇನ್ನೊಂದು ರೊಲೆಕ್ಸ್ ವಾಚ್​. ಇವೆರಡರ ದರ ಎಷ್ಟು ಅಂತೆಲ್ಲ ಅಫಿಡವಿಟ್​ನಲ್ಲಿದೆ. ಹಾಗಾದ್ರೆ ಈಗ ಹಾಕಿರುವ ಕಾರ್ಟಿಯರ್ ವಾಚ್ ಯಾವುದು..? ಎಲ್ಲಿಯದು..? ಈ ಮೂರನೇಯ ವಾಚ್ ಯಾರು ಕೊಟ್ರು..? ಕಾರ್ಟಿಯರ್ ವಾಚ್ ಯಾರೋ ಕದ್ದು ಕೊಟ್ಟಿದ್ದಾ..? ಖರೀದಿಸಿದ್ದಾ..? ಖರೀದಿಸಿದ್ರೆ ಬಿಲ್ ತೋರಿಸಿ ಎಂದು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ವಾಚ್ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದ್ದಾರೆ. ನನ್ನ ಅಫಿಡವಿಟ್ ನನಗೆ ಗೊತ್ತು. ನಾನು ವಾಚ್ ಖರೀದಿ ಮಾಡಿದ್ದನ್ನ ಅಫಿಡವಿಟ್‌ನಲ್ಲಿ ತೋರಿಸಿದ್ದೇನೆ. ಅವನಿಗೇನ್ ಗೊತ್ತು, ನನ್ನ ಅಫಿಡವಿಟ್..? ನಾನು ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದ್ದನ್ನು ತೋರಿಸಿದ್ದೇನೆ. ಛಲವಾದಿಗೆ ಏನ್ ಗೊತ್ತು..? ಎಂದು ಪ್ರಶ್ನಿಸಿದ್ದಾರೆ. ಇನ್ನು ವಾಚ್​ ಕದ್ದಿದ್ದಾ..? ಅನ್ನೋ ಮಾತಿಗೆ ತಿರುಗೇಟು ನೀಡಿದ್ದು, ಹೌದು, ನಾನು ಅವರ ಮನೆಯಿಂದ ವಾಚ್ ಕದ್ದಿದ್ದೇನೆ ಎಂದು ವ್ಯಂಗ್ಯಭರಿತ ಮಾತುಗಳಲ್ಲಿ ಡಿ.ಕೆ ಶಿವಕುಮಾರ್​ ಉತ್ತರಿಸಿದ್ದಾರೆ.

ಅಫಿಡವಿಟ್​ನಲ್ಲಿ ವಾಚ್ ಬಗ್ಗೆ ಮಾಹಿತಿ ಹಾಕಿಲ್ಲ ಎಂದ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಯಾರು ಹೇಳಿದ್ದು..? ಅವರಿಗೆ ಏನು ಗೊತ್ತು..? ಅವರಿಗೆ ಏನು ಗೊತ್ತು ಅಂತ..? ನನ್ನ ಅಫಿಡವಿಟ್​ ನನಗೆ ಗೊತ್ತು, ನಾನು ಕಾಸ್ ಕೊಟ್ಟಿರೋದು ನನಗೆ ಗೊತ್ತು. ನನ್ನ ಕ್ರೆಡಿಟ್ ಕಾರ್ಡ್ ಬಳಸಿರೋದು ನನಗೆ ಗೊತ್ತು. ಎಲ್ಲ ಗೊತ್ತು, ಅರ್ಥ ಆಯ್ತ..? ನಾನು ಅಷ್ಟು ಪಾರದರ್ಶಕವಾಗಿ ಎಲ್ಲವನ್ನೂ ಹೇಳಿದ್ದೇನೆ. ರೋಲೆಕ್ಸ್ ವಾಚ್ ನನ್ನ ಬಳಿ ಇರೋದು ಹೇಳಿದ್ದೇನೆ. ಈಗ ಕಟ್ಟಿರೋ ವಾಚ್ ಬಗ್ಗೆಯೂ ಹೇಳಿದ್ದೇನೆ, ಅರ್ಥ ಆಯ್ತಾ..?. ನಾನು ನಾರಾಯಣ ಸ್ವಾಮಿ ಹತ್ತಿರ ಕಲಿಯಬೇಕಿರೋದು ಏನು ಇಲ್ಲ ಎಂದಿದ್ದಾರೆ.

ಕಾರ್ಟಿಯರ್​ ವಾಚ್​ ಕದ್ದಿರೋದಾ..? ಎಂಬ ಛಲವಾದಿ ನಾರಾಯಣಸ್ವಾಮಿ ಮಾತಿಗೆ ಅವರ ಮನೆಯಿಂದನೇ ಕದ್ದಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​​ ಹೇಳಿದ್ರೆ, ಕಾರ್ಟಿಯಾರ್ ವಾಚ್‌ ಬಗ್ಗೆ ಲೆಕ್ಕಕೊಡಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಯಾರ್ ಕೇಳಿದ್ದು..? ಎಂದ ಸಿಎಂ ಸಿದ್ದರಾಮಯ್ಯ, ಛಲವಾದಿ ನಾರಾಯಣಸ್ವಾಮಿ ಎಂದ ಕೂಡಲೇ ನಡೀರಿ ನಡೀರಿ ಎಂದು ತೆರಳಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಮಾತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ ಎನ್ನುವಂತೆ ಸಿಎಂ ಸಿದ್ದರಾಮಯ್ಯ, ತಿರಸ್ಕಾರದ ಭಾವನೆ ವ್ಯಕ್ತಪಡಿಸಿದ್ದಾರೆ.

ಆದರೆ ವಿಧಾನಸಭಾ ಚಳಿಗಾಲದ ಅಧಿವೇಶನ ಕೆಲವೇ ದಿನಗಳಲ್ಲಿ ಆರಂಭ ಆಗಲಿದ್ದು, ಕಾಂಗ್ರೆಸ್​ ಪಕ್ಷದ ವಿರುದ್ಧ ಕೆಂಡಕಾರುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್​ಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಇಬ್ಬರ ಬಳಿಯೂ ಒಂದೇ ರೀತಿಯ ವಾಚ್​ ಇರೋ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇದೀಗ ಸಿಎಂ, ಡಿಸಿಎಂ ಇಬ್ಬರೂ ವಾಚ್​ ವಿಚಾರದಿಂದ ಅಂತರ ಕಾಯ್ದುಕೊಂಡು, ಅದೇನು ಮಹತ್ವ ಕೊಡುವ ವಿಚಾರ ಅಲ್ಲ ಎನ್ನುವಂತೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎನ್ನುವಂತೆ ಮಾತನಾಡಿದ್ದಾರೆ. ಆದರೆ ಸಾರ್ವಜನಿಕ ಬದುಕಿನಲ್ಲಿ ಇರುವ ನಾಯಕರ ಬದುಕು ಕೂಡ ಸಾರ್ವಜನಿಕವಾಗಿ ಪಾರದರ್ಶಕವಾಗಿ ಇದ್ದರೆ ಉತ್ತಮ ಅಲ್ಲವೇ..?

Related posts

Elephant; ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಆನೆ ಬದುಕಿದ್ಯಾ..? ಸತ್ತೇ ಹೋಯ್ತಾ..?

Publicspot

ಜೈಲಿನಲ್ಲಿ ಇನ್ಮುಂದೆ ಕೈದಿಗಳಿಗೆ ಸಂಕಷ್ಟ ಫಿಕ್ಸ್​.. ಅಖಾಡಕ್ಕೆ ಖಡಕ್​ ಅಲೋಕ್ ಎಂಟ್ರಿ..​

Publicspot

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot

RSS VS DSS.. ಮತ್ತೆ ಸಂಘದ ವಿರುದ್ಧ ಗುಡುಗಿದ ಪ್ರಿಯಾಂಕ್‌ ಖರ್ಗೆ

Publicspot

ಚಳಿಗಾಲ ವಿಪರೀತ.. ಎಚ್ಚರ ತಪ್ಪಿದ್ರೆ ಹಾರಿ ಹೋಗುತ್ತೆ ಪ್ರಾಣ ಪಕ್ಷಿ.. ಕಾರಣ ಏನು..?

Publicspot

Bike Taxi Start: ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಅಸ್ತು.. ರಸ್ತೆ ಫೈಟ್​ ನಿಲ್ಲಿಸಲಿ ಖಾಕಿಪಡೆ..

Publicspot