ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯಲ್ಲಿ ಅಕ್ರಮ ಒತ್ತುವರಿ ತೆರವು ವಿಚಾರಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆದಿದ್ದು, ಕಾಂಗ್ರೆಸ್ ಸರ್ಕಾರ ಮುಸ್ಲಿಮರು ಅನ್ನೋ ಕಾರಣಕ್ಕೆ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಕನ್ನಡಿಗರೇ ಸಾಕಷ್ಟು ಜನರು ಮನೆಗಳಿಗಾಗಿ ಅರ್ಜಿ ಸಲ್ಲಿಸಿ ಲಕ್ಷ ಲಕ್ಷ ಹಣವನ್ನೂ ಪಾವತಿ ಮಾಡಿದ್ದಾರೆ. ಅವರಿಗೆ ಮನೆ ಹಂಚಿಕೆ ಮಾಡದ ಸರ್ಕಾರ ಕೇರಳದಲ್ಲಿ ರಾಜಕೀಯ ಮಾಡುವ ಉದ್ದೇಶದಿಂದ ಮುಸ್ಲಿಮರ ಮತಗಳನ್ನು ಸೆಳೆಯಲು ಕರ್ನಾಟಕದಲ್ಲಿ ಬಾಂಗ್ಲಾ, ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಬಂದು ಅಕ್ರಮವಾಗಿ ನೆಲೆಸಿರುವ ಅಕ್ರಮ ನುಸುಳುಕೋರರಿಗೆ ಮನೆ ಭಾಗ್ಯ ನೀಡಲು ಮುಂದಾಗಿದೆ ಎಂದು ಖಂಡಿಸಿದ್ದರು.

ಕೋಗಿಲು ಕ್ರಾಸ್ನಲ್ಲಿ ಅಕ್ರಮ ತೆರವು ಮಾಡಿದ ವೇಳೆ ಸ್ಥಳೀಯ ಶಾಸಕರೂ ಹಾಗೂ ಸಚಿವ ಆಗಿರುವ ಕೃಷ್ಣಬೈರೇಗೌಡ ಬೆಂಗಳೂರಿನಲ್ಲಿ ಇರಲಿಲ್ಲ. ಇದೀಗ ಶಾಸಕರು ಮಹತ್ವದ ಸಭೆ ನಡೆಸಿ ಮನೆಗಳ ಹಂಚಿಕೆ ಮಾಡುವ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಯಾರು ಅರ್ಹರಿದ್ದಾರೆ, ಧೀರ್ಘಾವದಿಯಿಂದ ಆ ಸ್ಥಳದಲ್ಲಿ ನೆಲೆಸಿದ್ದಾರೆ, ಅಂತಹ ಅರ್ಹ ಇರುವ ಪಟ್ಟಿ ಸಿದ್ದಪಡಿಸಲು ಹೇಳಿದ್ದೇವೆ. ಎಲ್ಲರ ಪಟ್ಟಿ ಸಿದ್ದಪಡಿಸಲು ಸಮಯ ಬೇಕಾಗುತ್ತೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಹಂತ ಹಂತವಾಗಿ ಮಾಡಲು ಹೇಳಿದ್ದೇವೆ. ಅರ್ಹತೆ ಇರುವವರಿಗೆ ತಕ್ಷಣ ಪುನರ್ವಸತಿ ಮಾಡಿ ಅಂತಾನೂ ಹೇಳಿದ್ದೇವೆ. ಅರ್ಹತೆಯ ಮಾನದಂಡದ ಮೇಲೆಯೇ ಪುನರ್ವಸತಿ ನೀಡಲಾಗುತ್ತದೆ. ಆದರೆ ಮಾಡೋ ಕೆಲಸ ಬೇಗ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ ಎಂದಿದ್ದಾರೆ.

ಕರ್ನಾಟಕದ ಹೊರಗಿನವರು ಇದ್ರೆ ಅವರು ಯಾವಾಗ ಬಂದ್ರು ಅಂತಾ ಪರಿಶೀಲನೆ ಮಾಡ್ತೇವೆ ಎಂದಿರುವ ಸಚಿವ ಕೃಷ್ಣಬೈರೇಗೌಡ, ಬಹಳ ವರ್ಷದಿಂದ ಇದ್ದವರನ್ನ ಮಾತ್ರ ಪರಿಗಣಿಸುತ್ತೇವೆ. ವಸತಿ ಇಲಾಖೆಯ ಕಂಡಿಷನ್ಗೂ ಇವರು ಅರ್ಹತೆ ಇರಬೇಕು. ಅಪ್ಲಿಕೇಶನ್ ಹಾಕಲು ಈಗಲೂ ಅವಕಾಶ ಇದೆ. ಸಿಎಂ ಸಿದ್ದರಾಮಯ್ಯ ಕೆಲವು ತಿರ್ಮಾನ ಮಾಡಿದ್ದಾರೆ. ಅವರ ತೀರ್ಮಾನ ಹೊರತಾಗಿ ಬೇರೆ ತಿರ್ಮಾನ ಇಲ್ಲ. ಹಣಕಾಸಿನ ವಿಚಾರ ಬೇರೆ ಏನೂ ಚರ್ಚೆ ಆಗಿಲ್ಲ. ಮೂರು ದಿನದಲ್ಲಿ ಅರ್ಹತೆ ಇದ್ದವರಿಗೆ ಮನೆ ಕೊಡಲು ನಿರ್ಧಾರ ಮಾಡಿದ್ದೇವೆ. ಮಾನದಂಡವನ್ನ ಕಿಂಚಿತ್ತು ಬದಲಾವಣೆ ಮಾಡಲ್ಲ ಎಂದಿದ್ದಾರೆ. ಅಂದರೆ ಹೊರ ರಾಜ್ಯದವರು ಆಗಿದ್ದರೂ ಮನೆ ಕೊಡುವ ಭರವಸೆ ವ್ಯಕ್ತಪಡಿಸಿದ್ದು, ಎಷ್ಟು ವರ್ಷಗಳಿಂದ ವಾಸವಿದ್ದಾರೆ ಅನ್ನೋದ್ರ ಮೇಲೆ ಪರಿಗಣನೆ ಮಾಡುವುದಾಗಿ ಹೇಳಿದ್ದಾರೆ.
2021ರಲ್ಲಿ ಹೆಚ್ಚು ಅತಿಕ್ರಮಣ ಆಗಿರೋದು ಎಂದಿರುವ ಸಚಿವ ಕೃಷ್ಣಬೈರೇಗೌಡರು, ಆಗ ರಾಜ್ಯದಲ್ಲಿ ಯಾವ ಸರ್ಕಾರ ಇತ್ತು..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬಿಜೆಪಿ ನಾಯಕರು ಈಗ ಬಂದು ನಾಟಕ ಮಾಡ್ತಿದ್ದಾರೆ. ಬಿಜೆಪಿ ಸ್ಫಾನ್ಷರ್ ಶಿಪ್ನಿಂದ ಇದು ಆಗಿರೋದು ಎಂದು ನಾವು ಹೇಳಬಹುದಾ..? ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನು ಅಲ್ಲಿ ಎಲ್ಲಾ ಜಾತಿ ಅವರು ಇದ್ದಾರೆ. ಆದರೆ ನಿಮಗೆ ಒಬ್ಬರೆ ಕಾಣಿಸಬಹುದು. ಆದರೆ ಸರ್ಕಾರಕ್ಕೆ ತಾಯಿ ಹೃದಯ ಇರಬೇಕು. ಧರ್ಮಾಧಾರಿತ ರಹಿತವಾಗಿ ನಾವು ಅರ್ಹರಿಗೆ ಮನೆ ಕೊಡ್ತೇವೆ ಎಂದಿದ್ದಾರೆ. ಇನ್ನು ಬಾಂಗ್ಲಾ ನುಸುಳುಕೋರರು ಎನ್ನುವ ಬಿಜೆಪಿ ಆರೋಪ ತಿರುಗೇಟು ನೀಡಿದ್ದು, ಬಾಂಗ್ಲಾ ನುಸುಳುಕೋರರನ್ನ ಯಾರು ತಡೆಯಬೇಕು..? ಸೆಂಟ್ರಲ್ ಗೌರ್ಮೆಂಟ್ ಏನು ಮಾಡ್ತಿದೆ..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹೊರದೇಶದ ನುಸುಳುಕೋರರನ್ನ ಪತ್ತೆ ಮಾಡೋದು ಹಾಗೂ ನುಸುಳುಕೋರರು ದೇಶದ ಒಳಕ್ಕೆ ಬಾರದಂತೆ ತಡೆಯುವುದು ಕೇಂದ್ರ ಗೃಹ ಇಲಾಖೆ ಕೆಲಸ. ರಾಜ್ಯ ಬಿಜೆಪಿ ನಾಯಕರು, ಅವರ ಕೇಂದ್ರದ ನಾಯಕರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ನುಸುಳುಕೋರರ ಮೇಲೆ ಕ್ರಮ ತೆಗೆದುಕೊಳ್ಳೊದಕ್ಕೆ ಯಾರಾದರೂ ಅಡ್ಡ ಇದ್ದಾರಾ..? ಕೇಂದ್ರ ಗೃಹ ಸಚಿವರು ಯಾಕೆ ಕ್ರಮ ತೆಗೆದುಕೊಳ್ತಿಲ್ಲ ಎಂದು ಕುಟುಕಿದ್ದಾರೆ. ಇನ್ನು ಮನೆ ನೀಡುವ ಬಗ್ಗೆ ಎದುರಾಗಿದ್ದ ಸಾಕಷ್ಟು ಗೊಂದಲಗಳಿಗೆ ಆ ಕ್ಷೇತ್ರದ ಶಾಸಕರು ಆಗಿರುವ ಸಚಿವ ಕೃಷ್ಣಬೈರೇಗೌಡರು ಉತ್ತರ ಕಂಡುಕೊಂಡಿದ್ದಾರೆ. ಎಲ್ಲರಿಗೂ ಶೀಘ್ರವೇ ಮನೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಡುವೆ ಈಗಾಗಲೇ ಹಣ ಪಾವತಿ ಮಾಡಿ ವಸತಿ ಇಲಾಖೆಯಿಂದ ಮನೆಗಾಗಿ ಎದುರು ನೋಡುತ್ತಿರುವ ಜನರು ಪ್ರತಿಭಟನೆ ಮಾಡಿದ್ದಾರೆ.
ಸರ್ಕಾರಿ ಜಾಗ ಒತ್ತುವರಿದಾರರಿಗೆ ಪುನರ್ವಸತಿ ನೀಡುತ್ತಿದ್ದು, ಕೋಗಿಲು ಲೇಔಟ್ ಜನರಿಗೆ ಸಬ್ಸಿಡಿ ಜೊತೆಗೆ ಸರ್ಕಾರದಿಂದಲೇ ಲೋನ್ ವ್ಯವಸ್ಥೆ ಮಾಡಿಕೊಡಲಾಗ್ತಿದೆ. ಇದನ್ನು ಖಂಡಿಸಿ ಬೆಂಗಳೂರು ಮೂಲ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ ಎದುರು ನೂರಾರು ಜನರು ಪ್ರತಿಭಟನೆ ಮಾಡಿದ್ದಾರೆ. ಹೊರ ರಾಜ್ಯದವರಿಗೆ 2.5 ಲಕ್ಷಕ್ಕೆ ಮನೆ ಹಂಚಿಕೆ ಮಾಡುತ್ತಿದ್ದಾರೆ..? ನಾವೆಲ್ಲಾ ಈಗಾಗಲೇ 8 ಲಕ್ಷ ರೂಪಾಯಿ ಹಣ ಕಟ್ಟಿದ್ದೇವೆ, ನಮಗೂ 2.5 ಲಕ್ಷಕ್ಕೆ ಮನೆ ನೀಡಿ ಎಂdಉ ರಾಜೀವ್ ಗಾಂಧಿ ವಸತಿ ನಿಗಮದ ಎಂ.ಡಿ ಪರಶುರಾಮಗೆ ಒತ್ತಾಯ ಮಾಡಿದ್ದಾರೆ. ಜೊತೆಗೆ ಈಗಾಗಲೇ ಹಣ ಕಟ್ಟಿದವರಿಗೆ ಮರುಪಾವತಿ ಮಾಡುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದ್ದಾರೆ. ಸರ್ಕಾರ ಹೊಸ ವರ್ಷದ ದಿನವೇ ಮನೆ ಹಂಚಿಕೆ ಮಾಡುತ್ತೇವೆ ಎಂದಿದ್ದು, ಆದರೆ ದಿನದಿಂದ ದಿನಕ್ಕೆ ಮನೆ ಹಂಚಿಕೆ ವಿಚಾರ ಜಟಿಲವಾಗುತ್ತಲೇ ಸಾಗುತ್ತಿದೆ.


