ಸೋಮವಾರದಿಂದ ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 5ರಷ್ಟು ಏರಿಕೆ ಮಾಡೋದಾಗಿ BMRCL ಘೋಷಿಸಿದೆ. ಈ ವಿಚಾರವಾಗಿ ಬಿಜೆಪಿ ಸಂಸದರು, ಜೆಡಿಎಸ್ ನಾಯಕರು ರಾಜ್ಯ ಸರ್ಕಾರವನ್ನು ಹೊಣೆ ಮಾಡಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಮ್ಮ ಮೆಟ್ರೋ ದರ ನಿಗದಿ ಸಮಿತಿಯ ಆದೇಶ ಪತ್ರ ಮುಂದಿಟ್ಟು, ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಬೊಟ್ಟು ಮಾಡಿದ್ರು. ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ ಎಂದು ರಾಜ್ಯ ನಾಯಕರು ಅಬ್ಬರಿಸಿದರೆ, ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿ ಸಂಸದರು ಹಾಗೂ ಜೆಡಿಎಸ್ ನಾಯಕರು ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರ ಹಾಗೂ BMRCL ಟಿಕೆಟ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಕೆ ಮಾಡಿದ ಬಳಿಕ ಮೆಟ್ರೋ ದರ ಏರಿಕೆ ಸಮಿತಿ ಟಿಕೆಟ್ ದರ ಏರಿಕೆ ಮಾಡಿದೆ. ಇದು ಮೆಟ್ರೋ ಪ್ರಯಾಣಿಕರಿಗೆ ದುಬಾರಿ ಆಗಲಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ ದರ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ಕೇಂದ್ರ ಸರ್ಕಾರ ದರ ಹೆಚ್ಚಿಸಿ ಎಂದು ಎಲ್ಲಿಯೂ ಹೇಳಲ್ಲ. ಸದ್ಯಕ್ಕೆ ನಮ್ಮ ಮನವಿ ಮೇರೆಗೆ ದರ ಪರಿಷ್ಕರಣೆಯನ್ನು ಕೇಂದ್ರ ತಡೆ ಹಿಡಿದಿದ್ದಾರೆ. ಮೌಖಿಕವಾಗಿ ಸೂಚನೆ ಕೊಟ್ಟಿದ್ದಾರೆ. ಸದ್ಯಕ್ಕೆ ಸೋಮವಾರದಿಂದ ದರ ಪರಿಷ್ಕರಣೆ ಆಗಲ್ಲ ಎಂದಿದ್ದಾರೆ ಸಂಸದ ತೇಜಸ್ವಿ ಸೂರ್ಯ. ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ ಸೋಮವಾರದಿಂದ ದರ ಹೆಚ್ಚಳಕ್ಕೆ ಪ್ರಸ್ತಾಪ ಇಟ್ಟಿತ್ತು. ನಾವು ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತಿದ್ದೇವೆ. ಈಗಾಗಲೇ ದೇಶದ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿ ಪಡೆದಿದೆ. ಕೇಂದ್ರ ಸಚಿವ ಮನೋಹರ ಲಾಲ್ ಕಟ್ಟರ್ ಜೊತೆಗೆ ನಾವು ಮಾತಾಡಿದ್ದೇವೆ. ನಗರಾಭಿವೃದ್ಧಿ ಇಲಾಖೆಯ ಸೆಕ್ರೆಟರಿ ಅವರಿಗೆ ತಾತ್ಕಾಲಿಕವಾಗಿ ದರ ಏರಿಕೆಯನ್ನ ನಿಲ್ಲಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ. ಇದು ತಾತ್ಕಾಲಿಕ ಅಷ್ಟೇ. ನಾವು ಯದ್ಧವನ್ನು ಪೂರ್ತಿಯಾಗಿ ಗೆದ್ದಿಲ್ಲ ಎಂದಿದ್ದಾರೆ ತೇಜಸ್ವಿ ಸೂರ್ಯ.

ದೆಹಲಿಯಲ್ಲಿ ₹69, ಚೆನೈನಲ್ಲಿ ₹50 ರೂಪಾಯಿಗೆ ಹೋಗಬಹುದಾದರೆ ಬೆಂಗಳೂರಲ್ಲಿ ಯಾಕೆ 90 ರೂಪಾಯಿ ಕೊಡಬೇಕು ಅನ್ನೋದು ನಮ್ಮ ಪ್ರಶ್ನೆ. ಈಗ ಮತ್ತೊಂದು ದರ ನಿಗದಿ ಕಮಿಟಿ ಮಾಡ್ಬೇಕು. ರಾಜ್ಯ ಸರ್ಕಾರ ನಾಲ್ಕಾರು ಬಾರಿ ಹಿಂದೆ ಪತ್ರ ಬರೆದಿದ್ರು, ದರ ನಿಗದಿ ಕಮಿಟಿ ರಚಿಸಲು ಪತ್ರ ಬರೆದಿದ್ರು. ದರ ನಿಗದಿ ಕಮಿಟಿಯಲ್ಲಿ ಪ್ರತಿ ವರ್ಷ ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಮನವಿ ಮಾಡಿದ್ರು. ನಾನು ಹೈಕೋರ್ಟ್ನಲ್ಲಿ ಕೇಸ್ ಹಾಕಿದ್ದೆ. ಫೇರ್ ಫಿಕ್ಸೇಷನ್ ಕಮಿಟಿ ಯಾಕೆ ಮುಚ್ಚಿಟ್ಟಿದ್ರು. ಇವರ ವಾದ ಮುಚ್ಚಿಡಲು ಹೀಗೆ ಮಾಡಿದ್ರು. ರಾಜ್ಯ ಸರ್ಕಾರ ಹೊಸ ಫೇರ್ ಫಿಕ್ಸೇಷನ್ ಕಮಿಟಿ ರಚಿಸಿಲು ಪತ್ರ ಬರೆದ್ರೆ, ನಾವು ಅದನ್ನ ಪರಿಗಣಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈಗ ಸಿಎಂ ಮತ್ತು ಡಿಸಿಎಂ ಅಂಗಳದಲ್ಲಿ ಬಾಲು ಇದೆ. ಈಗ ಒಂದು ಪತ್ರ ಬರೆಯಿರಿ ಎಂದು ಹೇಳಿದ್ದಾರೆ. ಹೊಸದಾಗಿ ಪತ್ರ ಬರೆದರೆ ಹೊಸ ಕಮಿಟಿ ರಚನೆ ಮಾಡ್ತಾರೆ. ಮರು ಪರಿಷ್ಕರಣೆ ಮಾಡಿ ಎಂದು ಪತ್ರ ಬರೆಯಿರಿ. ಪತ್ರ ಬರೆದರೂ ಕಮಿಟಿ ಮಾಡಿಲ್ಲ ಎಂದರೆ ಕೇಂದ್ರ ಸರ್ಕಾರದ ತಪ್ಪು . ರಾಜ್ಯ ಸರ್ಕಾರದಿಂದ ಪತ್ರ ಬರೆದಿಲ್ಲ ಎಂದರೆ ಇವರ ತಪ್ಪು ಎಂದಿದ್ದಾರೆ.
ತೇಜಸ್ವಿ ಸೂರ್ಯ ಹೇಳಿದ್ದಾರೆ. ಆದರೆ ಇನ್ನೂ BMRCLಗೆ ಅಧಿಕೃತ ಆದೇಶ ತಲುಪಿಲ್ಲ. ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ನಾವು ಕೂಡ ಮಾಧ್ಯಮಗಳಲ್ಲಿ ನೋಡಿದ್ದೇವೆ. ಆದರೆ ಮ್ಯಾನೇಜ್ಮೆಂಟ್ ಕಡೆಯಿಂದ ಇನ್ನೂ ಆದೇಶ ಬಂದಿಲ್ಲ. ದರ ಏರಿಕೆ ವಿಚಾರಕ್ಕೆ ಏನು ನಿರ್ಧಾರ ಮಾಡಿದ್ದಾರೆ ಗೊತ್ತಿಲ್ಲ. ತಡೆಹಿಡಿಯಲು ಆದೇಶ ಮಾಡಿದರೆ ದರ ಏರಿಕೆ ಮಾಡಲ್ಲ. ಮತ್ತೆ ಮರು ಪರಿಷ್ಕರಣೆ ಮಾಡಲು ಸೂಚನೆ ಮಾಡಿದ್ರೇ ಮಾಡ್ತೇವೆ ಎಂದಿದ್ದಾರೆ. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತ್ರ, ಸರ್ಕಾರದಿಂದ ಪತ್ರ ಬರೆಯುವ ಮುನ್ನ ಮೊದಲು ಬಿಜೆಪಿ ಸಂಸದರ ದರ ಏರಿಕೆಗೆ ನಮ್ಮ ವಿರೋಧವಿದೆ ಎಂದು ಕೇಂದ್ರಕ್ಕೆ ಪತ್ರ ಬರೆಯಲಿ. ಅದೇ ಪತ್ರವನ್ನು ನಮಗೂ ಕಳಿಸಿಕೊಡಲಿ, ಆಗ ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದಿದ್ದಾರೆ. ಸದ್ಯದ ಮಾಹಿತಿ ನೋಡಿದ್ರೆ ದರ ಏರಿಕೆ ಮಾಡೋದು ಕೇಂದ್ರ ಸರ್ಕಾರವೇ ಅನ್ನೋದು ಸತ್ಯ. ಆದರೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದು, BMRCL ಹಾಗೂ ರಾಜ್ಯ ಸರ್ಕಾರ ಅನ್ನೋದು ಸ್ಪಷ್ಟವಾಗಿದೆ. ದರ ಏರಿಕೆ ತಡೆಯುವುದು ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ಇಚ್ಛೆ ಇದ್ದಂತೆ ಕಾಣ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ದೂರುತ್ತ ಕಾಲ ಹರಣ ಮಾಡಿ ದರ ಏರಿಕೆ ಮಾಡೋದು ಶತಸಿದ್ಧ ಎನ್ನಬಹುದು.


